ಬೆರಳೆಣಿಕೆಯ ದುಷ್ಕರ್ಮಿಗಳ ಹದ್ದುಬಸ್ತಿನಲ್ಲಿಡಲು ಸರಕಾರ ಹಾಗೂ ಪೊಲೀಸರಿಗೇಕೆ ಸಾಧ್ಯವಾಗುತ್ತಿಲ್ಲ : ಪ್ರತೀಕಾರದ ಕೊಲೆಗಳು ಯಾವ ಧರ್ಮದ ಉದ್ದಾರಕ್ಕಾಗಿ? - Karavali Times ಬೆರಳೆಣಿಕೆಯ ದುಷ್ಕರ್ಮಿಗಳ ಹದ್ದುಬಸ್ತಿನಲ್ಲಿಡಲು ಸರಕಾರ ಹಾಗೂ ಪೊಲೀಸರಿಗೇಕೆ ಸಾಧ್ಯವಾಗುತ್ತಿಲ್ಲ : ಪ್ರತೀಕಾರದ ಕೊಲೆಗಳು ಯಾವ ಧರ್ಮದ ಉದ್ದಾರಕ್ಕಾಗಿ? - Karavali Times

728x90

27 May 2025

ಬೆರಳೆಣಿಕೆಯ ದುಷ್ಕರ್ಮಿಗಳ ಹದ್ದುಬಸ್ತಿನಲ್ಲಿಡಲು ಸರಕಾರ ಹಾಗೂ ಪೊಲೀಸರಿಗೇಕೆ ಸಾಧ್ಯವಾಗುತ್ತಿಲ್ಲ : ಪ್ರತೀಕಾರದ ಕೊಲೆಗಳು ಯಾವ ಧರ್ಮದ ಉದ್ದಾರಕ್ಕಾಗಿ?

 ಮಂಗಳೂರು, ಮೇ 28, 2025 (ಕರಾವಳಿ ಟೈಮ್ಸ್) : ಒಂದು ಕಾಲದಲ್ಲಿ ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಂಡಿದ್ದ ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಅದ್ಯಾರ ಶಾಪ ತಟ್ಟಿದೆಯೋ ಗೊತ್ತಿಲ್ಲ. ದಿನದಿಂದ ದಿನಕ್ಕೆ ಈ ಜಿಲ್ಲೆ ಕೇವಲ ಬೆರಳೆಣಿಕೆಯ ಕೋಮು ದುಷ್ಕರ್ಮಿಗಳ ರಂಪಾಟದಲ್ಲಿ ಬೆಂದು ಹೋಗುತ್ತಿದೆ. ಅಮಾಯಕರಿಗೆ ರಕ್ಷಣೆ ಇಲ್ಲದಾಗಿದೆ. ಜನಸಾಮಾನ್ಯರಿಗೆ ನೆಮ್ಮದಿ ಇಲ್ಲದಾಗಿದೆ. ಒಂದು ಕಡೆ ಭಾರೀ ಮಳೆಯ ಕಾರಣದಿಂದ ಜಿಲ್ಲೆಯ ಜನ ಪ್ರಾಕೃತಿಕ ವಿಕೋಪಗಳಿಂದಾಗಿ ಮನೆ-ಮಠಗಳಲ್ಲಿ ಸಂಕಷ್ಟ ಎದುರಿಸುತ್ತಿದ್ದರೆ, ಇನ್ನೊಂದೆಡೆ ಶ್ರೀಸಾಮಾನ್ಯ ಶಾಲಾ-ಕಾಲೇಜುಗಳ ಆರಂಭದ ಹೊತ್ತಲ್ಲಿ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸು ಹೊತ್ತು ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿಗಾಗಿ ಹರಸಾಹಸಪಡುತ್ತಿದ್ದಾರೆ. ಇನ್ನೊಂದೆಡೆ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸಿಇಟಿ-ನೀಟ್, ಡಿಸಿಇಟಿ, ಪಿಜಿಸಿಇಟಿ ಪರೀಕ್ಷೆ ಸಹಿತ ವಿವಿಧ ಆನ್ ಲೈನ್ ಪ್ರಕ್ರಿಯೆಗಾಗಿ ವಿವಿಧ ರೀತಿಯಲ್ಲಿ ಬಿಝಿಯಾಗಿರುವ ಮಧ್ಯೆ ಮನೆ-ಮಠ, ಕುಟುಂಬ, ಜವಾಬ್ದಾರಿ ಯಾವುದೂ ಇಲ್ಲದಂತೆ ಬೀದಿ ಬಿಕಾರಿಗಳಾಗಿ ವರ್ತಿಸುತ್ತಿರುವ ಕೋಮು ವಿಷವನ್ನೇ ಮೈ ಮೇಲೆ ಮೆತ್ತಿಕೊಂಡು ಸಮಾಜದ ನೆಮ್ಮದಿಯನ್ನೇ ಕೆಡಿಸುತ್ತಿರುವ ದುಷ್ಕರ್ಮಿಗಳು ಅಮಾಯಕ ಜನಗಳ ನೆತ್ತರನ್ನು ಯಾರದೋ ಅನತಿ ಮೇರೆಗೆ ಚೆಲ್ಲುವ ಮೂಲಕ ಮಾನವ ರೂಪದ ನರರಾಕ್ಷಸರಾಗಿ ಮೆರೆಯುತ್ತಿರುವುದು ಜನಸಾಮಾನ್ಯರ ನೆಮ್ಮದಿಯನ್ನೇ ಬಲಿ ಪಡೆದುಕೊಳ್ಳುತ್ತಿದೆ. 

ಕೇವಲ ಬೆರಳೆಣಿಕೆಯ ದುಷ್ಕರ್ಮಿಗಳ ಅಟ್ಟಹಾಸವನ್ನು ನಿಯಂತ್ರಿಸಲಾಗದೆ ಸರಕಾರ ಹಾಗೂ ಪೊಲೀಸ್ ಇಲಾಖೆ ಜನರ ರಕ್ಷಣೆಯ ಹೊಣೆಯನ್ನೇ ಮರೆತು ಮಂಡಿಯೂರುತ್ತಿದೆಯೇ ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ತಲೆದೋರಿ ಜನಾಕ್ರೋಶವಾಗಿ ಮಾರ್ಪಾಟುಗೊಳ್ಳುತ್ತಿದೆ. ಕಾನೂನು-ನೀತಿ-ನಿಯಮಗಳು ಕೇವಲ ಪುಸ್ತಕಗಳಲ್ಲಿ ಹಾಗೂ ಜನಪ್ರತಿನಿಧಿಗಳ, ಅಧಿಕಾರಿಗಳ ಭಾಷಣಗಳಲ್ಲಿ ಮಾತ್ರ ಕಠಿಣವಾಗಿದೆಯೇ ಹೊರತು ದುಷ್ಕರ್ಮಿಗಳ ಅಟ್ಟಹಾಸ ನಿಯಂತ್ರಿಸಲು ನಿತ್ಯವೂ ವಿಫಲವಾಗುತ್ತಲೇ ಇರುವುದೇ ಇಂದು ಸಮಾಜದಲ್ಲಿ ಅರಾಜಕತೆ ಮೇರೆ ಮೀರಲು ಕಾರಣವಾಗುತ್ತಿದೆ. 

ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆ ನಡೆದ ಚುನಾವಣೆಯ ಸಂದರ್ಭ ಚುನಾವಣಾ ಪ್ರಣಾಳಿಕೆಯಲ್ಲಿ ಕೋಮು ಶಕ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಸಾಮಾಜಿಕ ಅಶಾಂತಿಯನ್ನು ನಿಯಂತ್ರಿಸಲಾಗುತ್ತದೆ ಎಂಬ ಭರವಸೆ ರಾಜ್ಯದ ಜನತೆಗೆ ನೀಡಿದ ಸರಕಾರ ಇದೀಗ ಕೇವಲ ಒಂದು ಜಿಲ್ಲೆಯಲ್ಲಿ ಮಾತ್ರ ನಡೆಯುತ್ತಿರುವ ಸೀಮಿತ ಸಂಖ್ಯೆಯ ಜನರ ಹದ್ದು ಮೀರಿದ ವರ್ತನೆಗೆ ಕಡಿವಾಣ ಹಾಕುವಲ್ಲಿ ಯಾವ ಕಾರಣಕ್ಕಾಗಿ ಸಂಪೂರ್ಣವಾಗಿ ವಿಫಲವಾಗುತ್ತಿದೆ ಎಂಬುದೇ ಸಾರ್ವಜನಿಕರ ಪಾಲಿಗೆ ಯಕ್ಷ ಪ್ರಶ್ನೆಯಾಗಿ ಉಳಿದು ಹೋಗುತ್ತಿದೆ. ಸಮಾಜದಲ್ಲಿ ಶಾಂತಿ, ನೆಮ್ಮದಿಯ ಬದುಕನ್ನು ಜನತೆಗೆ ನೀಡಬೇಕಾಗಿರುವ ಸರಕಾರ, ಪೊಲೀಸ್ ಇಲಾಖೆಗಳೇ ವೇದಿಕೆ ಕಟ್ಟಿ ಹೊಡಿ, ಬಡಿ, ಕಡಿ ಭಾಷಣ ಬಿಗಿಯುವ ದುಷ್ಟ ಶಕ್ತಿಗಳಿಗೆ ಸರ್ಪಗಾವಲಾಗಿ ನಿಲ್ಲುತ್ತಿರುವುದೇ ಇಂದಿನ ಎಲ್ಲಾ ಪ್ರಕ್ಷುಬ್ದತೆಗೂ ಕಾರಣವಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ಚುನಾಯಿತ ಜನಪ್ರತಿನಿಧಿಗಳು, ಸಂಘಟನೆಗಳ ನಾಯಕರಂತೂ ಉದ್ರೇಕಕಾರಿ ಭಾಷಣಗಳಿಂದಲೇ ದಿನ ಬೆಳಗಾಗುವಷ್ಟರಲ್ಲಿ ಶೈನ್ ಆಗುವ ಚಿಂತೆಯಲ್ಲೇ ಮಗ್ನರಾಗಿದ್ದಾರೆ. ಜನರ ಮನಸ್ಸುಗಳ ಮಧ್ಯೆ ಪ್ರೀತಿ-ಸ್ನೇಹದ ಸೇತುವೆ ಕಟ್ಟಬೇಕಾದವರೇ ದ್ವೇಷದ ಗೋಡೆ ಕಟ್ಟುತ್ತಿರುವುದು ವಿಪರ್ಯಾಸ ಎನ್ನದೆ ವಿಧಿ ಇಲ್ಲ. 

ಸರಣಿಯಾಗಿ ಅಮಾಯಕ ಜೀವಗಳು ಹತ್ಯೆಯಾಗುತ್ತಿದ್ದರೂ ಅದರ ಮೂಲದಿಂದಲೇ ಕಿತ್ತು ಹಾಕಬೇಕಾದ ಸರಕಾರ ನಡೆಸುವ ಮಂದಿಗಳು ಸಾಮಾಜಿಕ ತಾಣಗಳಲ್ಲಿ ಖಂಡನೆ, ಕ್ರಮದ ಹೇಳಿಕೆಗೆ ಸೀಮಿತಗೊಳ್ಳುತ್ತಿರುವುದರಿಂದ ಪರಿಸ್ಥಿತಿ ಅದೇಗೆ ಸುಧಾರಿಸಲು ಸಾಧ್ಯ ಎಂಬ ಅತ್ಯಂತ ದುಃಖದ ಪ್ರಶ್ನೆ ಜನ ಕೇಳುವಷ್ಟರ ಮಟ್ಟಿಗೆ ಬಂದು ತಲುಪಿದೆ. ಇಂದಿಗೂ ಎಸ್ಸೆಸ್ಸೆಲ್ಸಿ-ಪಿಯುಸಿ ಪರೀಕ್ಷೆಗಳಲ್ಲಿ ಪ್ರಥಮ-ದ್ವಿತೀಯ ಸ್ಥಾನವನ್ನೇ ಸಾಧಿಸುವ ಮೂಲಕ ನಮ್ಮ ವಿದ್ಯಾರ್ಥಿ ಸಮೂಹ ಬುದ್ದಿವಂತರ ಜಿಲ್ಲೆಯ ಗೌರವವನ್ನು ಸದಾ ಉಳಿಸಿಕೊಂಡು ಬರುತ್ತಿದೆಯಾದರೂ, ಬುದ್ದಿ ಬಲಿತು ಇನ್ನೇನು ಜೀವನದ ಬಹುಭಾಗ ಮುಗಿಸಿಕೊಂಡು ಮುಂದುವರಿದಿರುವ ಪ್ರಬುದ್ದರು ಮಾತ್ರ ಇನ್ನೊಬ್ಬರ ಜೀವವನ್ನು ಕೈಯಾರೆ ಕೊಂದು ನಾನು ಮಾತ್ರ ಈ ಲೋಕದಲ್ಲಿ ಶಾಶ್ವತವಾಗಿ ಜೀವಿಸುತ್ತೇನೆ ಎಂಬ ಭ್ರಮಾಲೋಕದಲ್ಲಿ ತೇಲುವ ಮೂಲಕ ಜಿಲ್ಲೆಯ ಮಾನ-ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕುತ್ತಿರುವುದು ದುರಂತವಲ್ಲದೆ ಇನ್ನೇನೂ ಅಲ್ಲ. 

ಜಗತ್ತಿನ ಎಲ್ಲ ಧರ್ಮಗಳೂ ಮನುಷ್ಯನನ್ನು ಪ್ರೀತಿಸದ ಹೊರತು ಧರ್ಮಾನುಯಾಯಿಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಸಾರುತ್ತಿದ್ದರೂ ಅದೇ ಧರ್ಮದ ಹೆಸರಿನಲ್ಲಿ ಮನುಷ್ಯ ಮನುಷ್ಯನನ್ನೇ ಕೊಂದು ಹಾಕುವ ರಾಕ್ಷಸೀ ಪ್ರವೃತ್ತಿ ಬೆಳೆಸಿಕೊಂಡು ಬರುತ್ತಿರುವುದು ಅದ್ಯಾವ ಧರ್ಮದ ಉದ್ದಾರಕ್ಕಾಗಿ ಎಂಬುದೇ ಅರ್ಥವಾಗದ ಯಕ್ಷ ಪ್ರಶ್ನೆಯಾಗಿಯೇ ಉಳಿದು ಬಿಡುತ್ತಿದೆ. ಧರ್ಮದ ಹೆಸರಿನಲ್ಲಿ ಪ್ರಚೋದನೆ ಉಂಟು ಮಾಡಿ ಮನುಷ್ಯ-ಮನುಷ್ಯರ ನಡುವೆ ಅಪನಂಬಿಕೆ ಹುಟ್ಟಿಸಿ ನರ ಬಲಿಯನ್ನೇ ಬಯಸುತ್ತಿರುವ ದುಷ್ಟ ಶಕ್ತಿಗಳನ್ನು ಸಮಾಜದಲ್ಲಿ ರಾಜಾರೋಷವಾಗಿ ಹಾಯಾಗಿ ಜೀವಿಸುತ್ತಿದ್ದರೂ ಅಮಾಯಕ ಜನ ಸಾಮಾನ್ಯ ಮಾತ್ರ ಸದಾ ಭಯದ ನೆರಳಿನಲ್ಲೇ ಜೀವಿಸುವಂತಾಗಿರುವುದು ಬುದ್ದಿವಂತರ ಜಿಲ್ಲೆಯ ದುರಾದೃಷ್ಟ ಎನ್ನದೆ ವಿಧಿಯಿಲ್ಲ. 

ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿ ಬಹಳಷ್ಟು ವಿಷಮಕಾರಿಯಾಗುವ ಹಂತಕ್ಕೆ ಬಂದು ತಲುಪಿದ್ದು, ಸಾಮಾನ್ಯ ಜನ ನಿತ್ಯದ ಕೆಲಸಗಳಿಗೂ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗುತ್ತಿರುವ ಹಿನ್ನಲೆಯಲ್ಲಿ ಇನ್ನಾದರೂ ಆಳುವ ಸರಕಾರ ಹಾಗೂ ಜನರ ರಕ್ಷಣೆಯ ಹೊಣೆ ಹೊತ್ತಿರುವ ಆರಕ್ಷಕ ಪಡೆ ಯಾವುದೇ ಓಲೈಕೆ, ರಾಜಕೀಯ ಲೆಕ್ಕಾಚಾರ ಎಲ್ಲವನ್ನೂ ತಿಪ್ಪೆಗೆಸೆದು ದುಷ್ಟ ಶಕ್ತಿಗಳ ಸಂಹಾರಕ್ಕೆ ಕಠಿಣ ನಿರ್ಧಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಜನ ಸಾಮಾನ್ಯನೇ ತನ್ನ ಕನಿಷ್ಠ ಬದುಕುವ ಹಕ್ಕಿಗಾಗಿ ದಂಗೆ ಏಳುವ ದಿನಗಳೂ ಮುಂದಿನ ದಿನಗಳಲ್ಲಿ ಬಂದರೂ ಅಚ್ಚರಿಪಡಬೇಕಿಲ್ಲ. 

  • Blogger Comments
  • Facebook Comments

0 comments:

Post a Comment

Item Reviewed: ಬೆರಳೆಣಿಕೆಯ ದುಷ್ಕರ್ಮಿಗಳ ಹದ್ದುಬಸ್ತಿನಲ್ಲಿಡಲು ಸರಕಾರ ಹಾಗೂ ಪೊಲೀಸರಿಗೇಕೆ ಸಾಧ್ಯವಾಗುತ್ತಿಲ್ಲ : ಪ್ರತೀಕಾರದ ಕೊಲೆಗಳು ಯಾವ ಧರ್ಮದ ಉದ್ದಾರಕ್ಕಾಗಿ? Rating: 5 Reviewed By: karavali Times
Scroll to Top