ಬಂಟ್ವಾಳ, ಸೆಪ್ಟೆಂಬರ್ 29, 2025 (ಕರಾವಳಿ ಟೈಮ್ಸ್) : ಬಂಟ್ವಾಳ ಬೈಪಾಸ್ ಜಂಕ್ಷನ್ನಿನಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿ ಹೊಂದಿ ಕಾರ್ಯಾಚರಿಸುತ್ತಿರುವ “ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ” ಇದರ 17ನೇ ಶಾಖೆಯು ಕಡಬ ತಾಲೂಕು ಆಲಂಕಾರುವಿನ ಮಾತೃ ಕೃಪಾ ಕಟ್ಟಡದಲ್ಲಿ ಅಕ್ಟೋಬರ್ 5 ರಂದು ಶುಭಾರಂಭಗೊಳ್ಳಲಿದೆ ಎಂದು ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಲಾಲ್ ತಿಳಿಸಿದರು.
ಸೋಮವಾರ ಸಂಜೆ ಬ್ಯಾಂಕಿನ ಕೇಂದ್ರ ಕಚೇರಿಯಲ್ಲಿ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಬಂಟ್ವಾಳ ಪಟ್ಟಣ, ಫರಂಗಿಪೇಟೆ, ವಿಟ್ಲ, ಮುಡಿಪು, ಕುಕ್ಕಾಜೆ, ಬ್ಯೆಪಾಸ್, ಪಡೀಲ್, ಕಲ್ಲಡ್ಕ, ಬಜಪೆ, ಬಿ ಸಿ. ರೋಡು, ಪೂಂಜಾಲಕಟ್ಟೆ, ಪುತ್ತೂರು, ಮೆಲ್ಕಾರ್, ಸಿದ್ದಕಟ್ಟೆ, ಉಪ್ಪಿನಂಗಡಿ ಮತ್ತು ತೊಕ್ಕೊಟ್ಟು-ದೇರಳಕಟ್ಟೆ ಈ 16 ಶಾಖೆಗಳಲ್ಲಿ ಬ್ಯಾಂಕ್ ಉತ್ತಮ ಸೇವಾ ಸೌಲಭ್ಯವನ್ನು ನೀಡುತ್ತಾ ಬಂದಿದ್ದು, ಗ್ರಾಹಕರ ವಿಶ್ವಾಸ ಗಳಿಸಿದೆ ಎಂದರು.
ನೂತನ 17ನೇ ಅಲಂಕಾರು ಶಾಖೆಯನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ ಅವರು ಉದ್ಘಾಟಿಸಲಿದ್ದು, ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಆಶೀರ್ವಚನಗೈಯುವರು. ಸಂಸದ ಕ್ಯಾ ಬ್ರಿಜೇಶ್ ಚೌಟ ಭದ್ರತಾ ಕೊಠಡಿ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ. ಸೇಫ್ ಲಾಕರ್ ಮಂಗಳೂರು ಕುಲಾಲ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಗಣಕ ಯಂತ್ರದ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್ ಎನ್ ರಮೇಶ್ ಠೇವಣಿ ಪತ್ರ ಬಿಡುಗಡೆಗೊಳಿಸುವರು. ಬ್ಯಾಂಕಿನ ಅಧ್ಯಕ್ಷ ಸುರೇಶ್ ಕುಲಾಲ್ ಅಧ್ಯಕ್ಷತೆ ವಹಿಸುವರು. ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಶೀಲ, ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ದಿವಾಕರ ಮೂಲ್ಯ, ಅಲಂಕಾರು ಕೃ ಪ ಸ ಸಂಘದ ಅಧ್ಯಕ್ಷ ರಮೇಶ್ ಭಟ್ ಯು, ಪುತ್ತೂರು ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ ಎಸ್, ಪುತ್ತೂರು ವಕೀಲರ ಸಂಘದ ಕೋಶಾಧಿಕಾರಿ ಮಹೇಶ್ ಸವಣೂರು, ದ ಕ ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಪೀರ್ ಮೊಹಮ್ಮದ್ ಸಾಹೇಬ್, ಆಲಂಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿ ಪೂಜಾರಿ, ಪಿಡಿಒ ಸುಜಾತ ಕೆ, ಆಲಂಕಾರು ಶತಾಕ್ಷಿ ಕ್ಲಿನಿಕ್ ಇದರ ಡಾ ಕೃತಿ ಶೆಟ್ಟಿ, ಕಟ್ಡದ ಮಾಲಕ ಕುಶಾಲಪ್ಪ ಗೌಡ ಸಹಿತ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಸಂಘದ 18ನೇ ಶಾಖೆಯು ಮುಂದಿನ ಜನವರಿ 14 ರಂದು ಬೋಳಿಯಾರಿನಲ್ಲಿ ಶುಭಾರಂಭಗೊಳ್ಳಲಿದೆ ಎಂದ ಅಧ್ಯಕ್ಷ ಸುರೇಶ್ ಕುಲಾಲ್ ಮುಂದಿನ ದಿನಗಳಲ್ಲಿ ಇನ್ನು ನಾಲ್ಕು ಶಾಖೆಗಳನ್ನು ಆರಂಭಿಸಲು ಆಡಳಿತ ಮಂಡಳಿ ತೀರ್ಮಾನಿಸಿದ್ದು, ಅ ಮೂಲಕ ಇನ್ನಷ್ಟು ಜನರಿಗೆ ಉದ್ಯೋಗ ನೀಡುವ ಚಿಂತನೆ ಹೊಂದಿದ್ದೇವೆ ಎಂದರು.
ಬಂಟ್ವಾಳ ಸಮಾಜ ಸೇವಾ ಸಹಕಾರಿ ಸಂಘ ಬ್ಯಾಂಕ್ 1981 ರ ಮೇ 24ರಂದು ಸ್ವಾತಂತ್ರ್ಯ ಯೋಧ ಹಾಗೂ ಸಮಾಜರತ್ನ ಡಾ ಅಮ್ಮೆಂಬಳ ಬಾಳಪ್ಪ ಅವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರೀಣ ಶ್ರೀ ಬಿ ಹೂವಯ್ಯ ಮೂಲ್ಯ ಅವರ ಸಾರಥ್ಯದಲ್ಲಿ ಸ್ಥಾಪನೆಯಾಗಿದೆ. ಬ್ಯಾಂಕ್ ಉದ್ಘಾಟನೆ ಸಮಾರಂಭದಲ್ಲಿ ಆಗಿನ ಕರ್ನಾಟಕ ಸರಕಾರದ ಹಣಕಾಸು ಮತ್ತು ಪ್ರವಾಸೋದ್ಯಮ ಸಚಿವ ಎಂ ವೀರಪ್ಪ ಮೊಯಿಲಿ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಮುಖ್ಯ ಸಚೇತಕ ಭಾಸ್ಕರ ಶೆಟ್ಟಿ, ಲೋಕಸಭಾ ಸದಸ್ಯ ಬಿ ಜನಾರ್ಧನ ಪೂಜಾರಿ, ರಾಜ್ಯಸಭಾ ಸದಸ್ಯ ಇಬ್ರಾಹಿಂ, ವಿಧಾನ ಸಭಾ ಸದಸ್ಯ ಬಿ ಎ ಮೊೈದಿನ್À, ತಾಲೂಕು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ ಮಹಾಬಲ ಶೆಟ್ಟಿ ಅವರುಗಳು ಭಾಗವಹಿಸಿದ್ದರು, ಆಗ 131 ಸದಸ್ಯರಿಂದ 22,620/- ರೂಪಾಯಿ ಪಾಲು ಬಂಡವಾಳದೊಂದಿಗೆ ಬ್ಯಾಂಕ್ ಕಾರ್ಯಾರಂಭವನ್ನು ಮಾಡಿತ್ತು ಎಂದ ಸುರೇಶ್ ಕುಲಾಲ್ 2025ರ ಅಂತ್ಯಕ್ಕೆ ಸಹಕಾರಿಯಲ್ಲಿ ಒಟ್ಟು 9047 ‘ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ 8.04 ಕೋಟಿ, ಠೇವಣಾತಿಗಳು 229.47 ಕೋಟಿ, ನಿಧಿಗಳು 19.78 ಕೋಟಿ, ವಿನಿಯೋಗಗಳು 55.55 ಕೋಟಿ, ಸಾಲಗಳು 215.21 ಕೋಟಿ ಇದ್ದು ವಸೂಲಾತಿ ಶೇಕಡ 95.04 ಆಗಿರುತ್ತದೆ. 2024-25ನೇ ಸಾಲಿನಲ್ಲಿ 1159.91 ಕೋಟಿ ವ್ಯವಹಾರ ನಡೆಸಿ 5.04 ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ 259.66 ಕೋಟಿ ಮೀರಿದ್ದು ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಆಗಿರುತ್ತದೆ ಎಂದರು.
ಪ್ರಸ್ತುತ 2025ಕ್ಕೆ ಸಹಕಾರಿಯಲ್ಲಿ ಒಟ್ಟು 9140 ‘ಎ’ ತರಗತಿ ಸದಸ್ಯರಿದ್ದು ಪಾಲು ಬಂಡವಾಳ 8.05 ಕೋಟಿ, ಠೇವಣಾತಿಗಳು 245.70 ಕೋಟಿ, ಸಾಲಗಳು 229.33 ಕೋಟಿ ಆಗಿರುತ್ತದೆ. ಸಂಘದ ದುಡಿಯುವ ಬಂಡವಾಳ 275.80 ಕೋಟಿ ಆಗಿರುತ್ತದೆ ಎಂದ ಅವರು ಸಹಕಾರಿಯು 2006ರಲ್ಲಿ ಬೆಳ್ಳಿ ಹಬ್ಬವನ್ನು ಆಚರಿಸಿರುತ್ತದೆ. ಕೇಂದ್ರ ಕಛೇರಿ ಹಾಗೂ ಬಂಟ್ವಾಳ ಬೈಪಾಸ್ ಶಾಖೆಯು ಬೈಪಾಸು ಜಂಕ್ಷನ್ನಿನ ಸ್ವಂತ ಕಟ್ಟಡದಲ್ಲಿ ಕಾರ್ಯಚರಿಸುತ್ತಿದೆ. ಪೂಂಜಾಲಕಟ್ಟೆ, ಮುಡಿಪು ಹಾಗೂ ಉಪ್ಪಿನಂಗಡಿ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಹಕಾರಿಯಲ್ಲಿ 69 ಖಾಯಂ ಸಿಬ್ಬಂದಿಗಳು ಹಾಗೂ ಇತರ ಠೇವಣಾತಿ ಸಂಗ್ರಾಹಕರಾಗಿ 44 ಮಂದಿ ಕಾರ್ಯನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರಿಗೆ ಉದ್ಯೋಗ ನಿಸೀಡುವ ಚಿಂತನೆ ಆಡಳಿತ ಮಂಡಳಿಯದ್ದಾಗಿರುತ್ತದೆ. ಗ್ರಾಹಕರ ಸೇವೆಯ ಅನುಕೂಲಕ್ಕಾಗಿ ತ್ವರಿತ ಸಾಲ ಸೌಲಭ್ಯ ಜಾರಿಗೊಳಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಸಹಕಾರಿಯ ಹಿತದೃಷ್ಟಿಯಿಂದ ಆನ್ ಲೈನ್ ಮುಖಾಂತರ ಸೇವೆಯನ್ನು ಕೊಡುವ ಬಗ್ಗೆ ಆಡಳಿತ ಮಂಡಳಿಯ ಯೋಜನೆಯಂತೆ ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ಸಹಕಾರಿಯ ವತಿಯಿಂದ 2024-25ನೇ ಸಾಲಿನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಸದಸ್ಯರ ಮಕ್ಕಳಿಗೆ 6.88 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದ ಸುರೇಶ ಕುಲಾಲ್ ಉನ್ನತ ವ್ಯಾಸಂಗಕ್ಕಾಗಿ ಸಹಕಾರಿಯಲ್ಲಿ ವಿದ್ಯಾ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸದಸ್ಯರ ಅನೂಕೂಲಕ್ಕಾಗಿ ಇ-ಸ್ಟ್ಯಾಂಪ್ ಸೌಲಭ್ಯವನ್ನು ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಆಳವಡಿಸಲಾಗಿದೆ ಎಂದರು.
ಸಹಕಾರಿಯಲ್ಲಿ ಪ್ರಸ್ತುತ 236 ಅಮೂಲ್ಯ ಸ್ವಸಹಾಯ ಗುಂಪುಗಳು ಇದ್ದು 2125 ಸದಸ್ಯರು ಸಕ್ರಿಯವಾಗಿ ವ್ಯವಹರಿಸುತ್ತಿದ್ದು ಒಟ್ಟು 88,32,630.50 ಉಳಿತಾಯವನ್ನು ಮಾಡಿರುತ್ತಾರೆ. 2024-25ನೇ ಸಾಲಿನಲ್ಲಿ ಗುಂಪುಗಳಿಗೆ 2,02,66,000.00 ಸಾಲವನ್ನು ನೀಡಿದ್ದು ವರ್ಷಾಂತ್ಯಕ್ಕೆ 2,12,29,676.00 ಹೊರಬಾಕಿ ಇರುತ್ತದೆ. ಸಹಕಾರಿಯ ಸಂಘದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೆ ,84,000.00ನ್ನು ನೀಡಲಾಗಿದೆ ಎಂದ ಬ್ಯಾಂಕ್ ಅಧ್ಯಕ್ಷ ಸದಸ್ಯರಿಗೆ ಸೇಫ್ ಡೆಪಾಸಿಟ್ ಲಾಕರ್ ಸೌಲಭ್ಯವನ್ನು ನೀಡಲಾಗುತ್ತಿದೆ. ಸಿಬ್ಬಂದಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಒದಗಿಸಲಾಗಿದೆ. 10,000 ಮೇಲ್ಪಟ್ಟ ನಿರಖು ಠೇವಣಾತಿದಾರರಿಗೆ ಒಂದು ಲಕ್ಷ ಮೊತ್ತದ ಅಪಘಾತ ವಿಮೆಯ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಸದಸ್ಯರಿಗೆ ಸರಕಾರದ ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ ಯೋಜನೆ ಮತ್ತು ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಉಪಾಧ್ಯಕ್ಷ ಜನಾರ್ದನ ಬೊಂಡಾಲ, ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯ, ನಿರ್ದೇಶಕರಾದ ರಮೇಶ್ ಸಾಲಿಯಾನ್, ಸುರೇಶ್ ಕುಲಾಲ್ ಎನ್, ಬೋಜ ಸಾಲಿಯಾನ್, ಬಿ ರಮೇಶ್ ಸಾಲಿಯಾನ್, ಕಿರಣ್ ಕುಮಾರ್ ಎ, ಜಗನ್ನಿವಾಸ ಗೌಡ, ಗಣೇಶ್ ಸಮಗಾರ, ರೇಖಾ ನಾಯಕ್, ಸಹಾಯಕ ಪ್ರಧಾನ ವ್ಯವಸ್ಥಾಪಕ ಮೋಹನ್ ಎಂ ಕೆ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.






















0 comments:
Post a Comment