ಮಂಗಳೂರು, ಸೆಪ್ಟೆಂಬರ್ 22, 2025 (ಕರಾವಳಿ ಟೈಮ್ಸ್) : ಮಾದಕ ವಸ್ತುಗಳ ವಿರುದ್ದ ಕಾರ್ಯಾಚರಣೆ ನಡೆಸಿದ ಮಂಗಳೂರು ನಗರದ ಸಿಸಿಬಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾವೂರಿನ ಗಾಂಧಿನಗರದ ಮಲ್ಲಿ ಲೇ ಔಟ್ ಎಂಬಲ್ಲಿ ಸೆ 21 ರಂದು ದಾಳಿ ನಡೆಸಿದ ಸಿಸಿಬಿ ಪೊಲೀಸರು ಸ್ಕೂಟರಿನಲ್ಲಿ ಎಂಡಿಎಂಎ ಮಾದಕ ವಸ್ತು ಹೊಂದಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕಾವೂರು-ಗಾಂಧಿನಗರ ನಿವಾಸಿ ಚಿರಾಗ್ ಸನಿಲ್ ಹಾಗೂ ಹೊಯಿಗೆ ಬೈಲು- ಅಶೋಕ ನಗರ ನಿವಾಸಿ, ಆಲ್ವಿನ್ ಕ್ಲಿಂಟನ್ ಡಿ ಸೋಜಾ ಎಂದು ಹೆಸರಿಸಲಾಗಿದೆ. ಬಂಧಿತರಿಂದ 22.30 ಲಕ್ಷ ಮೌಲ್ಯದ 111.83 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಮಾದಕ ವಸ್ತು ದೊರೆತ ಮೂಲಗಳ ಬಗ್ಗೆ ಬಂಧಿತರನ್ನು ವಿಚಾರಿಸಿದಾಗ ಕೇರಳದ ಅಬ್ದುಲ್ ಕರೀಂ ಎಂಬಾತ ನೀಡಿದ ಹಣದಿಂದ ಮುಂಬೈಯಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್ ಎಂಬಾತನಿಂದ ಆರೋಪಿ ಚಿರಾಗ್ ಸನಿಲ್ ಖರೀದಿ ಮಾಡಿ ತಂದಿರುವ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಮಾದಕ ವಸ್ತು ಖರೀದಿಸಲು ಹಣವನ್ನು ನೀಡಿದ ಆರೋಪಿ ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯ, ನಿಲಾಂಬುರ್ ತಾಲೂಕು, ಪೂಂಗೋಡೆ ನಿವಾಸಿ ಮೊಯಿದಿನ್ ಕುಟ್ಟಿ ಎಂಬವರ ಮಗ ಅಬ್ದುಲ್ ಕರೀಂ ಇ.ಕೆ (52) ಎಂಬಾತನನ್ನು ಸೆ 22 ರಂದು ಮಂಗಳೂರು ಕೇಂದ್ರ ರೇಲ್ವೆ ನಿಲ್ದಾಣದ ಬಳಿ ದಸ್ತಗಿರಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಿಸಿದಾಗ ತಾವುಗಳು ತಮ್ಮ ಬಳಿ ಇದ್ದ ಕೊಕೇನ್ ಮಾದಕ ವಸ್ತುಗಳನ್ನು ಈಗಾಗಲೇ ಮೂರು ವ್ಯಕ್ತಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸಿಸಿಬಿ ಘಟಕದ ಪೊಲೀಸ್ ಉಪನಿರೀಕ್ಷಕರು ಸದರಿ ವ್ಯಕ್ತಿಗಳ ಮಾಹಿತಿ ಪಡೆದು ಸೆ 21 ರಂದು ರಾತ್ರಿ 8.45 ಗಂಟೆಗೆ ಮಣ್ಣಗುಡ್ಡೆಯ ಸೆಂಟ್ರಲ್ ವೇರ್ ಹೌಸ್ ಬಳಿ ಮೂರು ಸ್ಕೂಟರುಗಳಲ್ಲಿ ನಿಂತುಕೊಂಡಿದ್ದವರ ಮೇಲೆ ದಾಳಿ ಮಾಡಿದಾಗ ತಪ್ಪಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಅವರಿಂದ ಸುಮಾರು 1.90 ಲಕ್ಷ ರೂಪಾಯಿ ಮೌಲ್ಯದ 21.03 ಗ್ರಾಂ ಕೊಕೇನ್ ಸ್ವಾದೀನಪಡಿಸಿಕೊಡಿದ್ದು, ಮಾರಾಟ ಮಾಡುತ್ತಿದ್ದ ಆರೋಪಿಗಳಾದ ಮಂಗಳೂರು-ಕುಲಶೇಖರ ಸಿಲ್ವರ್ ಗೇಟ್ ನಿವಾಸಿ ಜಗನ್ನಾಥ ಎಂಬವರ ಪುತ್ರ ಜನನ್ ಅಲಿಯಾಸ್ ಜನನ್ ಜಗನ್ನಾಥ (28), ಮಂಗಳೂರು, ಬೋಳೂರು-ಪರಪ್ಪು ಅಮೃತಾನಂದಮಯಿ ಮಠ ಹಿಂದುಗಡೆ ನಿವಾಸಿ ದೇವದಾಸ ಬಂಗೇರ ಅವರ ಪುತ್ರ ರಾಜೇಶ್ ಬಂಗೇರ ಅಲಿಯಾಸ್ ಅಚ್ಚು ಅಲಿಯಾಸ್ ರಕ್ಷಿತ್ (30), ಹಾಗೂ ಅಶೋಕನಗರ-ದಂಬೆಲ್ ನಿವಾಸಿ ಸುರೇಶ ಎಂಬವರ ಪುತ್ರ ವರುಣ್ ಗಾಣಿಗ (28) ಅವರನ್ನು ವಶಕ್ಕೆ ಪಡೆದು ದೂರು ನೀಡಿದ ಮೇರೆಗೆ (ಒಟ್ಟು 5 ಜನ ಆರೋಪಿಗಳ ಮೇಲೆ) ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಎರಡೂ ಪ್ರಕರಣಗಳಲ್ಲಿ ದಸ್ತಗಿರಿಯಾದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇದೇ ರೀತಿ ಎಲ್ಲಾ ಪ್ರಕರಣಗಳಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಿದ ಜಾಲ, ಮಾದಕ ವಸ್ತುಗಳನ್ನು ಉಪಯೋಗಿಸುವ ವ್ಯಕ್ತಿಗಳ ಮತ್ತು ಪೆಡ್ಲರ್ ಗಳ ಬಗ್ಗೆ ತನಿಖೆಗೊಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.


















0 comments:
Post a Comment