ಬಂಟ್ವಾಳ, ಜೂನ್ 02, 2025 (ಕರಾವಳಿ ಟೈಮ್ಸ್) : ಬಿ ಸಿ ರೋಡು-ಅಡ್ಡಹೊಳೆ ಚತುಷ್ಪತ ಹೆದ್ದಾರಿ ಕಾಮಗಾರಿಯ ಭಾಗವಾಗಿ ಕಲ್ಲಡ್ಕದಲ್ಲಿ ನಿರ್ಮಾಣಗೊಂಡಿರುವ ಮೇಲ್ಸೇತುವೆಯ (ಫ್ಲೈ ಓವರ್) ಒಂದು ಭಾಗ ಸೋಮವಾರದಿಂದ ವಾಹನ ಸಂಚಾರಕ್ಕೆ ಮುಕ್ತವಾಗಿದೆ. ಮಾಣಿಯಿಂದ ಬಿ ಸಿ ರೋಡು ಕಡೆ ಸಂಚರಿಸುವ ವಾಹನಗಳು ಇದೀಗ ಫ್ಲೈ ಓವರ್ ಮೇಲಿಂದ ಸಂಚಾರ ಆರಂಭಿಸಿದೆ.
ಆದರೆ ಈ ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತಗೊಳಿಸಿ ಹಸಿರು ನಿಶಾನೆ ತೋರಿದ್ದು ಮಾತ್ರ ಯಾವುದೇ ಸಂಸದರಾಗಲೀ, ಶಾಸಕರಾಗಲೀ ಅಥವಾ ಕೇಂದ್ರ, ರಾಜ್ಯ ಸರಕಾರದ ಭಾಗವಾಗಿರುವ ಯಾವುದೇ ವ್ಯಕ್ತಿಗಳಾಗಲೀ ಅಥವಾ ಹೆದ್ದಾರಿ ಇಲಾಖಾ ಅಧಿಕಾರಿಗಳಾಗಲೀ ಆಗಿರದೆ ಕನಿಷ್ಠ ಪಕ್ಷ ಜನಪ್ರತಿನಿಧಿಯೂ ಅಲ್ಲದ ಸ್ಥಳೀಯ ವ್ಯಕ್ತಿ, ಆರೆಸ್ಸೆಸ್ ಸಂಘಟನೆಯ ಪ್ರಮುಖರಾಗಿರುವ ಕಲ್ಲಡ್ಕ ಪ್ರಭಾಕರ್ ಭಟ್ ಅವರ ನೇತೃತ್ವದ ತಂಡ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಅಪಸ್ವರಕ್ಕೆ ಕಾರಣವಾಗಿದೆ. ಉದ್ಘಾಟನೆ ಮಾಡಿದ್ದು ಮಾತ್ರವಲ್ಲದೆ ಈ ಮೇಲ್ಸೇತುವೆಗೆ ಕಲ್ಲಡ್ಕ ಶ್ರೀರಾಮ ಮೇಲ್ಸೆತುವೆ ಎಂಬುದಾಗಿ ಸ್ವಯಂ ನಾಮಕರಣ ಮಾಡಿಕೊಂಡು, ಶ್ರೀ ರಾಮನ ಭಾವಚಿತ್ರಕ್ಕೆ ಆರತಿ ಬೆಳಗಿಸಿ ಬಳಿಕ ಉದ್ಘಾಟಿಸಿದ್ದು, ಈ ಬಗ್ಗೆ ಸ್ಥಳೀಯವಾಗಿ ಪರ-ವಿರೋಧ ಚರ್ಚೆಗಳು ಭಾರೀ ಜೋರಾಗಿಯೇ ನಡೆಯುತ್ತಿದೆ.
ಸರಕಾರದ ಅನುದಾನದಿಂದ ಅನುಷ್ಠಾನಗೊಂಡ ಈ ಕಾಮಗಾರಿಯನ್ನು ಕೇಂದ್ರದ ಮಂತ್ರಿ-ಮಾಗಧರೋ, ಸ್ಥಳೀಯ ಸಂಸದರೋ ಅಥವಾ ರಾಜ್ಯ ಸರಕಾರದ ಮಂತ್ರಿ ಮಹಾಶಯರೋ ಸಾಂಕೇತಿಕ ಉದ್ಘಾಟನೆ ನೆರವೇರಿಸಬೇಕಾಗಿದ್ದ ಕಾರ್ಯಕ್ರಮವನ್ನು ಸಂಘ ಪರಿವಾರ ಹಾಗೂ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರು ನೆರವೇರಿಸಿದ್ದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸೋಮವಾರ ಬೆಳಿಗ್ಗೆಯೇ ಭಟ್ ಅವರ ವಿರುದ್ದ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ಕೂಡಾ ದಾಖಲಾಗಿದ್ದು, ಅದೇ ಸಮಯದಲ್ಲಿ ಅವರು ಸೇತುವೆ ಉದ್ಘಾಟನೆಯನ್ನೂ ನೆರವೇರಿಸಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣರಾಗಿದ್ದಾರೆ.
ಮೇಲ್ಸೇತುವೆ ಉದ್ಘಾಟಿಸಿದ ಭಟ್ ಅವರು ಈ ಸಂದರ್ಭ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ಫ್ಲೈ ಓವರ್ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಕೆ ಎನ್ ಆರ್ ಸಂಸ್ಥೆಯವರು ಹೇಳಿದ ಸಮಯಕ್ಕೆ ಸರಿಯಾಗಿ ತುಂಬಾ ಚೆನ್ನಾಗಿ ಯಾವುದೇ ರೀತಿಯ ಮೋಸ ವಂಚನೆ ಇಲ್ಲದೆ ಕಾಮಗಾರಿ ಮುಗಿಸಿದ್ದಾರೆ ಎಂಬ ಸರ್ಟಿಫಿಕೇಟನ್ನೂ ನೀಡಿದ್ದಾರೆ.
0 comments:
Post a Comment