ಬಂಟ್ವಾಳ, ಮೇ 05, 2025 (ಕರಾವಳಿ ಟೈಮ್ಸ್) : ಬಡ ದಲಿತ ಸಮುದಾಯಕ್ಕೆ ಸೇರಿದ ಕೂಲಿ ಕಾರ್ಮಿಕರೋರ್ವರ ಪುತ್ರ, ಕಕ್ಕೆಪದವು ಪಂಚದುರ್ಗ ಪ್ರೌಢಶಾಲಾ ವಿದ್ಯಾರ್ಥಿ ಪ್ರಶಾಂತ್ ಈ ಬಾರಿಯ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 600ಗಳನ್ನು ಪಡೆದು 96 ಶೇಕಡಾ ಫಲಿತಾಂಶ ದಾಖಲಿಸಿ ವಿಶೇಷ ಸಾಧನೆಗೈದಿದ್ದಾನೆ.
ಕಕ್ಕೆಪದವು ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘದ ಮಾಜಿ ಅಧ್ಯಕ್ಷ ಶಂಕರ್-ಮಂಜುಳಾ ಕೇರ್ಯ ದಂಪತಿಗಳ ಪುತ್ರನಾಗಿರುವ ಈತ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಗ್ರಾಮೀಣ ಶಾಲೆಯಲ್ಲಿ ಕಲಿತ ಈತ ಯಾವುದೇ ವಿಶೇಷ ತರಬೇತಿ ಇಲ್ಲದೆ ಈ ಸಾಧನೆ ಮಾಡಿರುವುದು ವಿಶೇಷ.
ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಕಕ್ಕೆಪದವಿನ ಕಕ್ಯಬೀಡು ಪಂಚದುರ್ಗ ಪ್ರೌಢಶಾಲೆಯಿಂದ ಈ ಬಾರಿ 30 ಬಾಲಕರು ಹಾಗೂ 31 ಬಾಲಕಿಯರ ಸಹಿತ ಒಟ್ಟು 61 ಮಂದಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು. ಈ ಪೈಕಿ 24 ಬಾಲಕರು ಹಾಗೂ 27 ಮಂದಿ ಬಾಲಕಿರ ಸಹಿತ ಒಟ್ಟು 51 ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಶಾಲೆಗೆ 84 ಶೇಕಡಾ ಫಲಿತಾಂಶ ಬಂದಿದೆ.
9 ಮಂದಿ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, 28 ಮಂದಿ ಪ್ರಥಮ ಶ್ರೇಣಿ, 11 ಮಂದಿ ದ್ವಿತೀಯ ಶ್ರೇಣಿ ಹಾಗೂ 3 ಮಂದಿ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿಯರಾದ ಶರಣ್ಯ 596 ಹಾಗೂ ಶ್ರಾವ್ಯ 574 ಅಂಕಗಳನ್ನು ಪಡೆದು ಶಾಲೆಗೆ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಿಯಾಗಿದ್ದಾರೆ. ಉಳಿದಂತೆ ಪ್ರತೀಕ್ಷಾ 572, ಶ್ರೇಯತ್ 563, ಆಯಿಷತ್ ನಾಝಿಮಾ 560, ಕುಶಿ ನಾಯ್ಕ 558, ಫಾತಿಮತುಲ್ ಅಝ್ಮಿಯಾ 556, ಸಿಂಚನ ಜೆ 553 ಅಂಕಗಳನ್ನು ಪಡೆದು ವಿಶೇಷ ಸಾಧನೆಗೈದಿದ್ದಾರೆ. ಶಾಲೆಯ ವಿದ್ಯಾರ್ಥಿಗಳ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ಶಾಲಾ ಶಿಕ್ಷಕ ವೃಂದಕ್ಕೆ ಕಕ್ಕೆಪದವು ಡಾ ಬಿ ಆರ್ ಅಂಬೇಡ್ಕರ್ ಯುವಕ ಸಂಘ ಅಭಿನಂದನೆ ಸಲ್ಲಿಸಿದೆ.
0 comments:
Post a Comment