ಮಂಗಳೂರು, ಮೇ 31, 2025 (ಕರಾವಳಿ ಟೈಮ್ಸ್) : ಯಾವುದೇ ಅಪರಾಧ ಮಾಡುವ ಆರೋಪಿಗಳಿಗೆ ಯಾವುದೇ ವಿಧದ ಸಹಾಯ ಮಾಡಿದರೂ ಬಿ ಎನ್ ಎಸ್ ಕಾಯ್ದೆ ಪ್ರಕಾರ ಅಪರಾಧವೇ ಆಗಿದ್ದು, ಅಂತಹವರುಗಳನ್ನು ಆರೋಪಿ ಎಂದೇ ಪರಿಗಣಿಸಲಾಗುತ್ತದೆ ಎಂದು ಮಂಗಳೂರು ನೂತನ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಸಿ ಎಚ್ ಅವರು ಎಚ್ಚರಿಸಿದ್ದಾರೆ.
ಅಪರಾಧ ಕೃತ್ಯಗಳನ್ನು ಎಸಗಿ ಬರುವ ಯಾರಿಗಾದರೂ ಆಶ್ರಯ ನೀಡುವುದಾಗಲೀ, ಆಹಾರ ನೀಡುವುದಾಗಲೀ, ಕುಡಿಯಲು ನೀಡುವುದಾಗಲೀ, ಹಣ ನೀಡುವುದಾಗಲೀ, ವಾಹನಗಳನ್ನು ನೀಡುವುದಾಗಲೀ ಮಾಡಿದರೆ ಅಂತಹವರೆಲ್ಲರನ್ನೂ ಆರೋಪಿಗಳೆಂದೇ ಪರಿಗಣಿಸಲಾಗುತ್ತದೆ. ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಕಟ್ಟುನಿಟ್ಟಾಗಿ ಪಾಲಿಸಲಿದ್ದಾರೆ. ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸುವಂತೆ ಕಮಿಷನರ್ ರೆಡ್ಡಿ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳ ಬಂಧನದ ವೇಳೆ ಸಾರ್ವಜನಿಕ ವಲಯದಲ್ಲಿ ಅಮಾಯಕರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಭಾವನೆ ಬರಬಾರದು ಎಂಬ ನಿಟ್ಟಿನಲ್ಲಿ ಕಮಿಷನರ್ ಈ ಸೂಚನೆ ನೀಡಿದ್ದಾರೆ.
0 comments:
Post a Comment