ನಾಲ್ಕು ವರ್ಷಗಳ ಕಾಲ ತಾವು ಅಧಿಕಾರದಲ್ಲಿದ್ದಾಗ ಪೂರ್ಣಗೊಳಿಸಲಾಗದೆ ಇದೀಗ ಸುಳ್ಳು ಹೇಳಿ ರಾಜಕೀಯ ಬೇಡ ಎಂದು ಪಾಠ ಹೇಳಿದ ಸಿಎಂ
ಪಡೀಲ್ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡ “ಪ್ರಜಾ ಸೌಧ” ಉದ್ಘಾಟನಾ ಸಮಾರಂಭದ ವೇದಿಕೆಯಲ್ಲೊಂದು ರಾಜಕೀಯ ಏಟು-ತಿರುಗೇಟು
ಮಂಗಳೂರು, ಮೇ 16, 2025 (ಕರಾವಳಿ ಟೈಮ್ಸ್) : ಮಂಗಳೂರಿನ ಪಡೀಲಿನಲ್ಲಿ ನೂತನವಾಗಿ ನಿರ್ಮಾಣಗೊಂಡು ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಹೊಸ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ “ಪ್ರಜಾ ಸೌಧ” ಲೋಕಾರ್ಪಣಾ ಸಮಾರಂಭದ ಸಭಾ ವೇದಿಕೆಯಲ್ಲಿ ಸಭಾಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಅವರು ತಮ್ಮ ಅಧ್ಯಕ್ಷೀಯ ಭಾಷಣದ ವೇಳೆ ಕೇಂದ್ರದ ನರೇಂದ್ರ ಮೋದಿ ಸರಕಾರ ಜಾರಿಗೆ ತಂದಿರುವ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಮಂಗಳೂರಿನ ನೂತನ ಡೀಸಿ ಕಚೇರಿ ಕಟ್ಟಡ ನಿರ್ಮಾಣವಾಗಿದೆ. ಕೇಂದ್ರ ಸರಕಾರದ ಅರ್ಧ ಭಾಗ ಹಾಗೂ ರಾಜ್ಯ ಸರಕಾರದ ಅರ್ಧ ಭಾಗ ಅನುದಾನದ ಭಾಗವಾಗಿ ಈ ಕಟ್ಟಡ ಇಂದು ತಲೆ ಎತ್ತುವಂತಾಗಿದೆ. ಕೇಂದ್ರದ ಸ್ಮಾರ್ಟ್ ಯೋಜನೆ ಇಲ್ಲದೆ ಇರುತ್ತಿದ್ದರೆ ಇಂದು ಈ ಸುಂದರ ಸೌಧ ನಿರ್ಮಾಣವಾಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಪ್ರಜಾ ಸೌಧದ ಕ್ರೆಡಿಟನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರಕ್ಕೆ ನೀಡುವ ಪ್ರಯತ್ನ ಮಾಡಿ ಭಾಷಣ ಮುಗಿಸಿದರು.
ಬಳಿಕ ಭಾಷಣ ಪೀಠಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕ ಕಾಮತ್ ಅವರ ರಾಜಕೀಯ ಪ್ರೇರಿತ ಭಾಷಣಕ್ಕೆ ಸಕತ್ ಆಗಿಯೇ ತಿರುಗೇಟು ನೀಡಿದರು. ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ಈ ಕೆಲಸ ನಡೆದಿದೆ ಎಂದಾದರೆ ನೀವು ನಾಲ್ಕು ವರ್ಷ ಅಧಿಕಾರದಲ್ಲಿರುವಾಗ ಸ್ಮಾರ್ಟ್ ಸಿಟಿ ಯೋಜನೆ ಜಾರಿಯಲ್ಲಿ ಇರಲಿಲ್ಲವೇ? ಆಗ ನಿಂತು ಹೋಗಿತ್ತೇ? ನಾಲ್ಕು ವರ್ಷ ಅಧಿಕಾರದಲ್ಲಿದ್ದರೂ ನಿಂತಿದ್ದ ಕಾಮಗಾರಿಯನ್ನು ಮುಟ್ಟಿ ನೋಡದೆ ಇದೀಗ ರಾಜಕೀಯ ಭಾಷಣ ಮಾಡಿದರೆ ಏನು ಪ್ರಯೋಜನ? ಜನರಿಗೆ ಸುಳ್ಳು ಹೇಳಿ ನಂಬಿಸುವುದು ಬೇಡ. ನೀವು ಸುಳ್ಳು ಹೇಳಬಹುದು. ಆದರೆ ಜನ ನಂಬಬೇಕಲ್ಲ ಎಂದು ಸಿಎಂ ಮಾತಿನಲ್ಲೇ ಝಾಡಿಸಿದರು.
ಇದು ಮಾಜಿ ಸಚಿವ ಬಿ ರಮಾನಾಥ ರೈ ಅವರ ಶ್ರಮದ ಕೊಡುಗೆಯಾಗಿದೆ. 2015 ರಲ್ಲಿ ರಮಾನಾಥ ರೈಗಳು ಉಸ್ತುವಾರಿ ಮಂತ್ರಿ, ಅರಣ್ಯ ಮಂತ್ರಿಗಳಾಗಿದ್ದ ಸಂದರ್ಭ ನನ್ನ ಜೊತೆ ಬಂದು ಮಂಗಳೂರಿಗೆ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಮಾಡಿಯೇ ತೀರಬೇಕು ಎಂದು ಹಠ ಹಿಡಿದು ನನ್ನನ್ನು ಕರೆ ತಂದು ಶಿಲಾನ್ಯಾಸ ಮಾಡಿಸಿದ್ದಾರೆ. ಆ ಸಂದರ್ಭದಲ್ಲೇ ನಾನು 45 ಕೋಟಿ ಮಂಜೂರು ಮಾಡಿದ್ದು, ಈ ಕಟ್ಟಡಕ್ಕೆ ಶಿಲಾನ್ಯಾಸವನ್ನೂ ನಾನೇ ಮಾಡಿದ್ದೇನೆ. ಇದೀಗ ಉದ್ಘಾಟನೆಯನ್ನು ಕೂಡಾ ನಾನೇ ಮಾಡಿದ್ದೇನೆ ಎಂದ ಸಿಎಂ ಆ ಬಳಿಕ 55 ಕೋಟಿ ಮತ್ತು ಬಳಿಕ 20 ಕೋಟಿ ರೂಪಾಯಿ ಹಣ ಬಿಡುಗಡೆಗೊಳಿಸಿ ಸುಮಾರು 75 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಿದೆ. ಅಭಿವೃದ್ದಿ ವಿಚಾರದಲ್ಲಿ ಯಾವತ್ತೂ ರಾಜಕೀಯ ಮಾಡುವುದು ಬೇಡ. ಚುನಾವಣೆ ಸಂದರ್ಭ ರಾಜಕೀಯ ಮಾಡೋಣ ಎಂದು ಕಿವಿ ಮಾತು ಹೇಳಿದರು.
ಕರ್ನಾಟಕ ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದೇ ನಮ್ಮ ಸರಕಾರದ ಪ್ರಮುಖ ಧ್ಯೇಯವಾಗಿದ್ದು, ಸೌಹಾರ್ದ ವಾತಾವರಣ ನಿರ್ಮಾಣ ಮಾಡಬೇಕಿರುವುದು ರಾಜಕಾರಣಿಗಳ ಕೆಲಸವಾಗಬೇಕು. ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ನಾವೆಲ್ಲ ಪಣ ತೊಡೋಣ ಎಂದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ದಿಗೆ ಹಣಕಾಸಿನ ಕೊರತೆಯಾಗಿಲ್ಲ. ಇದೊಂದು ಸುಳ್ಳು ಪ್ರಚಾರವಾಗಿದೆ. ಗ್ಯಾರಂಟಿಗಳ ಜೊತೆ ಅಭಿವೃದ್ದಿ ಕಾರ್ಯಗಳೂ ರಾಜ್ಯದಲ್ಲಿ ಆಗುತ್ತಿದೆ. ಈ ಬಾರಿಯ ರಾಜ್ಯದ ಬಜೆಟ್ ಗಾತ್ರ ನೋಡಿ ಪರಿಶೀಲನೆ ಮಾಡಿದವರಿಗೆ ಇದು ಗೊತ್ತಾಗುತ್ತದೆ ಎಂದು ಹೇಳಿದರು.
ತುಳುನಾಡಿನ ಭಾಷೆಯಾಗಿರುವ ತುಳು ಭಾಷೆಯನ್ನು ಸಂವಿಧಾನದ 2ನೇ ಭಾಷೆಯಾಗಿ ಮಾಡುವಲ್ಲಿ ನಮ್ಮ ಸರಕಾರ ಪ್ರಯತ್ನ ಮಾಡಲಿದೆ ಎಂದ ಸಿಎಂ ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ. ಶೇ15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರವು ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ? ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸುವ ಕೆಲಸವನ್ನು ಇಲ್ಲಿನ ಸಂಸದರು, ಶಾಸಕರು ಮಾಡಬೇಕು ಎಂದು ವಿನಂತಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೆÇೀಡಿಮುಕ್ತ ಜಿಲ್ಲೆ ಆಗಲಿದೆ. ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೆÇೀಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ. ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಹೆಜ್ಜೆ ಹಾಕೋಣ. ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ ಗಳ ಆಸ್ಪತ್ರೆ ಮಾಡುತ್ತೇವೆ. ಆಮೇಲೆ ಮತ್ತೆ 250 ಬೆಡ್ ಗಳನ್ನು ಹೆಚ್ಚುವರಿಯಾಗಿ ವಿಸ್ತರಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ನಮ್ಮ ಸರಕಾರ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದು ದೇಶದಲ್ಲಿಯೇ ಮಾದರಿ ಸರಕಾರವಾಗಿ ಕೆಲಸ ಮಾಡುತ್ತಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಎದೆ ತಟ್ಟಿಕೊಂಡರು.
ಇಲ್ಲಿನ ನೂತನ ಜಿಲ್ಲಾಧಿಕಾರಿ ಕಟ್ಟಡಕ್ಕೆ ಪ್ರಜಾ ಸೌಧ ಎಂಬ ಹೆಸರಿಡಲಾಗಿದ್ದು, ಇದು ಪ್ರಜೆಗಳದ್ದೇ ಸೌಧವಾಗಿದೆ. ಇಲ್ಲಿಗೆ ಬರುವ ಸಾಮಾನ್ಯ ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಕರ್ನಾಟಕ ಗೃಹ ಮಂಡಳಿ ಮಂಗಳೂರು ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಜಂಟಿಯಾಗಿ ಹಮ್ಮಿಕೊಂಡಿರುವ ಈ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ವಹಿಸಿದ್ದರು. ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಫರೀದ್, ದ ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ದಿ ಸಚಿವ ಸುರೇಶ್ ಬಿ ಎಸ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕ ಅಶೋಕ್ ಕುಮಾರ್ ರೈ, ಎಂಎಲ್ಸಿಗಳಾದ ಐವನ್ ಡಿಸೋಜ, ಡಾ ಮಂಜುನಾಥ ಭಂಡಾರಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಪರ ಕಾರ್ಯದರ್ಶಿ ಅತೀಕ್ ಅಹ್ಮದ್, ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ ಎಂ ಶಿವಲಿಂಗೇ ಗೌಡ, ದ ಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮೊದಲಾದವರು ಭಾಗವಹಿಸಿದ್ದರು. ಇದೇ ವೇಳೆ ಫಲಾನುಭವಿಗಳಿಗೆ ‘ನನ್ನ ಭೂಮಿ’ ಪಹಣಿ ಪತ್ರ ವಿತರಣೆ ನಡೆಯಿತು.
0 comments:
Post a Comment