ಬಂಟ್ವಾಳ, ಅಕ್ಟೋಬರ್ 24, 2023 (ಕರಾವಳಿ ಟೈಮ್ಸ್) : ಬಿಲ್ಡರ್ ಜೊತೆ ಕಾಮಗಾರಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೇ ಬಿಲ್ಡರ್ ಮನೆಯಿಂದ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಪುದು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಪುದು ಗ್ರಾಮದ ನಿವಾಸಿ ಬಿಲ್ಡರ್ ಮೊಹಮ್ಮದ್ ಝಫರುಲ್ಲಾ ಎಂಬವರೇ ತನ್ನ ವಿಶ್ವಸ್ಥ ಸಹಾಯಕನಿಂದ ಲಕ್ಷಾಂತರ ಮೌಲ್ಯದ ನಗ-ನಗದು ಕಳೆದುಕೊಂಡು ಮೋಸ ಹೋದ ವ್ಯಕ್ತಿ. ಆರೋಪಿಯನ್ನು ಕೇರಳ ಮೂಲಕ ಅಲಿ ಎಂದು ಹೆಸರಿಸಲಾಗಿದೆ. ಝಫರುಲ್ಲಾ ಅವರು ಬಿಲ್ಡರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಜೊತೆ ಕಾಮಗಾರಿ ಸಹಾಕನಾಗಿ ಕಳೆದ ಏಳೆಂಟು ತಿಂಗಳಿನಿಂದ ಅಲಿ ಎಂಬಾತನನ್ನು ಜೊತೆಗಿರಿಸಿಕೊಂಡಿದ್ದರು. ಅಲಿಯನ್ನು ಝಫರುಲ್ಲಾ ಹೆಚ್ಚಾಗಿ ವಿಶ್ವಾಸಕ್ಕೆ ಪಡೆದುಕೊಂಡಿದ್ದರಿಂದ ಅ 18 ರಂದು ಝಫರುಲ್ಲಾ ತನ್ನ ಮನೆ ಮಂದಿ ಜೊತೆ ಸಂಬಂಧಿಕರ ಮನೆಗೆ ತೆರಳುವ ಸಂದರ್ಭ ಮನೆಗೆ ಬೀಗ ಹಾಕಿ ಮನೆಯ ಬೀಗದ ಕೀಯನ್ನು ವಿಶ್ವಸ್ಥ ಅಲಿ ಕೈಯಲ್ಲೇ ನೀಡಿ ಹೋಗಿದ್ದರು.
ಅ 23 ರಂದು ವಾಪಾಸು ಮನೆಗೆ ಬಂದ ಝಫರುಲ್ಲಾ ಮನೆಯ ಕೀ ಪಡೆಯಲು ಅಲಿ ಎಂಬಾತನಿಗೆ ಕರೆ ಮಾಡಿದರೂ ಕರೆ ಸ್ವೀಕಾರ ಆಗಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಬಳಿಕ ಝಫರುಲ್ಲಾ ಮನೆಯ ಹೊರಗಡೆಯಿಂದ ಕಿಟಕಿ ಮೂಲಕ ನೋಡಿದಾಗ ಬೆಡ್ ರೂಮಿನಲ್ಲಿದ್ದ ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಇದರಿಂದ ಮನೆಯೊಳಗೆ ತೆರಳಿ ಪರಿಶೀಲನೆ ನಡೆಸಿದಾಗ 27.5 ಲಕ್ಷ ರೂಪಾಯಿ ನಗದು, 4.96 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವಾಗಿರುವುದು ಗಮನಕ್ಕೆ ಬಂದಿದೆ.
ಈ ಬಗ್ಗೆ ಝಫರುಲ್ಲಾ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ನೀಡಿದ ದೂರಿನಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
0 comments:
Post a Comment