ಮಸೀದಿ ಧರ್ಮಗುರು ಹತ್ಯೆಗೆ ಬಂದಿದ್ದೇನೆ.. ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದ ಆರೋಪಿ
ಬಂಟ್ವಾಳ, ಮಾರ್ಚ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಮಿತ್ತಬೈಲು ಕೇಂದ್ರವಾಗಿರುವ ಮುಹಿಯುದ್ದೀನ್ ಜುಮಾ ಮಸೀದಿಗೆ ಮಂಗಳವಾರ ತಡರಾತ್ರಿ ಬಾಬು ಪೂಜಾರಿ (60) ಎಂಬಾತ ಅಕ್ರಮ ಪ್ರವೇಶ ಮಾಡಿ ಮಸೀದಿ ಧರ್ಮಗುರುಗಳನ್ನು ಹತ್ಯೆ ಮಾಡಲು ಬಂದಿರುವುದಾಗಿ ತಿಳಿಸಿದ ಹಿನ್ನಲೆಯಲ್ಲಿ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ಬಿ ಮೂಡ ಗ್ರಾಮದ ಮದ್ದ ನಿವಾಸಿ ಅಬ್ದುಲ್ ಸಲಾಂ ಬಿನ್ ಹುಸೈನ್ ಅವರು ಬಂಟ್ವಾಳ ನಗರ ಠಾಣೆಗೆ ಫಿರ್ಯಾದಿ ಸಲ್ಲಿಸಿದ್ದು, ಮಂಗಳವಾರ (ಮಾರ್ಚ್ 1) ರಾತ್ರಿ ಸುಮಾರು 10.05 ರ ವೇಳೆಗೆ ಗಂಟೆಗೆ ಬಿ ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ಮಿತ್ತ ಬೈಲ್ ವಠಾರದಲ್ಲಿ ಕೆ ಎ 19 ಇ ಎಲ್ 5352 ದ್ವಿಚಕ್ರ ವಾಹನದ ಸವಾರ ವಾಹನವನ್ನಿಟ್ಟು ಮಸೀದಿಯೊಳಗೆ ಅಕ್ರಮವಾಗಿ ನುಗ್ಗಿ, ಗುರುಗಳನ್ನು ವಿಚಾರಿಸಿದ್ದು ಇದನ್ನು ನೋಡಿದ ಸಲಾಂ ಅವರು ನೀನು ಯಾಕೆ ಇಲ್ಲಿಗೆ ಬಂದಿದ್ದಿಯ ಎಂದು ವಿಚಾರಿಸಿದಾಗ ನಾನು ಮಸೀದಿಯ ಗುರುಗಳನ್ನು ಹತ್ಯೆ ಮಾಡಲು ಬಂದಿದ್ದು, ಹತ್ಯೆ ಮಾಡುತ್ತೇನೆ ನನ್ನನ್ನು ನೀವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿರುತ್ತಾನೆ ಅವನ ದ್ವಿಚಕ್ರ ವಾಹನವನ್ನು ಪರೀಶೀಲಿಸಿದಾಗ ಅದರಲ್ಲಿ ಚಾಕು ಸಿಕ್ಕಿರುತ್ತದೆ.
ತಕ್ಷಣ ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ವಿಷಯ ತಿಳಿದ ಹಿನ್ನಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಮಸೀದಿಗೆ ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಆರೋಪಿಯನ್ನು ಕೂಲಂಕೂಷವಾಗಿ ವಿಚಾರಿಸಿ ಕಾನೂನು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಮಸೀದಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸಲಾಂ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2022 ಕಲಂ 448, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ವ್ಯಾಪಕ ಆಕ್ರೋಶ
ಬಿ ಸಿ ರೋಡು ನಗರದ ಹೃದಯ ಭಾಗದ ಅನತಿ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕೇಂದ್ರ ಮಸೀದಿಗೆ ಆರೋಪಿ ರಾತ್ರಿ ವೇಳೆ ಯಾವುದೇ ಕಾನೂನಿನ ಭಯವಿಲ್ಲದೆ ಮಾರಕಾಯುಧ ಸಹಿತ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಮಸೀದಿ ಧರ್ಮ ಗುರುವಿನ ಹತ್ಯೆ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಆರೋಪಿ ಯಾವುದೋ ಪ್ರಚೋದನೆಗೊಳಗಾಗಿ ಈ ಕೃತ್ಯಕ್ಕೆ ಮುಂದಾಗಿರುವ ಸಾಧ್ಯತೆ ಇದ್ದು, ಕೃತ್ಯದ ಹಿಂದೆ ಕಾಣದ ಕೈಗಳ ಪ್ರಚೋದನೆ ಇರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment