ಸಹಸ್ರ ಸಂಖ್ಯೆಯ ಜನಸ್ತೋಮದೊಂದಿಗೆ ಕುತ್ತಾರು ಮಸೀದಿಯಿಂದ ಸಾಗಿ ಬಂದ ಮೃತದೇಹ ಮೆರವಣಿಗೆ ಮಧ್ಯೆ ಫರಂಗಿಪೇಟೆ, ಮಿತ್ತಬೈಲಿನಲ್ಲಿ ಸಹಸ್ರ ಸಂಖ್ಯೆಯ ಜನರಿಂದ ಅಂತಿಮ ದರ್ಶನ
ಬಂಟ್ವಾಳ, ಮೇ 28, 2025 (ಕರಾವಳಿ ಟೈಮ್ಸ್) : ಭಾರೀ ಸಂಖ್ಯೆಯ ಜನಸಮೂಹದ ಸಾಕ್ಷಿಯ ಮಧ್ಯೆ ಮಂಗಳವಾರ ಅಪರಾಹ್ನ ದುಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ರಹೀಂ ಕೊಳತ್ತಮಜಲು ಅವರ ದಫನ ಕಾರ್ಯವು ಬುಧವಾರ ಮಧ್ಯಾಹ್ನದ ವೇಳೆಗೆ ಕೊಳತ್ತಮಜಲು ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆಯಿತು.
ದೇರಳಕಟ್ಟೆಯ ಯೇನಪೋಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಬುಧವಾರ ಮುಂಜಾನೆ ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಬಳಿಕ ಕುತ್ತಾರು-ಮದನಿ ನಗರ ಮಸೀದಿಯಲ್ಲಿ ಮಯ್ಯಿತ್ ಸ್ನಾನ ಮುಗಿಸಿ ಅಲ್ಲಿಂದ ಭಾರೀ ಸಂಖ್ಯೆಯ ವಾಹನಗಳಲ್ಲಿ ಸಹಸ್ರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಮೆರವಣಿಗೆ ಮೂಲಕ ತೊಕ್ಕೊಟ್ಟು, ಪಂಪ್ ವೆಲ್, ಪಡೀಲ್, ಫರಂಗಿಪೇಟೆ, ಬಿ ಸಿ ರೋಡು ಮಾರ್ಗವಾಗಿ ಮೃತರ ಮನೆಗೆ ತಂದು ಅಲ್ಲಿ ಸೇರಿದ ಜನಸಮೂಹದ ಅಂತಿಮ ದರ್ಶನದ ಬಳಿಕ ಮೃತದೇಹವನ್ನು ದಫನ ಕ್ರಿಯೆ ನಡೆಸಲಾಯಿತು. ಮೆರವಣಿಗೆಯ ಮಧ್ಯೆ ಫರಂಗಿಪೇಟೆ ಹಾಗೂ ಮಿತ್ತಬೈಲಿನಲ್ಲಿ ಭಾರೀ ಸಂಖ್ಯೆಯ ಜನ ಸಮೂಹ ನೆರೆದಿದ್ದು, ಅಲ್ಲಿಯೂ ಅಂಬ್ಯುಲೆನ್ಸ್ ಮೂಲಕ ಅಂತಿಮ ದರ್ಶನ ನೀಡಲಾಯಿತು. ಮೃತರ ಗೌರವಾರ್ಥ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಮುಸ್ಲಿಮರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸೂಚಿಸಿದರು. ಘಟನೆಯ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನತೆ ನೆಲೆಸಿದ್ದರಿಂದ ಹೊರ ಜಿಲ್ಲೆಗಳಿಂದಲೂ ಹೆಚ್ಚುವರಿ ಪೊಲೀಸ್ ಪಡೆಯನ್ನು ತರಿಸಲಾಗಿದ್ದು, ಭಾರೀ ಪೊಲೀಸ್ ಬಂದೊಬಸ್ತ್ ಕೈಗೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲಾಗಿತ್ತು.
ರಹೀಂ ಅವರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಡಗಬೆಳ್ಳೂರು ನಿವಾಸಿ ಮಹಮ್ಮದ್ ನಿಸಾರ್ ಎಂಬವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಗಳವಾರ ಮಧ್ಯಾಹ್ನ ಮನೆಯಿಂದ ಪೆÇಳಲಿ ಕಡೆಗೆ ಹೋಗುತ್ತಿರುವಾಗ, ಪರಿಚಯಸ್ಥರೊಬ್ಬರು ದೂರವಾಣಿ ಕರೆಮಾಡಿ ಬಡಗಬೆಳ್ಳೂರಿನ ರಹಿಮಾನ್ ಅಲಿಯಾಸ್ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಎಂಬವರಿಗೆ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ತಲವಾರ್ ಹಲ್ಲೆ ಮಾಡಿ ತೀವ್ರವಾಗಿ ಗಾಯಗೊಂಡು ಬಿದ್ದಿದ್ದಾರೆ ಎಂದು ತಿಳಿಸಿದಂತೆ, ತಕ್ಷಣ ಸ್ಥಳಕ್ಕೆ ತೆರಳಿದಾಗ ರಹಿಮಾನ್ ಅವರ ಪಿಕ್ ಅಪ್ ವಾಹನ ನಿಂತಿದ್ದು, ಅಲ್ಲಿಯೇ ನೆಲದ ಮೇಲೆ ಅಬ್ದುಲ್ ರಹಿಮಾನ್ ರವರು ಗಂಭೀರವಾಗಿ ಗಾಯಗೊಂಡು ಮಾತನಾಡದ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದರು. ಇದೇ ವೇಳೆ ಅಲ್ಲಿಯೇ ಇದ್ದ ಕಲಂದರ್ ಶಾಫಿ ಅವರಿಗೂ ಗಂಭೀರವಾಗಿ ಗಾಯಗಳಾಗಿ ಅಲ್ಲಿಯೇ ಪಕ್ಕದಲ್ಲಿ ಕುಳಿತಿದ್ದರು. ಕೂಡಲೇ ಗಾಯಗೊಂಡ ಕಲಂದರ ಶಾಫಿ ಅವರನ್ನು ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ಘಟನೆಯ ಬಗ್ಗೆ ಅವರು ತಿಳಿಸಿದಂತೆ ಮಂಗಳವಾದ ಮಧ್ಯಾಹ್ನ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ರವರು ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿ ಎಂಬಲ್ಲಿ ಅನ್ ಲೋಡ್ ಮಾಡುತ್ತಿದ್ದಾಗ, ಸುಮಾರು 15 ಜನರ ಗುಂಪು ಮಾರಕಾಯುಧಗಳೊಂದಿಗೆ ಬಂದು ಚಾಲಕನ ಸೀಟ್ ನಲ್ಲಿ ಕುಳಿತಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ನಡೆಸಿರುತ್ತಾರೆ. ಆ ವೇಳೆ ಅಲ್ಲಿ ಜನ ಸೇರಿ ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ವ್ಯಕ್ತಿಗಳು ಹತ್ಯಾರುಗಳೊಂದಿಗೆ ಪರಾರಿಯಾಗಿರುತ್ತಾರೆ. ಗಾಯಾಳು ಕಲಂದರ್ ಶಾಫಿಯವರನ್ನು ಚಿಕಿತ್ಸೆಗಾಗಿ ಹೈಲೆಂಡ್ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅಬ್ದುಲ್ ರಹಿಮಾನ್ ರವರು ಮೃತಪಟ್ಟಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 54/2025 ಕಲಂ 191[1], 191[2], 191[3], 118[1], 118 [2], 109, 103 ಜೊತೆಗೆ 190 ಬಿ ಎನ್ ಎಸ್ 2023ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಂಟ್ವಾಳ ಡಿವೈಎಸ್ಪಿ ಅವರ ನೇತೃತ್ವದಲ್ಲಿ 5 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎನ್ನಲಾಗಿದ್ದು, ಈಗಾಗಲೇ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಳಿಕ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದ್ದು, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳಿರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾ ಪೆÇಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನಾದ್ಯಂತ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರಡಿ ಮೇ 27ರ ಸಂಜೆ 6ರಿಂದ ಮೇ 30ರ ಸಂಜೆ 6ರ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
0 comments:
Post a Comment