ಮಂಗಳೂರು, ಸೆಪ್ಟೆಂಬರ್ 13, 2025 (ಕರಾವಳಿ ಟೈಮ್ಸ್) : ತುಳು ಭಾಷೆಯ ಮೂಲಕ ತುಳುನಾಡಿನಲ್ಲಿ ಬಾಂಧವ್ಯದ ಬೆಸುಗೆಯನ್ನು ಬೆಸೆಯಲಾಗಿದೆ. ಎಲ್ಲಾ ಜಾತಿ ಸಮುದಾಯದವರು ತುಳು ಭಾಷೆ ಬಗ್ಗೆ ವಿಶೇಷವಾದ ಅಭಿಮಾನವನ್ನು ಹೊಂದಿದ್ದಾರೆ ಎಂದು ಮಂಗಳೂರ ಪದುವಾ ಪದವಿ ಕಾಲೇಜು ಪ್ರಾಂಶುಪಾಲ ಅರುಣ್ ವಿಲ್ಸನ್ ಲೋಬೋ ಹೇಳಿದರು.
ಮಂಗಳೂರು-ಉರ್ವಸ್ಟೋರಿನಲ್ಲಿರುವ ತುಳು ಭವನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಪದುವಾ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಆಯೋಜಿಸಿದ ‘ಅಕಾಡೆಮಿಡ್ ಒಂಜಿ ದಿನ, ಬಲೆ ತುಳು ಓದುಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಊರಿನ ಭಾಷೆಯ ಸಾಹಿತ್ಯ ಓದುವ ಮೂಲಕ ನಮ್ಮ ಪರಿಸರದ ಜ್ಞಾನ ಹಾಗೂ ಮಾಹಿತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ತುಳು ಸಾಹಿತ್ಯ ಲೋಕದ ಪರಿಚಯ ಮಾಡುವ ಸಲುವಾಗಿ ಹಾಗೂ ಓದುವ ಅಭಿರುಚಿ ಮೂಡಿಸುವ ಉದ್ದೇಶದಿಂದ ಅಕಾಡೆಮಿಯಲ್ಲಿ ‘ಬಲೆ ತುಳು ಓದಗ’ ಅಭಿಯಾನ ಆಯೋಜಿಸಲಾಗಿದೆ. ತುಳು ಅಕಾಡೆಮಿಯ ಗ್ರಂಥಾಲಯದಲ್ಲಿ ಸುಮಾರು ಐದು ಸಾವಿರ ಪುಸ್ತಕಗಳಿದ್ದು, ತುಳು ಭಾಷೆ, ಸಾಹಿತ್ಯ, ಜಾನಪದ, ಸಂಸ್ಕೃತಿ, ಇತಿಹಾಸದ ಬಗ್ಗೆ ಅಧ್ಯಯನ ಮಾಡುವವರಿಗೆ ಅನುಕೂಲಕರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪದುವಾ ಪದವಿ ಕಾಲೇಜು ಉಪ ಪ್ರಾಂಶುಪಾಲ ಪೆÇ್ರ ರೋಶನ್ ವಿನ್ಸಿ ಸಾಂತುಮಯೋರ್, ಕಾರ್ಯಕ್ರಮದ ವಿದ್ಯಾರ್ಥಿ ಸಂಚಾಲಕ ನವೀನ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ 25 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಓದಿನ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅಕಾಡೆಮಿ ಸದಸ್ಯೆ ಅಕ್ಷಯ ಆರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
















0 comments:
Post a Comment