ಬಂಟ್ವಾಳ, ಮೇ 25, 2025 (ಕರಾವಳಿ ಟೈಮ್ಸ್) : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ಗ್ರಾಮದ ಬ್ರಹ್ಮರಕೂಟ್ಲು ಎಂಬಲ್ಲಿ ಬಂಟರ ಭವನದ ಬಳಿ ಇರುವ ಕಿರು ಸೇತುವೆ ಬದಿಯ ಸ್ಲ್ಯಾಬ್ ಮುರಿದು ಬಿದ್ದು ಅಪಾಯಕಾರಿ ಹೊಂಡ ನಿರ್ಮಾಣಗೊಂಡಿರುವ ಬಗ್ಗೆ ಮಾಧ್ಯಮ ವರದಿಗೆ ಸ್ಪಂದಿಸಿದ ಬಂಟ್ವಾಳ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು ಭಾನುವಾರ ರಾತೋ ರಾತ್ರಿ ತಾತ್ಕಾಲಿಕ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೇತುವೆ ಮೇಲ್ಭಾಗದಲ್ಲಿ ಹರಿಯುತ್ತಿರುವ ಮಳೆ ನೀರಿನ ರಭಸಕ್ಕೆ ಸೇತುವೆ ಬದಿಯ ಪಾದಚಾರಿ ನಡೆದಾಡುವ ಜಾಗದ ಕಾಂಕ್ರಿಟ್ ಸ್ಲ್ಯಾಬ್ ಮುರಿದು ಕೆಳಕ್ಕೆ ಬಿದ್ದು ಈ ಹೊಂಡ ನಿರ್ಮಾಣಗೊಂಡಿತ್ತು. ಇದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ನಡೆದಾಡುವ ಪಾದಚಾರಿಗಳ ಪಾಲಿಗೆ ಭಾರೀ ಅಪಾಯದ ಆತಂಕ ಎದುರಾಗಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿ ಮಾಧ್ಯಮಗಳ ಗಮನ ಸೆಳೆದಿದ್ದರು. ಈ ಬಗ್ಗೆ ಮಾಧ್ಯಮಗಳು ಭಾನುವಾರ ಸಂಜೆ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
ಈ ಬಗ್ಗೆ ಮಾಧ್ಯಮಗಳ ವರದಿಗೆ ಸ್ಪಂದಿಸಿದ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರು ಭಾನುವಾರ ರಾತ್ರಿಯೇ ಸಂಬಂಧಪಟ್ಟ ಅಧಿಕಾರಿ-ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ತಾತ್ಕಾಲಿಕ ಸುರಕ್ಷತಾ ಕ್ರಮ ಕೈಗೊಂಡಿದ್ದಾರೆ. ಹೊಂಡದ ಸುತ್ತಲೂ ಗೇಟ್ ಹಾಗೂ ಎಚ್ಚರಿಕಾ ಕೋನ್ ಅಳವಡಿಸಿ ಸಾರ್ವಜನಿಕರಿಗೆ ಸುರಕ್ಷತೆ ಕೈಗೊಂಡಿದ್ದು, ಹೊಂಡದ ಶಾಶ್ವತ ಕಾಯಕಲ್ಪಕ್ಕೆ ಮುಂದಿನ ಕ್ರಮ ಕೈಗೊಂಡಿದ್ದಾರೆ.
0 comments:
Post a Comment