ಬಂಟ್ವಾಳ, ಮೇ 30, 2025 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಗುರುವಾರ ಅಪರಾಹ್ನದಿಂದ ಮತ್ತೆ ಮಳೆ ಬಿರುಸುಗೊಂಡಿದ್ದು, ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದಾಗಿ ವಿವಿಧೆಡೆ ಹಾನಿ ಪ್ರಕರಣಗಳು ವರದಿಯಾಗಿದೆ.
ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ನಿವಾಸಿ ಉಮಾವತಿ ಕೊಂ ಬಾಬು ಆಳ್ವ ಅವರ ವಾಸದ ಮನೆಗೆ ಪಕ್ಕದ ಗುಡ್ಡ ಜರಿದು ಬಾಗಶಃ ಹಾನಿಯಾಗಿದ್ದು, ಮನೆಮಂದಿಯನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಾಣಿಲ ಗ್ರಾಮದ ಕೊಂದಲಕೋಡಿ ನಿವಾಸಿ ಗಿರೀಶ ಅವರ ಮನೆಯ ಹಿಂಬದಿಗೆ ಗುಡ್ಡ ಕುಸಿದು ಹಾನಿ ಸಂಭವಿಸಿದೆ. ವಿಟ್ಲ ಮುಡ್ನೂರು ಗ್ರಾಮದ ಕಂಬಳಬೆಟ್ಟು ನಿವಾಸಿ ಶ್ರೀಮತಿ ಹಾಜಿರ ಅವರ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಕಂಬಳಬೆಟ್ಟು-ಶಾಂತಿನಗರ ನಿವಾಸಿ ಶ್ರೀಮತಿ ನೆಬಿಸ ಅವರ ವಾಸದ ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಕರೋಪಾಡಿ ಗ್ರಾಮದ ಓಡಿಯೂರು ನಿವಾಸಿ ಶ್ರೀಮತಿ ಹರಿನಾಕ್ಷಿ ಕೋಂ ಶಶಿಧರ ಅವರ ಹಂಚಿನ ಮನೆಯ ಚಾವಣಿ ಕುಸಿದು ತೀವ್ರ ಹಾನಿ ಸಂಭವಿಸಿದೆ. ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ. ನೂಜಿ ನಿವಾಸಿ ಶ್ರೀಮತಿ ಹಾಜಿರಾ ಕೋಂ ಅಬ್ದುಲ್ ಹಮೀದ್ ಅವರ ಮನೆಯ ಮಣ್ಣಿನ ಗೋಡೆ ಕುಸಿದು ಹಾನಿಯಾಗಿದೆ.
ಅಮ್ಮುಂಜೆ ಗ್ರಾಮದ ಸುಲೋಚನ ಎಂಬವರ ಮನೆಯ ಮೇಲ್ಛಾವಣಿ ಕುಸಿದಿದೆ. ನರಿಕೊಂಬು ಗ್ರಾಮದ ನಿವಾಸಿ ಇಬ್ರಾಹಿಂ ಬಿನ್ ಅಬ್ಬಾಸ್ ಅವರ ಮನೆಯ ಹಿಂಬದಿಯ ಗುಡ್ಡ ಕುಸಿಯುವ ಭೀತಿ ಇದ್ದು ಪಂಚಾಯತ್ ಪಿಡಿಒ ಅವರೊಂದಿಗೆ ತಾಲೂಕು ತಹಶೀಲ್ದಾರ್ ಭೇಟಿ ನೀಡಿ ಮನೆ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಕಡೇಶ್ವಾಲ್ಯ ಗ್ರಾಮದ ಸೇರಾ ನಿವಾಸಿ ತನಿಯಪ್ಪ ಅವರ ಮನೆಯ ಪಕ್ಕದ ಗುಡ್ಡದ ಮಣ್ಣು ಕುಸಿದಿದೆ.
ಪುದು ಗ್ರಾಮದ ಹೊಳೆಬದಿ ನಿವಾಸಿ ಹಾಜಿರ ಕೋಂ ಹಸನಬ್ಬ ಅವರ ಮನೆಗೆ ತಾಗಿದ ಮಣ್ಣ ಗುಡ್ಡೆ ಹಾಗೂ ಮರ ಕುಸಿದು ಬೀಳುವ ಸಾಧ್ಯತೆ ಇದ್ದು, ಮನೆ ಮಂದಿಗೆ ಸ್ಥಳಾಂತರಗೊಳ್ಳುವಂತೆ ನೋಟಿಸ್ ನೀಡಲಾಗಿದೆ. ಮನೆಮಂದಿ ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಜುಮಾದಿಗುಡ್ಡೆ ನಿವಾಸಿ ಇಬ್ರಾಹಿಂ ಬಿನ್ ಮೊಯಿದಿನ್ ಅವರ ಮನೆ ಕುಸಿದಿದ್ದು ಮನೆಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
0 comments:
Post a Comment