ಬಂಟ್ವಾಳ, ನ. 07, 2020 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಮೆಲ್ಕಾರ್-ಗುಡ್ಡೆಅಂಗಡಿ ಕಿರು ಸೇತುವೆ ಬಳಿ ಅ 24 ರಂದು ನಡೆದ ಕಲ್ಲಡ್ಕ ನಿವಾಸಿ ಚೆನ್ನ ಫಾರೂಕ್ @ ಉಮ್ಮರ್ ಫಾರೂಕ್ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಮೂವರು ಆರೋಪಿಗಳಾದ ಹಫೀಝ್ ಯಾನೆ ಅಪ್ಪಿ ಹಾಗೂ ಇರ್ಶಾದ್ ಎಂಬವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಖಲೀಲ್ ಯಾನೆ ಇಬ್ರಾಹಿಂ ಖಲೀಲ್ ಎಂಬಾತ ಪೊಲೀಸರಿಂದ ಬಂಧನಕ್ಕೊಳಗಾಗುವ ಸಂದರ್ಭ ದಾಳಿ ನಡೆಸಿದ್ದು, ಈತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸುವ ವೇಳೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಈತ ಶುಕ್ರವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಅ 23 ರಂದು ಸಂಜೆ ಗುಡ್ಡೆಅಂಗಡಿಯಲ್ಲಿ ಚೆನ್ನ ಫಾರೂಕ್ ಸಂಚರಿಸುತ್ತಿದ್ದ ಮೋಟಾರು ಸೈಕಲಿಗೆ ಕಾರಿನಲ್ಲಿ ಬಂದ ಇಬ್ರಾಹಿಂ ಖಲೀಲ್ ಮತ್ತು ಹಫೀಸ್ @ ಅಪ್ಪಿ ಅವರುಗಳು ಡಿಕ್ಕಿ ಹೊಡೆದು ಕೈಯಲ್ಲಿದ್ದ ತಲವಾರು ಮತ್ತು ಚೂರಿಯಿಂಧ ಅಟ್ಟಾಡಿಸಿಕೊಂಡು ಕೊಚ್ಚಿ ಕೊಲೆ ಮಾಡಿದ್ದರು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಪ್ರಕರಣದ ಆರೋಪಿಗಳಾದ ಇಬ್ರಾಹಿಂ ಖಲೀಲ್, ಹಫೀಸ್ @ ಅಪ್ಪಿ ಮತ್ತು ಇರ್ಷಾದ್ ಅವರುಗಳು ಸೆ 24 ರಂದು ಬೆಳ್ತಂಗಡಿ ತಾಲ್ಲೂಕಿನ ರೆಖ್ಯಾ ಎಂಬಲ್ಲಿ ಪೊಲೀಸರು ದಸ್ತಗಿರಿ ಮಾಡುವ ಸಂದರ್ಭ ಪೊಲೀಸರ ಮೇಲೆ ದಾಳಿ ಮಾಡಿ ಹಫೀಸ್ @ ಅಪ್ಪಿ ಮತ್ತು ಇರ್ಷಾದ್ ಪರಾರಿಯಾಗಿದ್ದು, ಈ ಸಮಯ ಕರ್ತವ್ಯದಲ್ಲಿದ್ದ ಬಂಟ್ವಾಳ ಗ್ರಾಮಾಂತರ ಪಿ ಎಸ್ ಐ ಪ್ರಸನ್ನ ಅವರಿಗೆ ಮತ್ತು ಆರೋಪಿ ಖಲೀಲ್ ಗೆ ಗಾಯವಾಗಿತ್ತು. ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪತ್ತೆಗೆ ತಂಡ ರಚಿಸಿ, ನ 5 ರಂದು ಖಚಿತ ಮಾಹಿತಿ ಆಧಾರದಲ್ಲಿ ಆರೋಪಿಗಳಾದ ಹಫೀಸ್ @ ಅಪ್ಪಿ, ಮತ್ತು ಇರ್ಷಾದ್ ರವರುಗಳನ್ನು ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿರುತ್ತದೆ ಎಂದು ಜಿಲ್ಲಾ ಎಸ್ಪಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment