ಮಂಗಳೂರು, ಜೂನ್ 17, 2025 (ಕರಾವಳಿ ಟೈಮ್ಸ್) : ಮಧ್ಯರಾತ್ರಿ ವೇಳೆ ಮನೆ ಬಾಗಿಲು ತಟ್ಟಿದ್ದಾನೆ ಎಂದು ಆರೋಪಿಸಿ ವ್ಯಕ್ತಿಯೋರ್ವನಿಗೆ ಆರೋಪಿಯೋರ್ವ ಕೋಲಿನಿಂದ ಹೊಡೆದ ಪರಿಣಾಮ ಆತ ಮೃತಪಟ್ಟ ಘಟನೆ ಅರ್ಕುಳ ಗ್ರಾಮದ ಶ್ರೀ ಲಕ್ಷ್ಮಿ ಫಾಸ್ಟ್ ಫುಡ್ ಹೋಟೆಲ್ ಹೊರಗಡೆ ಜೂನ್ 14 ರಂದು ಸಂಭವಿಸಿದೆ.
ಹೋಟೆಲ್ ಹೊರಗಡೆ ಅಶ್ವತ್ಥ ಕಟ್ಟೆಯ ಕೆಳಗಡೆ ಮಲಗಿದ್ದ ಲೋಕಯ್ಯ ಟಿ ಅಲಿಯಾಸ್ ಲೋಕಯ್ಯ ಮೂಲ್ಯ (59) ಎಂಬಾತನಿಗೆ ಆರೋಪಿ ರಮೇಶ್ ಗಾಣಿಗ ಎಂಬಾತ ಮರದ ಕೋಲಿನಿಂದ ಮೈ ಕೈಗೆ, ಬೆನ್ನಿಗೆ ಹಾಗೂ ಕುಂಡೆಗೆ ಹೊಡೆಯುತ್ತಿದ್ದು, ಈ ಸಂದರ್ಭ ಸ್ಥಳೀಯ ನಿವಾಸಿ ಗಣೇಶ್ ಎಂಬವರು ಬಂದು ಪ್ರಶ್ನಿಸಿದಾಗ ಹಿಂದಿನ ದಿನ ಮಧ್ಯ ರಾತ್ರಿ ವೇಳೆಯಲ್ಲಿ ಹಾಗೂ ಅದರ ಮೊದಲು ಕೂಡಾ ಲೋಕಯ್ಯ ಅವರು ಮನೆಯ ಬಾಗಿಲನ್ನು ತಟ್ಟಿ ತೊಂದರೆ ನೀಡಿದ್ದು ಇಂತವನು ಬದುಕಿ ಇದ್ದವರಿಗೆಲ್ಲ ಉಪದ್ರ ಕೊಡುವುದಕ್ಕಿಂತ ಮಲಗಿದಲ್ಲಿಯೇ ಸತ್ತು ಹೋದರೆ ಯಾರಿಗೂ ನಷ್ಟವಿಲ್ಲ. ನೀವೆಲ್ಲ ಬಂದುದ್ದರಿಂದ ಇವನು ಬದುಕಿದ ಇಲ್ಲದಿದ್ದರೆ ನನ್ನ ಕೈಯಲ್ಲಿ ಪೆಟ್ಟು ತಿಂದು ಸತ್ತು ಹೋಗುತ್ತಿದ್ದು ಎಂದು ತಿಳಿಸಿದ್ದಾನೆ.
ಬಳಿಕ ಆರೋಪಿಯ ಹೊಡೆತದಿಂದ ನರಳಾಡುತ್ತಿದ್ದ ಲೋಕಯ್ಯ ಅವರನ್ನು ಅಂಬುಲೆನ್ಸಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದು, ಆತನನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಲೋಕಯ್ಯನವರು ರಾತ್ರಿ ವೇಳೆಯಲ್ಲಿ ಆರೋಪಿಯ ಮನೆಯ ಬಾಗಿಲನ್ನು ತಟ್ಟಿ ತೊಂದರೆ ನೀಡಿದ್ದರೆಂದು ದ್ವೇಷದಿಂದಲೇ ಮರದ ಕೋಲಿನಿಂದ ಹಲ್ಲೆ ನಡೆಸಿದ ಪರಿಣಾಮ ಉಂಟಾದ ಒಳ ನೋವಿನ ಕಾರಣದಿಂದಲೇ ಲೋಕಯ್ಯ ಟಿ ಅವರು ಮೃತಪಟ್ಟಿದ್ದಾರೆ ಎಂದು ಗಣೇಶ್ ಅವರು ನೀಡಿದ ದೂರಿನಂತೆ ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment