ಬಂಟ್ವಾಳ, ಜೂನ್ 22, 2025 (ಕರಾವಳಿ ಟೈಮ್ಸ್) : ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ವಿಶೇಷ ಮುತುವರ್ಜಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ಸುಮಾರು 26.18 ಕೋಟಿ ರೂಪಾಯಿ ವೆಚ್ಚದಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ ಅಭಿವೃದ್ದಿ ಕಾಮಗಾರಿ ಬಹುತೇಕ ಪೂರ್ಣವಾಗುತ್ತಾ ಬಂದಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೇನು ಕೆಲವೇ ದಿನಗಳಲ್ಲಿ ಬಂಟ್ವಾಳ ನೂತನ ರೈಲ್ವೆ ನಿಲ್ದಾಣ ಉದ್ಘಾಟನೆಗೊಳ್ಳಲಿದೆ.
ಆದರೆ ಇಲ್ಲಿನ ನವೀಕೃತ ಹಾಗೂ ಮೇಲ್ದರ್ಜೆಗೇರುವ ರೈಲು ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದ್ದು ಕಂಡು ಬರುತ್ತಿದೆಯಾದರೂ ಆರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ರೈಲ್ವೆ ಇಲಾಖಾಧಿಕಾರಿಗಳು ಹೇಳಿದಂತೆ ಇಲ್ಲಿನ ನಿಲ್ದಾಣದಲ್ಲಿ ಎಲ್ಲೂ ಲಿಫ್ಟ್ ಅಥವಾ ಎಸ್ಕಲೇಟರ್ ವ್ಯವಸ್ಥೆ ಕಂಡು ಬರುತ್ತಿಲ್ಲ. ಮಾತ್ರವಲ್ಲ ಭವಿಷ್ಯದಲ್ಲಿ ಇದನ್ನು ನಿರ್ಮಿಸುವ ಯೋಜನೆಯ ರೂಪುರೇಷೆಯೂ ಇಲ್ಲಿನ ನಿಲ್ದಾಣದಲ್ಲಿ ಕಂಡು ಬರುತ್ತಿಲ್ಲ ಎಂಬುದೇ ಇಲ್ಲಿನ ಸಾರ್ವಜನಿಕರು ನೂತನ ರೈಲು ನಿಲ್ದಾಣದ ಬಗ್ಗೆ ವ್ಯಕ್ತಪಡಿಸುತ್ತಿರುವ ಅತ್ಯಂತ ಪ್ರಮುಖ ಮೈನಸ್ ಪಾಯಿಂಟ್ ಆಗಿದೆ.
ಪ್ರಸ್ತುತ ದಿನಗಳಲ್ಲಿ ದೇಶಾದ್ಯಂತ ಕೇಂದ್ರ ರೈಲ್ವೆ ಇಲಾಖೆ ಕೈಗೊಳ್ಳುವ ರೈಲು ನಿಲ್ದಾಣ ಅಪ್ ಗ್ರೇಡ್ ಕಾಮಗಾರಿಗಲ್ಲಿ ಪ್ರತೀ ನಿಲ್ದಾಣಗಳಲ್ಲೂ ಲಿಫ್ ಹಾಗೂ ಎಸ್ಕಲೇಟರ್ ವ್ಯವಸ್ಥೆಗಳು ಪ್ರಮುಖ ಒಂದಾಗಿ ಸ್ಥಾನ ಪಡೆದಿದೆ. ಈಗಾಗಲೇ ದೇಶದ ಹಲವು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಕಾರ್ಯಾರಂಭ ಮಾಡಿದ್ದು, ಜನ ಇದರ ಪೂರ್ಣ ಪ್ರಮಾಣದ ಉಪಯೋಗವನ್ನು ಪಡೆಯುತ್ತಿದ್ದಾರೆ. ಆದರೆ ಬಿ ಸಿ ರೋಡಿನ ನೂತನ ರೈಲು ನಿಲ್ದಾಣದಲ್ಲಿ ಎಲ್ಲೂ ಲಿಫ್ಟ್ ಅಥವಾ ಎಸ್ಕಲೇಟರ್ ವ್ಯವಸ್ಥೆಯ ಕುರುಹುಗಳೇ ಕಂಡು ಬರುತ್ತಿಲ್ಲ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಅಂದರೆ ಕೊರೋನಾ ವೈರಸ್ ಬಾಧಿಸಿದ ಬಳಿಕ ಜನ ಭಾರೀ ಪ್ರಮಾಣದಲ್ಲಿ ಅನಾರೋಗ್ಯ, ಶಕ್ತಿಹೀನತೆ ಹಾಗೂ ವಿವಿಧ ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದು ಶಾರೀರಿಕವಾಗಿ ಸದೃಢತೆಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ರೈಲ್ವೆ ನಿಲ್ದಾಣಗಳಲ್ಲಿ ಬಹು ಫ್ಲಾಟ್ ಫಾರಂಗಳಿರುವ ಸಂದರ್ಭ ಒಂದು ಫ್ಲಾಟ್ ಪಾರಂನಿಂದ ಇನ್ನೊಂದಕ್ಕೆ ಸಾಗುವರೇ ಬಹುದೂರ ಇರಲಿದ್ದು ಇದನ್ನು ಮೆಟ್ಟಿಲುಗಳ ಮೂಲಕ ನಡೆದುಕೊಂಡು ಹೋಗಲು ಭಾರೀ ತ್ರಾಸಪಡುತ್ತಿರುವುದು ಸಹಜವಾಗಿದೆ. ಇದರಿಂದ ಜನ ಅನಾನುಕೂಲತೆ ಎದುರಿಸುತ್ತಿರುವುದನ್ನು ತಪ್ಪಿಸಲು ರೈಲ್ವೆ ಇಲಾಖೆ ಲಿಫ್ಟ್ ಅಥವಾ ಎಸ್ಕಲೇಟರ್ ವ್ಯವಸ್ಥೆಯ ಮೊರೆ ಹೋಗಿರುವುದು ಜನರಿಗೆ ಸಾಕಷ್ಟು ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಆದರೆ ಬಂಟ್ವಾಳದಲ್ಲಿ ಕೋಟ್ಯಂತ ರೂಪಾಯಿ ವ್ಯಯಿಸಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ರೈಲ್ವೆ ನಿಲ್ದಾಣ ಈ ವ್ಯವಸ್ಥೆಯಿಂದ ವಂಚಿತವಾಗಿರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಮಾಜಿ ಸಂಸದರ ಕನಸಿನ ನಿಲ್ದಾಣವಾಗಿರುವ ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಇರುವ ಕೊರತೆ ನೀಗಿಸಲು ಹಾಲಿ ಸಂಸದರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿಶೇಷ ಮುತುವರ್ಜಿ ವಹಿಸಿ ಬಂಟ್ವಾಳದ ನಿಲ್ದಾಣಕ್ಕೆ ಲಿಫ್ಟ್ ಅಥವಾ ಎಸ್ಕಲೇಟರ್ ವ್ಯವಸ್ಥೆಯನ್ನು ಒದಗಿಸಿಕೊಟ್ಟು ಇಲ್ಲಿನ ಕೊರತೆ ನೀಗಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.
ಸೌತ್ ವೆಸ್ಟರ್ನ್ ರೈಲ್ವೆ (ಎಸ್ ಡಬ್ಲ್ಯು ಆರ್) ಮೈಸೂರು ವಿಭಾಗದ ಅಧೀನದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ರೈಲ್ವೆ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ನೇತೃತ್ವದಲ್ಲಿ ಕಾರ್ಮಿಕರು ಹಗಲು-ರಾತ್ರಿ ಕೆಲಸ ನಿರ್ವಹಿಸುವ ಮೂಲಕ ಇದೀಗ ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳಿಸಿ ನೂತನ ಬಂಟ್ವಾಳ ರೈಲು ನಿಲ್ದಾಣವನ್ನು ಸಾರ್ವಜನಿಕರಿಗೆ ಅರ್ಪಿಸುವ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಯದೆ ಒಂದಷ್ಟು ತಡವಾಗಿಯಾದರೂ ಅತ್ಯಂತ ಶೀಘ್ರದಲ್ಲಿ ಸುಂದರ ರೈಲ್ವೇ ನಿಲ್ದಾಣ ಬಂಟ್ವಾಳದ ಜನತೆಗೆ ಅರ್ಪಣೆಯಾಗಲಿದೆ.
ಪ್ರಸ್ತುತ ಬಂಟ್ವಾಳ ರೈಲು ನಿಲ್ದಾಣದಲ್ಲಿ 1 ಹಾಗೂ 2 ಫ್ಲ್ಯಾಟ್ ಫಾರಂ, 400 ಮೀಟರ್ ಉದ್ದಕ್ಕೆ ವಿಶಾಲವಾದ ಪ್ರಯಾಣಿಕರ ಆಸನ ವ್ಯವಸ್ಥೆ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು ಪೂರ್ಣ ಪ್ರಮಾಣದಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣ ಆಧುನೀಕರಣಗೊಳ್ಳುತ್ತಿದೆ.
ಈ ಹಿಂದೆ ರೈಲ್ವೆ ನಿಲ್ದಾಣದ ಆಧುನಿಕತೆಗೆ ಶಿಲಾನ್ಯಾಸ ನೆರವೇರಿಸುವ ಸಂದರ್ಭ ಸಂಸದರ ಜೊತೆ ಮಾತನಾಡಿದ ರೈಲ್ವೆ ಇಲಾಖೆಯ ಡೆಪ್ಯೂಟಿ ಚೀಫ್ ಇಂಜಿನಿಯರ್ ರಾಮಸುಬ್ಬಯ್ಯ ಅವರು, ಬಂಟ್ವಾಳ ರೈಲು ನಿಲ್ದಾಣಕ್ಕೆ ಸುಸಜ್ಜಿತ ಮೇಲ್ಚಾವಣಿ, ಪೂರ್ಣ ಪ್ರಮಾಣದ ಪ್ಲಾಟ್ ಫಾರಂಗಳು, ಪಾರ್ಕಿಂಗ್, ಉದ್ಯಾನವನ, ಉತ್ತಮ ರಸ್ತೆ ವ್ಯವಸ್ಥೆ, ವಿದ್ಯುದೀಪಗಳು, ಶೌಚಾಲಯಗಳು, ಎಸ್ಕಲೇಟರ್ ಹಾಗೂ ಲಿಫ್ಟ್ ಈ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡು ಅಭಿವೃದ್ದಿ ಮಾಡಲಾಗುವುದು ಎಂದಿದ್ದರು. ಆದರೆ ಇದೀಗ ನಿಲ್ದಾಣ ಪೂರ್ಣಗೊಳ್ಳುವ ಹೊತ್ತಿಗೆ ಲಿಫ್ಟ್ ಅಥವಾ ಎಸ್ಕಲೇಟರ್ ವ್ಯವಸ್ಥೆಯ ಕುರುಹು ಇಲ್ಲದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.
0 comments:
Post a Comment