ಬಂಟ್ವಾಳ, ಜೂನ್ 05, 2025 (ಕರಾವಳಿ ಟೈಮ್ಸ್) : ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ (54) ಅವರ ಮೃತದೇಹ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆಯ ಕಿನಾರೆಯಲ್ಲಿರುವ ಬಂಟ್ವಾಳ ಪುರಸಭಾ ನೀರಿನ ಟ್ಯಾಂಕ್ ಒಳಗಡೆ ಗುರುವಾರ ಸಂಜೆ ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆ ಟ್ಯಾಂಕ್ ಸಮೀಪದಲ್ಲಿ ರಮೇಶ್ ಅವರ ಬೈಕ್, ಮೊಬೈಲ್, ಅಂಗಿ ಹಾಗೂ ಚಪ್ಪಲಿ ಕಂಡು ಬಂದಿತ್ತು. ಇದನ್ನು ನೋಡಿ ಸಂಶಯಿಸಿದ ಸ್ಥಳೀಯರು ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕಾಗಮಿಸಿದ ಪೊಲೀಸರು ರಮೇಶ್ ರೈ ಅವರ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಪುತ್ತೂರು ನಗರಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರದ್ದು ಎಂದು ಗೊತ್ತಾದ ಹಿನ್ನಲೆಯಲ್ಲಿ ಅವರ ಮನೆಯವರಿಗೆ ಮಾಹಿತಿ ನೀಡಲಾಗಿತ್ತು. ಮನೆ ಮಂದಿ ಸ್ಥಳಕ್ಕಾಗಮಿಸಿದ ಬಳಿಕ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯ ಈಜುಪಟು ಯುವಕರ ಸಹಕಾರದಿಂದ ನೇತ್ರಾವತಿಗೆ ಹಾರಿರುವ ಸಾಧ್ಯತೆ ಬಗ್ಗೆ ಶಂಕಿಸಿ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆದರೆ ನದಿಯಲ್ಲಿ ಯಾವುದೇ ಸುಳಿವು ಪತ್ತೆಯಾಗಲಿಲ್ಲ.
ಸಂಜೆ ವೇಳೆಗೆ ರಮೇಶ್ ರೈ ಅವರ ಮೃತದೇಹ ನೇತ್ರಾವತಿ ನದಿ ತಟದಲ್ಲಿರುವ ಬಂಟ್ವಾಳ ಪುರಸಭಾ ನೀರಿನ ಟ್ಯಾಂಕ್ ಒಳಗಡೆ ತೇಲಾಡುತ್ತಿರುವುದು ಕಂಡು ಬಂದಿದೆ. ಬಳಿಕ ಸ್ಥಳೀಯ ಈಜುಪಟು ಮುಹಮ್ಮದ್ ಗೂಡಿಬಳಿ ನೇತೃತ್ವದ ಮುಸ್ಲಿಂ ಯುವಕರ ತಂಡ ಟ್ಯಾಂಕ್ ಒಳಗೆ ಇಳಿದು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಸಹಕರಿಸಿದ್ದಾರೆ. ಇವರು ಯಾವ ಕಾರಣಕ್ಕಾಗಿ ಬಂಟ್ವಾಳಕ್ಕೆ ಬಂದು ಜೀವ ಕಳೆದುಕೊಂಡಿದ್ದಾರೆ ಎಂಬುದು ನಿಗೂಢವಾಗಿದ್ದು, ಪೊಲೀಸ್ ತನಿಖೆಯ ಬಳಿಕವಷ್ಟೆ ಕಾರಣ ತಿಳಿದು ಬರಬೇಕಾಗಿದೆ. ಮೃತರು ಪತ್ನಿ, ಪುತ್ರ, ಪುತ್ರಿ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಈ ಬಗ್ಗೆ ಮೃತರ ಪುತ್ರ ವಿನೇಶ್ ರೈ (24) ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment