ಗೋವಾದಲ್ಲಿ ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಇದರ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೀಟಿಂಗ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್-2025
ಗೋವಾ, ಫೆಬ್ರವರಿ 18, 2025 (ಕರಾವಳಿ ಟೈಮ್ಸ್) : ಪತ್ರಿಕಾ ರಂಗ ಹಾಗೂ ರಾಜಕೀಯ ಕ್ಷೇತ್ರಗಳು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಕ್ಷೇತ್ರಗಳಾಗಿದ್ದು, ಇವೆರೆಡರ ಮೇಲೂ ಜನಸಾಮಾನ್ಯರು ಬಹಳಷ್ಟು ವಿಶ್ವಾಸ ಮತ್ತು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಎರಡೂ ಕ್ಷೇತ್ರದ ಪ್ರತಿನಿಧಿಗಳು ನೆಲದ ಹಿತ ದೃಷ್ಟಿಯಿಂದ ಪರಸ್ಪರ ಸಮ್ವಯತೆ ಸಾಧಿಸಿ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಫೆಬ್ರವರಿ 14 ರಂದು ಗೋವಾ ರಾಜ್ಯದ ಕೋಲ್ವಾದಲ್ಲಿನ ಕೋಲ್ಮಾರ್ ಬೀಚ್ ರೆಸಾರ್ಟೀನ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಇದರ ನ್ಯಾಷನಲ್ ಎಕ್ಸಿಕ್ಯೂಟಿವ್ ಕಮಿಟಿ ಮೀಟಿಂಗ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ -2025 ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಕಾವಲು ಕಾಯುವವರೇ ಪತ್ರಕರ್ತರು. ಅವರ ಕೆಲಸದಲ್ಲಿ ಏರಿಳಿತ ಇರಬಹುದು. ದೇಶದಲ್ಲಿ ಇವತ್ತು ಸಂವಿಧಾನದ ಸತ್ವವನ್ನು ರಕ್ಷಣೆ ಮಾಡಿಕೊಂಡು ಬಂದವರೇ ಮಾಧ್ಯಮ ಮಂದಿಗಳು. ಮಾದ್ಯಮ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರ ನಡುವೆಯೂ ಅನೇಕ ಮಾಧ್ಯಮಗಳು ವೃತ್ತಿ ಪರತೆ ಮರೆಯದೇ ಸಾಗುತ್ತಿರೋದು ಪ್ರಶಂಸಾರ್ಹ. ಪತ್ರಕರ್ತರಿಗೆ ಸಂಬಂಧಪಟ್ಟ ಇಂತಹ ಸಮಾವೇಶಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕು. ಪತ್ರಕರ್ತರಿಗೆ ಸರಕಾರದಿಂದ ಹೆಚ್ಚಿನ ಸಹಕಾರ ಸಿಗುವಂತಾಗಬೇಕು. ಈ ಬಗ್ಗೆ ನಾನು ಗಮನ ಹರಿಸುತ್ತೇನೆ ಎಂದರು.
ಇಳಕಲ್ ಮಠದ ಶ್ರೀ ಮಹಾಂತೇಶ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಇಂಡಿಯನ್ ಜರ್ನಲೀಸ್ಟ್ ಯೂನಿಯನ್ ಅಧ್ಯಕ್ಷ ಕೆ ಪಿ ಪಂಡಿತ್, ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮುರುಗೇಶ್ ಶಿವಪೂಜಿ , ಉಪಾಧ್ಯಕ್ಷ ಸುದೇಶ್ ಕುಮಾರ್ ಭಾಗವಹಿಸಿದ್ದರು.
ರಾಷ್ಟ್ರೀಯ ಸಭೆಯಲ್ಲಿ ಬೇರೆ ಬೇರೆ ರಾಜ್ಯದ ಅಧ್ಯಕ್ಷರುಗಳು ಪತ್ರಿಕಾ ರಂಗದ ಸವಾಲುಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು. ಸುಮಾರು 20 ರಾಜ್ಯಗಳಿಂದ ಬಂದ 250 ಮಂದಿ ಪತ್ರಕರ್ತರು ಪ್ರಿಂಟ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾ ಎಂಬ ವಿಷಯ ದ ಬಗ್ಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ನುರಿತ ಸೀನಿಯರ್ ಜರ್ನಲಿಸ್ಟ್ ಗಳ ಅನುಭವದ ಮಾತುಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು.
ಇದೇ ವೇಳೆ ವೈದ್ಯಕೀಯ (ಕಣ್ಣಿನ) ಕ್ಷೇತ್ರದಲ್ಲಿ ಸಾಧನೆ ಮಾಡಿದ್ದ ಹಿರಿಯ ವೈದ್ಯ ಡಾ ಸುಬ್ಬಣ್ಣ ಶೆಟ್ಟಿ (81) ಅವರಿಗೆ IJU ನ್ಯಾಷನಲ್ ಅಚೀವ್ ಮೆಂಟ್ -2025 ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸನ್ಮಾನಿಸಲಾಯಿತು. ಪ್ರಿಯಾ ಸುದೇಶ್ ಕಾರ್ಯಕ್ರಮ ನಿರೂಪಿಸಿದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್, ಅಂಕಲಿ ಮಠದ ಸ್ವಾಮೀಜಿ, ಗೋವಾ ಕನ್ನಡ ಸಂಘದ ಅಧ್ಯಕ್ಷ ಬಸವರಾಜ್ ಮೇಟಿ ಮೊದಲಾದವರು ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ಹಿರಿಯ ಪತ್ರಕರ್ತರನ್ನು ಗೌರವಿಸಲಾಯಿತು.
0 comments:
Post a Comment