ಬಂಟ್ವಾಳ, ಮೇ 19, 2025 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪಾಣೆಮಂಗಳೂರು ಸಮೀಪದ ನೆಹರುನಗರ ಸಾಗರ್ ಅಡಿಟೋರಿಯಂ ಬಳಿ ಭಾನುವಾರ ತಡ ರಾತ್ರಿ ಸಂಭವಿಸಿದೆ.
ಮೃತ ಸ್ಕೂಟರ್ ಸವಾರನನ್ನು ಮಂಗಳೂರು ಮೂಲದ ಅಲಿಸ್ಟರ್ ಡಿಸೋಜ (24) ಎಂದು ಹೆಸರಿಸಲಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಅಂಬಾರಿ ಲಕ್ಸುರಿ ಬಸ್ಸು ವಾಹನವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಈ ಬಗ್ಗೆ ಮೃತ ಅಲಿಸ್ಟರ್ ಡಿ ಸೋಜ ಅವರ ಸ್ನೇಹಿತ ಅರ್ಕುಳ ಗ್ರಾಮದ ಮೇರ್ಲಪದವು ನಿವಾಸಿ, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಆಡಿಯೋಲಾಜಿ ವಿಭಾಗದ ಮೆಡಿಕಲ್ ವಿದ್ಯಾರ್ಥಿ ಲೆಸ್ಲಿ ಎಂಬವರು ಬಂಟ್ವಾಳ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದು, ವಿಟ್ಲ ಸಮೀಪದ ಉಕ್ಕುಡ-ಅಲಂಗಾರ್ ಎಂಬಲ್ಲಿನ ಲೂಸಿ ಪಿಂಟೋ ಅವರ ಮನೆಯ ಗೃಹ ಪ್ರವೇಶ ಕಾರ್ಯಕ್ರಮದ ಔತಣ ಕೂಟ ಮುಗಿಸಿಕೊಂಡು ಇವರು ತನ್ನ ಗೆಳತಿ ರಿಯಾ ಕ್ಯಾಸ್ಟಲಿನೋ ಜೊತೆ ಬೈಕಿನಲ್ಲಿ ಹಾಗೂ ಜೊತೆಯಲ್ಲಿ ಗೆಳೆಯ ಅಲಿಸ್ಟರ್ ಡಿ ಸೋಜ ಆತನ ಸ್ಕೂಟರಿನಲ್ಲಿ ರಾತ್ರಿ 10.30 ಗಂಟೆಗೆ ಅಲ್ಲಿಂದ ವಾಪಾಸ್ಸು ಮನೆಯ ಕಡೆಗೆ ಬರುತ್ತಾ, ಮುಂದಿನಿಂದ ಅಲಿಸ್ಟರ್ ಡಿಸೋಜ ಆತನ ಸ್ಕೂಟರಿನಲ್ಲಿ ಹಾಗೂ ಲೆಸ್ಲಿ ಹಾಗೂ ಗೆಳತಿ ಹಿಂದಿನಿಂದ ಬರುತ್ತಿರುವಾಗ, ರಾತ್ರಿ 11 ಗಂಟೆ ವೇಳೆಗೆ ಪಾಣೆಮಂಗಳೂರು ಗ್ರಾಮದ ನೆಹರೂನಗರದ ಟೀ ಟೈಮ್ ಹೋಟೆಲ್ ಮುಂಭಾಗದ ಬೆಂಗಳೂರು-ಮಂಗಳೂರು ರಾಷ್ರ್ಟೀಯ ಹೆದ್ದಾರಿ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದಂತೆ, ಎದುರು ಭಾಗದಿಂದ ಅಂದರೆ ಬಿ ಸಿ ರೋಡ್ ಕಡೆಯಿಂದ ಶಿವಯ್ಯ ಹೀರೇಮಠ ಎಂಬವರು ಚಲಾಯಿಸಿಕೊಂಡು ಬಂದ ಕೆ ಎಸ್ ಆರ್ ಟಿ ಸಿ ಅಂಬಾರಿ ಬಸ್ಸು ಎದುರುಗಡೆಯಿಂದ ಹೋಗುತ್ತಿದ್ದ ಟೆಂಪೂ ಟ್ರಾವೆಲರ್ ವಾಹನವನ್ನು ಓವರ್ ಟೆಕ್ ಮಾಡಿಕೊಂಡು ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ರಸ್ತೆ ತೀರಾ ಬಲಬದಿಗೆ ಬಂದು ಅಲಿಸ್ಟರ್ ಡಿಸೋಜ ಚಲಾಯಿಸುತ್ತಿದ್ದ ಸ್ಕೂಟರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಲಿಸ್ಟರ್ ಡಿಸೋಜ ಸ್ಕೂಟರಿನಿಂದ ಎಸೆಯಲ್ಪಟ್ಟು ಕಾಂಕ್ರಿಟ್ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಆತನನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಆತ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment