ಬೆಂಗಳೂರು, ಮೇ 12, 2025 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಈ ಬಾರಿ ಮುಂಗಾರು ಸ್ವಲ್ಪ ಬೇಗ ಆರಂಭವಾಗುವ ಸಾಧ್ಯತೆ ಬಗ್ಗೆ ಭಾರತದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರತಿ ವರ್ಷ ಜೂನ್ 1ಕ್ಕೆ ಮಾನ್ಸೂನ್ ಮಾರುತ ಆರಂಭವಾಗುವುದು ವಾಡಿಕಯಾಗಿತ್ತು. ಆದರೆ, ಈ ವರ್ಷ ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಪ್ರತಿ ಬಾರಿ ಜೂನ್ 1 ರಂದು ನೈಋತ್ಯ ಮಾರುತ ಕೇರಳವನ್ನು ಪ್ರವೇಶಿಸಿದರೆ, ಜೂನ್ 8ರೊಳಗೆ ಇಡೀ ದೇಶವನ್ನ ಆವರಿಸುತ್ತಿತ್ತು. ಆದರೆ, ಈ ಬಾರಿ ಕೆಲದಿನ ಮುಂಚಿತವಾಗಿ ಮುಂಗಾರು ಮಳೆ ಆರಂಭವಾಗುತ್ತಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕೆಲದಿನಗಳ ಮುಂಚಿತವಾಗಿ ಮುಂಗಾರು ಪ್ರವೇಶಿಸುತ್ತಿರುವುದು ಕಳೆದ 16 ವರ್ಷದ ಬಳಿಕ ಇದೇ ಮೊದಲಾಗಿದೆ. 2009ರಲ್ಲಿ ಮೇ 23 ರಂದು ಇದೇ ರೀತಿಯಲ್ಲಿ ಮುಂಗಾರು ಕೆಲದಿನಗಳ ಮುಂಚೆ ಆರಂಭವಾಗಿತ್ತು. ಈ ಬಾರಿ ಮೇ 27ರಂದು ಆರಂಭವಾಗುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ. 28ರಂದು ಕರ್ನಾಟಕದಲ್ಲಿ ಮುಂಗಾರು ಆಗಮನವಾಗಲಿದ್ದು, ಈ ವರ್ಷ ಸಾಮಾನ್ಯಕ್ಕಿತ ಹೆಚ್ಚಿನ ಮಳೆಯಾಗುವ ನಿರೀಕ್ಷೆಗಳಿವೆ. ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ, ಆದರೆ ರಾಜ್ಯದ ಇತರ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ (ಕೆಎಸ್ಎನ್ಡಿಎಂಸಿ) ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ಜೂನ್ ಮತ್ತು ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದ ನಡುವೆ ಸರಾಸರಿ ಮಳೆ 860 ಮಿ.ಮೀ. ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಸಾಮಾನ್ಯಕ್ಕಿಂತ ಸುಮಾರು ಶೇ. 5 ಹೆಚ್ಚು ಮಳೆಯಾಗಲಿದೆ. ಸರಾಸರಿ 900 ಮಿ.ಮೀ ಮಳೆಯಾಗುವ ಸಾಧ್ಯತೆಗಳಿವೆ ಎಂದವರು ತಿಳಿಸಿದ್ದಾರೆ. ಈ ಮಧ್ಯೆ, ಮುಂದಿನ ವಾರ ರಾಜ್ಯಾದ್ಯಂತ ಸಾಮಾನ್ಯ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
0 comments:
Post a Comment