ಬಂಟ್ವಾಳ, ಜೂನ್ 16, 2025 (ಕರಾವಳಿ ಟೈಮ್ಸ್) : ಜೂನ್ 14 ರಂದು ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯ ಮೃತದೇಹ ರಸ್ತೆ ಬದಿಯ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು-ಕಂಬಳ ಮನೆ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಹೆಸರಿಸಲಾಗಿದೆ.
ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ಶನಿವಾರ (ಜೂನ್ 14) ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಅಂದು ತನ್ನ ಪತ್ನಿ ಬೇಬಿ ಜೊತೆಗೂಡಿ ಬಿ ಸಿ ರೋಡಿನ ಡಾ ಶಿವಪ್ರಸಾದ್ ಅವರ ಕ್ಲಿನಿಕಿಗೆ ಔಷಧಿ ತರಲೆಂದು ಅಟೋ ರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಸಂಜೆ ಸುಮಾರು 5 ಗಂಟೆ ವೇಳೆಗೆ ಬೆಂಜನಪದವು ಮೂರು ಮಾರ್ಗ ಎಂಬಲ್ಲಿವರಗೆ ಪತ್ನಿಯೊಂದಿಗೆ ಅಟೋ ರಿಕ್ಷಾದಲ್ಲಿ ಬಂದು ಅಲ್ಲಿ ಸಾಗರ್ ಇಳಿದಿರುತ್ತಾರೆ. ಬಳಿಕ ಮನೆಗೆ ಬರದೆ ನಾಪತ್ತೆಯಾಗಿದ್ದರು. ಈತನ ಮೊಬೈಲಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ನೆರೆಕರೆಯವರಲ್ಲಿ ಹಾಗೂ ಅಂಗಡಿಯವರಲ್ಲಿ ವಿಚಾರಿಸಿದಾಗ ಶನಿವಾರ ರಾತ್ರಿ 9 ಗಂಟೆ ವೇಳೆಗೆ ಬೆಂಜನಪದವು ಇರಾನ್ ಹೋಟೆಲಿನಲ್ಲಿ ಊಟ ಮಾಡಿ ತೆರಳಿರುವುದಾಗಿ ಹೋಟೆಲ್ ಮಾಲಕರು ತಿಳಿಸಿದ್ದು, ಈ ಬಗ್ಗೆ ಸೋಮವಾರ ಬೆಳಿಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸೋಮವಾರವೇ ಇಲ್ಲಿನ ವಿದ್ಯಾನಗರ ರಸ್ತೆಯ ಹೈಸ್ಕೂಲ್ ರೋಡ್ ಬಳಿ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ಮಾಹಿತಿ ಪಡೆದ ಮೃತರ ತಂದೆ ಜನಾರ್ದನ ಪೂಜಾರಿ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸಾಗರ್ ಮೃತದೇಹ ಎಂದು ದೃಢಪಡಿಸಿದ್ದಾರೆ. ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment