ಬಂಟ್ವಾಳ, ಜೂನ್ 12, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಶಿಥಿಲಗೊಂಡಿರುವ ಹಿನ್ನಲೆಯಲ್ಲಿ ಘನ ವಾಹನ ಸಂಚಾರ ನಿಷೇಧಿಸಿ ಹಾಕಲಾಗಿದ್ದ ಕಬ್ಬಿಣದ ಕಮಾನಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ ಟೆಂಪೋ ಚಾಲಕನ ವಿರುದ್ದ ಪುರಸಭಾ ಮುಖ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ವಾಹನ ಚಾಲಕನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪುರಸಭಾ ಮುಖ್ಯಾಧಿಕಾರಿ ನಝೀರ್ ಅಹಮ್ಮದ್ (60) ಅವರು ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಹಳೇ ರಾಷ್ಟ್ರೀಯ ಹೆದ್ದಾರಿ ಎನ್ ಎಚ್-48 ರ ಸೇತುವೆಯನ್ನು 2004-05 ರಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ವಹಣೆ ಮತ್ತು ದುರಸ್ಥಿ ಬಗ್ಗೆ ಬಂಟ್ವಾಳ ಪುರಸಭೆಗೆ ಹಸ್ತಾಂತರಿಸಿರುತ್ತಾರೆ. ಇದು ಸ್ವಾತಂತ್ರ್ಯಪೂರ್ವದ ಸೇತುವೆಯಾಗಿದ್ದು, ಈ ಹಳೆಯ ಸೇತುವೆಯಲ್ಲಿ ಪ್ರಸ್ತುತ ಸರಕಾರ ಘನ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯ 2 ಬದಿಗಳಲ್ಲಿ ಕಬ್ಬಿಣದ ತಡೆಗಳನ್ನು ಹಾಕಲಾಗಿದೆ. ಸದ್ಯ ಈ ಸೇತುವೆಯಲ್ಲಿ ಸಾರ್ವಜನಿಕ ಲಘು ವಾಹನಗಳು ಮಾತ್ರ ಸಂಚರಿಸುತ್ತಿರುವುದಾಗಿದೆ.
ಆದರೆ ಜೂನ್ 9 ರಂದು ಕೆಎ 19 ಎಇ5621 ನೋಂದಣಿ ಸಂಖ್ಯೆಯ ಘನ ವಾಹನವನ್ನು ಅದರ ಚಾಲಕ ಸೇತುವೆಯ ಧಾರಣಾ ಸಾಮರ್ಥ್ಯದ ಬಗ್ಗೆ ನಿರ್ಲಕ್ಷಿಸಿ ಅದಕ್ಕೆ ಆಳವಡಿಸಿದ ಕಬ್ಬಿಣದ ತಡೆಯನ್ನು ಮುರಿದು ಹಾಕಿ ಸರಕಾರಕ್ಕೆ ಸುಮಾರು 80 ಸಾವಿರ ರೂಪಾಯಿ ನಷ್ಟ ಉಂಟು ಮಾಡಿರುತ್ತಾರೆ. ಈ ಹಿನ್ನಲೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇತುವೆಗೆ ಅಳವಡಿಸಿದ ಕಬ್ಬಿಣ ಕಮಾನಿಗೆ ವಾಹನ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಸೇತುವೆಯ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರ ನಿಷೇಧಿಸಿ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರು ಬುಧವಾರ ಆದೇಶ ಹೊರಡಿಸಿದ್ದು, ಆದೇಶವನ್ನು ಜಾರಿಗೆ ತರುವಂತೆ ಪುರಸಭೆಗೆ ಸೂಚಿಸಿದ್ದರು. ಈ ಪ್ರಕಾರ ಗುರುವಾರ ಬೆಳಿಗ್ಗೆ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಗೆ ರಿಬ್ಬನ್ ಕಟ್ಟಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಸೇತುವೆಯಲ್ಲಿ ಲಘು ವಾಹನಗಳಿಗೂ ಸಂಚಾರಕ್ಕೆ ಅವಕಾಶ ನೀಡದೆ, ಪಾಣೆಮಂಗಳೂರು ಪೇಟೆಗೆ ವಾಹನ ಹಾಗೂ ಜನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಕಲ್ಪಿಸದೆ ಏಕಾಏಕಿ ಸಂಚಾರ ನಿರ್ಬಂಧಿಸಿರುವ ಬಗ್ಗೆ ಇಲ್ಲಿನ ಸಾರ್ವಜನಿಕರು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಣೆಮಂಗಳೂರು ಪೇಟೆ, ಆಲಡ್ಕ ಸಹಿತ ಇಲ್ಲಿನ ವಿವಿಧ ಪ್ರದೇಶಗಳ ಜನರ ಸಂಚಾರ ಹಾಗೂ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ನಿತ್ಯ ಸಂಚಾರಕ್ಕೂ ಸಂಚಕಾರ ಉಂಟಾಗಿದೆ. ಅಲ್ಲದೆ ಬಿರುಸಿನ ಮಳೆಗಾಲದ ನಡುವೆ ಇಲ್ಲಿನ ಜನ ಸಂಚಾರ ವ್ಯವಸ್ಥೆಯಿಲ್ಲದೆ ದ್ವೀಪದ ಪರಿಸ್ಥಿತಿ ಎದುರಿಸಿದ್ದು, ನಾಗರಿಕ ಹಕ್ಕುಗಳ ದಮನ ಮಾಡಿದಂತಾಗಿದೆ ಎಂದು ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಶೀಘ್ರ ಪರಿಹಾರ ಕಲ್ಪಿಸದಿದ್ದಲ್ಲಿ ಅಸ್ತಿತ್ವದ ಉಳಿವಿಗಾಗಿ ಉಗ್ರ ಹೋರಾಟ ಸಂಘಟಿಸುವುದಾಗಿ ಪಾಣೆಮಂಗಳೂರು ನಾಗರಿಕರು ಎಚ್ಚರಿಸಿದ್ದಾರೆ.
0 comments:
Post a Comment