ಬಂಟ್ವಾಳ, ಎಪ್ರಿಲ್ 21, 2025 (ಕರಾವಳಿ ಟೈಮ್ಸ್) : ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಹಿತ ನಗದು ಹಣವನ್ನು ಕಳವುಗೈದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ಭಾನುವಾರ ಸಂಭವಿಸಿದೆ.
ಇಲ್ಲಿನ ನಿವಾಸಿ ಶ್ರೀಮತಿ ವಸಂತಿ ಹೆಗ್ಡೆ (58) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ತಮ್ಮ ಮಗ ಹಾಗೂ ಸೊಸೆಯ ಜೊತೆ ಭಾನುವಾರ ಮಧ್ಯಾಹ್ನ ಮನೆಯಿಂದ ಬೆಳ್ತಂಗಡಿ ತೆರಳಿದ್ದರು. ಸಂಜೆ ಮನೆಗೆ ಮರಳಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಭಾಗದ ಬೀಗದ ಕೊಂಡಿ ಮುರಿದು ಒಳಪ್ರವೇಶಿಸಿದ ಕಳ್ಳರು ಕೋಣೆಯ ಕಪಾಟಿನಲ್ಲಿದ್ದ 13.72 ಲಕ್ಷ ರೂಪಾಯಿ ಮೌಲ್ಯದ 160.5 ಗ್ರಾಂ ಚಿನ್ನಾಭರಣ ಹಾಗೂ 30 ಸಾವಿರ ರೂಪಾಯಿ ನಗದು ಹಣವನ್ನು ಕಳವುಗೈಯಲಾಗಿದೆ. ನಗದು ಸಹಿತ ಕಳವಾದ ಒಟ್ಟು ಸೊತ್ತುಗಳ ಮೌಲ್ಯ 14.02 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವಸಂತಿ ಹೆಗ್ಡೆ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment