ಮಂಗಳೂರು, ಜೂನ್ 17, 2025 (ಕರಾವಳಿ ಟೈಮ್ಸ್) : ತಂದೆ ಸೇದಿ ಬಿಸಾಡಿದ್ದ ಬೀಡಿದ ತುಂಡು ನುಂಗಿ ಅಸ್ವಸ್ಥಗೊಂಡ 10 ತಿಂಗಳ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಅಡ್ಯಾರ್ ಗ್ರಾಮದಲ್ಲಿ ಜೂನ್ 14 ರಂದು ಸಂಭವಿಸಿದೆ.
ಮೃತ ಮಗುವನ್ನು ಮೂಲತಃ ಬಿಹಾರ ಮೂಲದ ಉಮೇಶ್ ಎಂಬವರ ಪುತ್ರ ಅನಿಶ್ ಕುಮಾರ್ (10 ತಿಂಗಳು) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತ ಮಗುವಿನ ತಾಯಿ ಲಕ್ಷ್ಮಿದೇವಿ ಅವರು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರು ಮೂಲತಃ ಬಿಹಾರ್ ರಾಜ್ಯದವರಾಗಿದ್ದು ಇವರ ಗಂಡ ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಉಮೇಶ್ ಎಂಬವರಲ್ಲಿ ವೆಡ್ಡಿಂಗ್ ಈವೆಂಟ್ ಡೆಕೊರೇಶನ್ ಕೆಲಸ ಮಾಡಿಕೊಂಡಿರುವುದಾಗಿದೆ, ಪ್ರತಿದಿನದಂತೆ ಜೂನ್ 14 ರಂದು ಗಂಡ ಕೆಲಸಕ್ಕೆ ಹೋಗಿದ್ದು, ಲಕ್ಷ್ಮಿದೇವಿ ತಮ್ಮ ವಾಸ್ತವ್ಯದ ಮನೆಯಲ್ಲಿ ಮಕ್ಕಳೊಂದಿಗೆ ಇರುವಾಗ ಮಧ್ಯಾಹ್ನ ಸುಮಾರು 1.30 ರ ವೇಳೆಗೆ ಮಗ ಅನಿಶ್ ಕುಮಾರ್ ಆಟವಾಡುತಿದ್ದಾಗ ಗಂಡ ಸೇದಿ ಬಿಸಾಡಿದ್ದ ಬೀಡಿಯನ್ನು ನುಂಗಿ ಅಸ್ವಸ್ಥಗೊಂಡಿದ್ದು, ತಕ್ಷಣ ಈತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಮಗು ಚಿಕಿತ್ಸೆಗೆ ಸ್ಪಂದಿಸದೆ ಜೂನ್ 15 ರಂದು ಬೆಳಿಗ್ಗೆ 10.25 ರ ವೇಳೆಗೆ ಮೃತಪಟ್ಟಿದೆ. ಗಂಡನ ನಿರ್ಲಕ್ಷತನದಿಂದ ಬೀಡಿ ನುಂಗಿದ ಪರಿಣಾಮ ಆರೋಗ್ಯದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರಬಹುದಾಗಿದೆ, ಬೀಡಿ ಸೇದಿ ಬಿಸಾಕುವ ಬಗ್ಗೆ ತನ್ನ ಗಂಡನಿಗೆ ಹಲವು ಬಾರಿ ತಿಳಿಸಿದ್ದರು ಪುನ: ಬೀಡಿ ಸೇದಿ ಮನೆಯಲ್ಲಿ ಬಿಸಾಕಿದ ಪರಿಣಾಮ ಮಗುವಿನ ಪ್ರಾಣ ಹೋಗಿದೆ ಎಂದು ಪತ್ನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment