ಬಂಟ್ವಾಳ, ಮೇ 17, 2025 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಜೈನರಪೇಟೆ ಬಸ್ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಪೈಂಟರ್ ಕಾರ್ಮಿಕ ವ್ಯಕ್ತಿಯೋರ್ವರಿಗೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ತಲವಾರು ದಾಳಿ ನಡೆಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಶನಿವಾರ ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಪೊಲೀಸರಿಗೆ ಸೂಚಿಸಿದ್ದಾರೆ.
ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ಬಸ್ಸು ನಿಲ್ದಾಣ ಬಳಿ ಇರುವ ಕ್ಯಾಂಟೀನ್ ಸಮೀಪ ಶುಕ್ರವಾರ ರಾತ್ರಿ ಸ್ಥಳೀಯ ನಿವಾಸಿ, ಪೈಂಟರ್ ಕಾರ್ಮಿಕ ವೃತ್ತಿಯ ಹಮೀದ್ ಯಾನೆ ಅಮ್ಮಿ ಎಂಬವರ ಮೇಲೆ ಈ ತಲವಾರು ದಾಳಿ ಕೃತ್ಯ ಸಂಭವಿಸಿತ್ತು.
ಈ ಬಗ್ಗೆ ಜೈನರಪೇಟೆ ನಿವಾಸಿ ಯಾಸೀರ್ ಅರಾಫತ್ ಎಂಬವರು ಬಂಟ್ವಾಳ ನಗರ ಪೊಲೀಸರಿಗೆ ದೂರು ನೀಡಿದ್ದು, ಅಕ್ಕರಂಗಡಿಯಲ್ಲಿರುವ ಇವರು ಕೆಲಸ ಮಾಡುವ ಕ್ಯಾಂಟೀನಿಗೆ ಬಂದು ಇವರ ಪರಿಚಯದ ಹಾಗೂ ದೂರದ ಸಂಬಂಧಿಯೂ ಆಗಿರುವ ಅಬ್ದುಲ್ ಹಮೀದ್ ಅವರು ತಂಪು ಪಾನೀಯ ಕುಡಿದು ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದಿದ್ದು, ಅವರ ಪೈಕಿ ಓರ್ವ ತಾನು ತಂದಿದ್ದ ತಲವಾರಿನಿಂದ ಹಮೀದ್ ಅವರಿಗೆ ಹಲ್ಲೆ ನಡೆಸಿದ್ದಾನೆ. ತಲವಾರು ಬೀಸಿದ ಪರಿಣಾಮ ಹಮೀದ್ ಅವರ ಎಡಕೈಗೆ ಗಂಭೀರ ಗಾಯವಾಗಿರುತ್ತದೆ. ಗಾಯಗೊಂಡ ಹಮೀದ್ ಅವರು ಬೊಬ್ಬೆ ಹಾಕಿ ಓಡಿದಾಗ ಆರೋಪಿಗಳು ಬಂದ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಾಯಾಳು ಹಮೀದ್ ಅವರನ್ನು ಸ್ಥಳೀಯರು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿದ್ದರು. ದುಷ್ಕರ್ಮಿಗಳ ಪತ್ತೆಗೆ ಪೆÇಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಕಾರಣ ಏನು ಎಂಬುದು ಪೆÇಲೀಸ್ ತನಿಖೆಯ ಬಳಿಕವಷ್ಟೆ ಗೊತ್ತಾಗಲಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿರುವ ಪೊಲೀಸರು ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದುವರೆಗೂ ಯಾರನ್ನೂ ಬಂಧಿಸಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇತ್ತೀಚೆಗೆ ನಡೆದ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅದು ಸ್ವಲ್ಪ ಮಟ್ಟಿಗೆ ತಣ್ಣಗಾಗುವಷ್ಟರಲ್ಲಿ ಈ ತಲವಾರು ದಾಳಿ ಘಟನೆ ನಡೆದಿದ್ದು ಪೊಲೀಸರ ನಿದ್ದೆಗೆಡಿಸಿದೆಯಲ್ಲದೆ ಸ್ಥಳೀಯರಲ್ಲೂ ಆತಂಕ ಉಂಟು ಮಾಡಿದೆ. ಸ್ಥಳೀಯವಾಗಿ ಯುವಕರ ಮಧ್ಯೆ ನಡೆಯುತ್ತಿರುವ ಶೀತಲ ಸಮರದ ಬಗ್ಗೆಯೂ ಪೊಲೀಸರು ತನಿಖೆಯನ್ನು ಕೇಂದ್ರೀಕರಿಸಿದ್ದಾರೆ. ಆದರೆ ಘಟನೆಗೆ ನೈಜ ಕಾರಣ ಏನು ಎಂಬ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೆ ಗೊತ್ತಾಗಬೇಕಷ್ಟೆ.
0 comments:
Post a Comment