ಬಂಟ್ವಾಳ, ಜೂನ್ 23, 2025 (ಕರಾವಳಿ ಟೈಮ್ಸ್) : ತಿಂಗಳ ಹಿಂದೆ ನಡೆದಿದ್ದ ಕ್ಷುಲ್ಲಕ ವಿಚಾರದ ಗಲಾಟೆಯನ್ನೇ ನೆಪವಾಗಿಸಿಕೊಂಡು ವ್ಯಕ್ತಿಯೋರ್ವರಿಗೆ ಇಬ್ಬರ ತಂಡ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಕೊಯಿಲ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ಪುನೀತ್ (19) ಹಾಗೂ ವಿನಾಶ್ ಎಂಬವರ ಮಧ್ಯೆ ತಿಂಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದ್ದು, ಇದರ ಮುಂದುವರಿದ ಭಾಗವಾಗಿ ಭಾನುವಾರ ಸಂಜೆ ಪುನೀತ್ ತನ್ನ ಮಾವನ ಮಗ ನಿತೀನ್ ಜೊತೆ ಕೋಳಿ ಮಾಂಸ ತರಲು, ಕೋಳಿ ಅಂಗಡಿಗೆ ನಡೆದುಕೊಂಡು ಮನೆಯಿಂದ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ ಆರೋಪಿಗಳಾದ ಅವಿನಾಶ್, ರೋಹನ್ ಮತ್ತು ತುಶಾರ್ ಅವರು ಹೊಂಡಾ ಆಕ್ಟಿವಾ ವಾಹನದಲ್ಲಿ ಬಂದು ಪುನೀತ್ ಹತ್ತಿರ ಆಕ್ಟಿವಾ ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು ಅವಿನಾಶ್ ಹಾಗೂ ರೋಹನ್ ಅವರು ಏಕಾಏಕಿಯಾಗಿ ಪುನೀತನ ಮೈಗೆ ಕೈ ಹಾಕಿ, ದೂಡಿದ್ದಲ್ಲದೆ ರೋಹನನು ಕೈಯಿಂದ ಕೈಗೆ, ಬೆನ್ನಿಗೆ, ತಲೆಗೆ ಹೊಡೆದಿದ್ದು, ಅವಿನಾಶನು ಕೈಯಲ್ಲಿ ಕಲ್ಲು ಹಿಡಿದುಕೊಂಡು ತಲೆಗೆ ಹೊಡೆದ ಪರಿಣಾಮ ಪುನೀತ್ ಗಾಯಗೊಂಡಿದ್ದಾರೆ. ಈ ಸಂದರ್ಭ ಪುನೀತನ ಮಾವನ ಮಗ ನಿತೀನ್ ಹಾಗೂ ಆರೋಪಿಗಳ ಜೊತೆಗಿದ್ದ ತುಶಾರ್ ಅವರು ಗಲಾಟೆ ಬಿಡಿಸಿರುತ್ತಾರೆ. ನಂತರ ಅವಿನಾಶ್ ಮತ್ತು ರೋಹನ್ ರವರು ನೀನು ಕಂಪ್ಲೆಂಟ್ ಕೊಟ್ಟು ಏನು ಮಾಡುತ್ತೀಯ ನಾವು ನೋಡುತ್ತೇವೆ ಎಂದು ಬೆದರಿಕೆ ಹಾಕಿ ಅವಿನಾಶನು ಕೈಯಲ್ಲಿದ್ದ ಕಲ್ಲನ್ನು ಅಲ್ಲಿಯೇ ಬಿಸಾಕಿ ಹೋಗಿದ್ದಾನೆ. ಬಳಿಕ ಪುನೀತ್ ಮಾವನ ಮಗ ನಿತೇಶ್ ಜೊತೆಯಲ್ಲಿ ನಡೆದುಕೊಂಡು ಮನೆಯ ಬಳಿ ತಲುಪಿದಾಗ ಪುನಃ ಮನೆಯ ಬಳಿಗೆ ಆಕ್ಟಿವಾದಲ್ಲಿ ಬಂದು ಅವಿನಾಶ್ ಮತ್ತು ರೋಹನ್ ಕೈಯಿಂದ ಬೆನ್ನಿಗೆ, ಕೈಗೆ, ಮುಖಕ್ಕೆ ಹೊಡೆದು ಕಾಲಿನಿಂದ ಒದ್ದಿದ್ದಾರೆ. ಈ ಸಂದರ್ಭ ಪುನೀತ್ ಬೊಬ್ಬೆ ಹಾಕಿದ್ದು ಕೇಳಿ ಅವರ ತಂದೆ, ತಾಯಿ ಮನೆಯಿಂದ ಹೊರಗೆ ಬರುತ್ತಿರುವುದನ್ನು ಕಂಡು ಅವಿನಾಶ್, ರೋಹನ್ ಅವರು ನೀನು ಕಂಪ್ಲೆಂಟ್ ಕೊಟ್ಟು ಏನು ಮಾಡುತ್ತೀಯ ನಾವು ನೋಡುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ.
ಆರೋಪಿಗಳ ಹಲ್ಲೆಯಿಂದ ಗಾಯಗೊಂಡ ಪುನೀತ್ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಪುನೀತ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment