ಸಮುದಾಯಕ್ಕೆ ನೋವಾದಾಗ ಆಕ್ರೋಶಿತರಾಗುವುದು ಸಹಜ, ಈ ಬಗ್ಗೆ ಪಕ್ಷದಿಂದ ಶೋಕಾಸ್ ನೋಟೀಸ್ ಕ್ರಮ ಸರಿಯಲ್ಲ : ಜಿಲ್ಲಾ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ರಮಾನಾಥ ರೈ ಅಸಮಾಧಾನ - Karavali Times ಸಮುದಾಯಕ್ಕೆ ನೋವಾದಾಗ ಆಕ್ರೋಶಿತರಾಗುವುದು ಸಹಜ, ಈ ಬಗ್ಗೆ ಪಕ್ಷದಿಂದ ಶೋಕಾಸ್ ನೋಟೀಸ್ ಕ್ರಮ ಸರಿಯಲ್ಲ : ಜಿಲ್ಲಾ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ರಮಾನಾಥ ರೈ ಅಸಮಾಧಾನ - Karavali Times

728x90

2 June 2025

ಸಮುದಾಯಕ್ಕೆ ನೋವಾದಾಗ ಆಕ್ರೋಶಿತರಾಗುವುದು ಸಹಜ, ಈ ಬಗ್ಗೆ ಪಕ್ಷದಿಂದ ಶೋಕಾಸ್ ನೋಟೀಸ್ ಕ್ರಮ ಸರಿಯಲ್ಲ : ಜಿಲ್ಲಾ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ರಮಾನಾಥ ರೈ ಅಸಮಾಧಾನ

ರಹಿಮಾನ್ ಹತ್ಯೆ, ಶಾಫಿ ಕೊಲೆಯತ್ನ ಮಾನವೀಯತೆಗೇ ಸವಾಲಾದ ಘಟನೆ, ಅತ್ಯಂತ ವಿಷಾದನೀಯ ಹಾಗೂ ಖಂಡನೀಯ, ಸೂತ್ರದಾರರ ಬಂಧನವೇ ಇದಕ್ಕೆ ಸೂಕ್ತ ಕ್ರಮ


ಬಂಟ್ವಾಳ, ಜೂನ್ 02, 2025 (ಕರಾವಳಿ ಟೈಮ್ಸ್) : ತಾವು ಪ್ರತಿನಿಧಿಸುವ ಸಮುದಾಯಕ್ಕೆ ನೋವಾದಾಗ ಆ ಸಮುದಾಯದ ನಾಯಕರಾಗಿ ತಮಗಾದ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯವನ್ನು ಪ್ರಶ್ನಿಸುವುದು ಸಹಜವಾಗಿದೆ. ಈ ನಿಟ್ಟಿನಲ್ಲಿ ಅಮಾಯಕ ಯುವಕನ ಕಗ್ಗೊಲೆ ಬಗ್ಗೆ ಪಕ್ಷದ ಕೆಲ ಅಲ್ಪಸಂಖ್ಯಾತ ಮುಖಂಡರು ಅವರ ಸಮುದಾಯಕ್ಕಾದ ಅನ್ಯಾಯ ನೋವನ್ನು ತೋರಿಸಲು ಹಾಗೂ ನ್ಯಾಯಕ್ಕಾಗಿ ಆಗ್ರಹಿಸಲು ಸಭೆ ಕರೆದಿದ್ದರು. ಇದು ಸಹಜ ಪ್ರಕ್ರಿಯೆ. ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಾಗಿ ಅಲ್ಲ. ಬದಲಾಗಿ ತಮ್ಮ ನೋವನ್ನು ತೋರಿಸುವ ಸಲುವಾಗಿ ಆಗಿದೆ. ಆದರೆ ಅಂತಹವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ ಶಿಸ್ತು ಕ್ರಮದ ಎಚ್ಚರಿಕೆ ಸರಿಯಲ್ಲ ಎಂದು ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷರೂ ಆಗಿರುವ ಬಿ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. 

ಸೋಮವಾರ ಬಿ ಸಿ ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯಾತೀತ ಶಕ್ತಿಗಳು ವಿಘಟನೆ ಆಗಬಾರದು. ಜಾತ್ಯಾತೀತ ಶಕ್ತಿಗಳು ದುರ್ಬಲವಾದರೆ ಮತೀಯ ಶಕ್ತಿಗಳು ವಿಜೃಂಭಿಸಲು ಅವಕಾಶ ಮಾಡಿದಂತಾಗುತ್ತದೆ. ಪಕ್ಷದೊಳಗಿನ ವಿಚಾರವನ್ನು ನೋವಾದ ಸಮುದಾಯದ ಮಂದಿಗಳನ್ನು ಕರೆದು ವಿಚಾರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ನಿಜವಾದ ನಾಯಕತ್ವದ ಗುಣ. ಈ ಸಂದರ್ಭದಲ್ಲಿ ನಾಯಕರಾದವರು ಪ್ರಜ್ಞಾವಂತಿಕೆ ಮೆರೆಯಬೇಕು. ಈ ಬಗ್ಗೆ ಪಕ್ಷದ ವರಿಷ್ಠರು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಬಂಟ್ವಾಳದಲ್ಲಿ ಧರ್ಮಾಧಾರಿತ ಹತ್ಯೆಗಳು ಮತ್ತೆ ನಡೆದಿರುವುದು ತೀವ್ರ ಖೇದಕರ. ಅಬ್ದುಲ್ ರಹಿಮಾನ್ ಹತ್ಯೆ ಹಾಗೂ ಖಲಂದರ್ ಶಾಫಿ ಮೇಲಿನ ಹತ್ಯಾ ಯತ್ನ ಘಟನೆ ಎಂಬುದು ಮಾನವೀಯತೆಗೇ ಸವಾಲಾಗಿ ನಡೆದಿರುವುದು ಅತ್ಯಂತ ವಿಷಾದನೀಯ. ಇಂತಹ ಘಟನೆಗಳು ತೀವ್ರ ಖಂಡನೀಯವಾಗಿದೆ. ಇದೊಂದು ನಂಬಿಕೆ ದ್ರೋಹದ ಘಟನೆಯಾಗಿದೆ. ಎಲ್ಲ ಸಂದರ್ಭದಲ್ಲಿ ನಡೆದ ಮತೀಯ ಘಟನೆಗಳಿಗೂ ಭಿನ್ನವಾದ ಘಟನೆ ಇದು. ಕೊಲೆಯಾದ ರಹಿಮಾನ್ ಮನೆಗೆ ಸ್ಥಳೀಯ ಹಿಂದೂ ಮುಖಂಡರೇ ಭೇಟಿ ನೀಡಿ ಸಾಂತ್ವನ ಹೇಳಿರುವುದೇ ಇದನ್ನು ಸಾಕ್ಷೀಕರಿಸುತ್ತದೆ ಎಂದ ರಮಾನಾಥ ರೈ ಯಾವುದೇ ಕಾರಣಕ್ಕೂ ಇಂತಹ ಕೃತ್ಯಗಳನ್ನು ಒಪ್ಪತಕ್ಕದ್ದಲ್ಲ. ಈ ಬಗ್ಗೆ ಕಠಿಣ ಕ್ರಮಕ್ಕೆ ಈಗಾಗಲೇ ಸರಕಾರ ಕ್ರಮ ಕೈಗೊಳ್ಳುತ್ತಾ ಇದೆ. ಇಂತಹ ಘಟನೆಗಳಲ್ಲಿ ಸೂತ್ರದಾರರ ಬಂಧನವೇ ಇಂತಹ ಕೃತ್ಯಗಳಿಗೆ ಅಂತ್ಯ ಹಾಡಲು ಸೂಕ್ತ ಕ್ರಮ ಎಂದರು. 

ಇದೊಂದು ನೇರವಾದ ದ್ವೇಷದಿಂದ ಉಂಟಾದ ಕೃತ್ಯವಲ್ಲ. ಬದಲಾಗಿ ಪಿತೂರಿಯಿಂದ ಆಗಿರುವಂತ ಕೃತ್ಯ ಎಂಬುದು ಸಾಬೀತಾಗಿದೆ. ಜಿಲ್ಲೆಯ ಅಹಿತಕರ ಘಟನೆ ಹಿನ್ನಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಆಂಟಿ ಕಮ್ಯುನಲ್ ಫೆÇೀರ್ಸ್ ಸ್ಥಾಪನೆ ಮಾಡಿ ಕಠಿಣ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ ಎಂದ ಮಾಜಿ ಸಚಿವ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ರಮಾನಾಥ ರೈ ಅವರು, ಸನ್ನಿವೇಶವನ್ನು ಸೂಕ್ಷ್ಮವಾಗಿ ಗಮನಿಸಿ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಾಗರಿಕ ಸಮಾಜ ಕೂಡಾ ಇಂತಹ ಕಿಡಿಗೇಡಿಗಳಿಂದ ಬಹಳಷ್ಟು ಜಾಗರೂಕರಾಗಿರಬೇಕಾಗಿದೆ. ಇಂತಹ ಘಟನೆಗಳಲ್ಲಿ ಪೊಲೀಸ್ ಅಧಿಕಾರಿಗಳಲ್ಲಿ ಯಾರೂ ಕೂಡಾ ರಾಜಕೀಯ ಪ್ರಭಾವ ಬೀರುವ ಪ್ರಶ್ನೆಯೇ ಇಲ್ಲ. ಮನುಷ್ಯನ ಪ್ರಾಣ ಬಹಳ ಮುಖ್ಯವಾಗಿದ್ದು, ಅಧಿಕಾರಿಗಳು ಇಂತಹ ಸಂದರ್ಭಗಳಲ್ಲಿ ಕಠಿಣ ನಿಲುವು ತಾಳಬೇಕಾಗಿರುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪೊಲೀಸರು ಸ್ವತಂತ್ರವಾಗಿ ತನಿಖೆ ಮಾಡುವ ವಾತಾವರಣ ನಿರ್ಮಾಣವಾಗಬೇಕು ಎಂದವರು ಆಶಿಸಿದರು. 

ಇದೇ ವೇಳೆ ತಾಲೂಕಿನಲ್ಲಿ ಡೆಂಗ್ಯೂ ಜ್ವರ ಮತ್ತೆ ಸದ್ದು ಮಾಡಿದ್ದು, ಈ ಬಗ್ಗೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಸಕಾಲಿಕವಾಗಿ ಎಚ್ಚೆತ್ತುಕೊಂಡು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಮಾನಾಥ ಆಗ್ರಹಿಸಿದರು. 

ಈ ಸಂದರ್ಭ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ ಮಾಣಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಜಯಂತಿ ಪೂಜಾರಿ, ಪದ್ಮನಾಭ ರೈ, ಸುದರ್ಶನ್ ಜೈನ್, ಪದ್ಮಶೇಖರ್ ಜೈನ್ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸಮುದಾಯಕ್ಕೆ ನೋವಾದಾಗ ಆಕ್ರೋಶಿತರಾಗುವುದು ಸಹಜ, ಈ ಬಗ್ಗೆ ಪಕ್ಷದಿಂದ ಶೋಕಾಸ್ ನೋಟೀಸ್ ಕ್ರಮ ಸರಿಯಲ್ಲ : ಜಿಲ್ಲಾ ಕಾಂಗ್ರೆಸ್ ನಡೆಗೆ ಮಾಜಿ ಸಚಿವ ರಮಾನಾಥ ರೈ ಅಸಮಾಧಾನ Rating: 5 Reviewed By: karavali Times
Scroll to Top