ಬಂಟ್ವಾಳ, ಆಗಸ್ಟ್ 27, 2026 (ಕರಾವಳಿ ಟೈಮ್ಸ್) : ಇಲ್ಲಿನ ತಾಲೂಕು ಕಚೇರಿಯಿಂದ ವರ್ಗಾವಣೆಗೊಂಡ ಅಧಿಕಾರಿಯೋರ್ವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಕಚೇರಿ ಸಮಯಲ್ಲೇ ಏರ್ಪಡಿಸಿದ ಹಿನ್ನಲೆಯಲ್ಲಿ ಆಗಸ್ಟ್ 27 ರಂದು ಗುರುವಾರ ತಾಲೂಕು ಕಚೇರಿಯ ಭೂಮಿ ಶಾಖೆಯಲ್ಲಿ ಅಧಿಕಾರಿ-ಸಿಬ್ಬಂದಿ ಇಲ್ಲದೆ ಜನ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡು ಬಂತು.
ಭೂಮಿ ಶಾಖೆಯಲ್ಲಿ ಸಾರ್ವಜನಿಕರ ಭೇಟಿಗೆ ಅಪರಾಹ್ನ 3 ಗಂಟೆ ಸಮಯ ನಿಗದಿಪಡಿಸಿದ ಹಿನ್ನಲೆಯಲ್ಲಿ ಗುರುವಾರ ಸಾರ್ವಜನಿಕರು ತಮ್ಮ ಅಗತ್ಯ ಕೆಲಸಕ್ಕಾಗಿ ಕಚೇರಿಗೆ ಬಂದರೆ ಅಲ್ಲಿ ಕಚೇರಿ ಖಾಲಿ ಖಾಲಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡಾಗ ಅಧಿಕಾರಿಯೋರ್ವರ ಬೀಳ್ಕೊಡುಗೆ ಸಮಾರಂಭ ನಡೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲರೂ ಅಲ್ಲಿಗೆ ತೆರಳಿರುವ ಬಗ್ಗೆ ತಿಳಿದು ಬಂದಿದೆ. ಕಚೇರಿ ಸಮಯದಲ್ಲಿ ಬೀಳ್ಕೊಡುಗೆಯಂತಹ ಅನವಶ್ಯಕ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರ ಕೆಲಸ ವಿಳಂಬವಾದ ಹಿನ್ನಲೆಯಲ್ಲಿ ಜನ ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಾಸಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅದೇ ರೀತಿ ತಾಲೂಕು ಕಚೇರಿಯ ಜನನ-ಮರಣ ಪ್ರಮಾಣ ಪತ್ರ ನೀಡುವ ಕಚೇರಿ ಸಂಪೂರ್ಣವಾಗಿ ಬಾಗಿಲು ಹಾಕಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಜನನ-ಮರಣ ಪ್ರಮಾಣ ಪತ್ರ ನೀಡುವ ಕಚೇರಿ ಸದಾ ಅವ್ಯವಸ್ಥೆಯಿಂದಲೇ ಕೂಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಆದರೂ ಇಲ್ಲಿ ಪ್ರಮಾಣ ಪತ್ರ ಲಭ್ಯ ಆಗುವುದಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಕಚೇರಿಗೆ ತೆರಳಿದರೆ ಇಲ್ಲಿ ಅಧಿಕೃತ ಅಧಿಕಾರಿ-ಸಿಬ್ಬಂದಿಗಳೇ ಇರುವುದಿಲ್ಲ. ಯಾರೋ ಒಬ್ಬರು ಹುದ್ದೆಯೇ ಇಲ್ಲದ ವ್ಯಕ್ತಿ ಇಲ್ಲಿ ಎಲ್ಲವನ್ನೂ ನಿಭಾಯಿಸುತ್ತಿದ್ದು, ಜನರ ಪ್ರಶ್ನೆಗಳಿಗೆ ಸಮರ್ಪಕ ಉತ್ತರವೂ ದೊರೆಯುತ್ತಿಲ್ಲ, ಪ್ರಮಾಣ ಪತ್ರಗಳೂ ಸಕಾಲದಲ್ಲಿ ದೊರೆಯುತ್ತಿಲ್ಲ. ಜನ ಈ ಒಂದು ಕೆಲಸಕ್ಕಾಗಿ ಹಲವು ಬಾರಿ ಕಚೇರಿಗೆ ಧಾವಿಸಿದರೂ ದಾಖಲೆ ಸಿಗದೆ ಸಮಯ, ಹಣ, ಶ್ರಮ ಎಲ್ಲವನ್ನೂ ವ್ಯರ್ಥ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಕಚೇರಿಗೆ ಬರುತ್ತಿರುವ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವು ಬಾರಿ ಲೋಕಾಯುಕ್ತ ದಾಳಿಯಿಂದ ಸುದ್ದಿಯಾಗಿರುವ ಬಂಟ್ವಾಳ ತಾಲೂಕು ಕಚೇರಿಯ ಅವ್ಯವಸ್ಥೆಯ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ ಜನಸ್ನೇಹಿಯಾಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಾಲೂಕಿನ ಜನ ಆಗ್ರಹಿಸಿದ್ದಾರೆ.
























0 comments:
Post a Comment