ಬಂಟ್ವಾಳ, ಜೂನ್ 26, 2021 (ಕರಾವಳಿ ಟೈಮ್ಸ್) : ಕೊರೋನಾ ಹಾಗೂ ಲಾಕ್ ಡೌನ್ ಮಧ್ಯೆಯೂ ಅಕ್ರಮ ವ್ಯವಹಾರಗಳು ಅಧಿಕಾರಿಗಳ ಕಣ್ಣು ತಪ್ಪಿಸಿ ಎಗ್ಗಿಲ್ಲದೆ ಸಾಗುತ್ತಲೇ ಇದೆ. ಶುಕ್ರವಾರವಷ್ಟೆ ಅರಣ್ಯಾಧಿಕಾರಿಗಳು ಅಕ್ರಮ ಗಂಧದ ಮರ ಕಡಿದು ಮಾರಾಟ ಹಾಗೂ ಪ್ರಾಣಿ ಬೇಟೆ ಪ್ರಕರಣ ಬೇಧಿಸಿದ್ದು, ಇದರ ಬೆನ್ನಲ್ಲೇ ಮಧ್ಯರಾತ್ರಿ ವೇಳೆಗೆ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ನಡೆಯಲಾಗುತ್ತಿದ್ದ ಅಕ್ರಮ ಮರಳು ಅಡ್ಡೆಗೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್ ಆರ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆದಿಸಿದೆ.
ನದಿಯಲ್ಲಿ ಕಳೆದ ಕೆಲ ದಿನಗಳಿಂದ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ರಶ್ಮಿ ಅವರು ಕಂದಾಯ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖಾಧಿಕಾರಿಗಳ ಜೊತೆಗೂಡಿ ಶುಕ್ರವಾರ ಮಧ್ಯರಾತ್ರಿ ವೇಳೆಗೆ ರಹಸ್ಯವಾಗಿ ಈ ಜಂಟಿ ದಾಳಿ ಸಂಘಟಿಸಿದ್ದಾರೆ.
ಅಧಿಕಾರಿಗಳ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ಮರಳುಗಾರಿಕೆಗೆ ಬಳಸುವ ಎರಡು ಬೋಟ್ ಹಾಗೂ ಟಿಪ್ಪರ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಸಮೀಪದಲ್ಲೇ ಸರಕಾರಿ ಜಮೀನಿನಲ್ಲಿ ಆರೋಪಿಗಳು ಈ ಅಕ್ರಮ ಮರಳು ಅಡ್ಡೆ ನಿರ್ಮಿಸಿದ್ದು, ಮೊದಲೇ ಅಪಾಯದ ಅಂಚಿನಲ್ಲಿರುವ ಈ ಸೇತುವೆಯ ಪಾಲಿಗೆ ಮತ್ತಷ್ಟು ಕಂಟಕವಾಗುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು.
ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯಾರಣ್ಯಾಧಿಕಾರಿ ಪ್ರೀತಂ, ಜಿತೇಶ್ ಸಿಬ್ಬಂದಿಗಳಾದ ಬಸವ, ಪ್ರವೀಣ್, ಗ್ರಾಮ ಕರಣಿಕರಾದ ಜನಾರ್ದನ, ಧರ್ಮ, ನಾಗರಾಜ್, ಚಾಲಕ ಶಿವಪ್ರಸಾದ್ ಹಾಗೂ ಬಂಟ್ವಾಳ ನಗರ ಠಾಣೆಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment