ಮಂಗಳೂರು, ಸೆಪ್ಟೆಂಬರ್ 12, 2025 (ಕರಾವಳಿ ಟೈಮ್ಸ್) : ಕಳೆದ ಜೂನ್ 2 ರಂದು ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಅಂಗಡಿಯ ಬಳಿ ತಾಯಿಯ ಜೊತೆ ನಿಂತಿದ್ದ ಮಗುವಿನ ಕತ್ತಿನಿಂದ ಚಿನ್ನದ ಸರ ಎಗರಿಸಿದ ಪ್ರಕರಣ ಬೇಧಿಸಿದ ಉಳ್ಳಾಲ ಪೊಲೀಸರು ಚಿನ್ನಾಭರಣ ಸಹಿತ ಕಳ್ಳಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಕಳ್ಳಿಯನ್ನು ಉಳ್ಳಾಲ ನಿವಾಸಿ ಶ್ರೀಮತಿ ಮಿನ್ನತ್ ಎಂದು ಹೆಸರಿಸಲಾಗಿದೆ. ಬಂಧಿತಳಿಂದ ಸುಮಾರು 1.80 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ಜೂನ್ 2 ರಂದು ಉಳ್ಳಾಲ ತಾಲೂಕು ಬೆಳ್ಮ ಗ್ರಾಮದ ನಿವಾಸಿ ಮಹಿಳೆ ಶ್ರೀಮತಿ ರಹಮತ್ ಎಂಬವರು ತನ್ನ ಮಕ್ಕಳೊಂದಿಗೆ ತೊಕ್ಕೊಟ್ಟುವಿನ ಸಾಗರ್ ಕಲೆಕ್ಷನ್ ಅಂಗಡಿಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಮಳೆ ಬಂದ ಕಾರಣ ಸ್ಟ್ರೀಟ್ ಪ್ಯಾಲೇಸ್ ಬೇಕರಿಯ ಮುಂದೆ ನಿಂತುಕೊಂಡಿದ್ದಾಗ ತನ್ನ ಮಗಳ ಕುತ್ತಿಗೆಯಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಯಾರೋ ಬುರ್ಖಾ ಧರಿಸಿದ್ದ ಹೆಂಗಸು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಖಚಿತ ಮಾಹಿತಿಯ ಆಧಾರದ ಮೇಲೆ ಆರೋಪಿತೆ ಉಳ್ಳಾಲದ ನಿವಾಸಿ ಶ್ರೀಮತಿ ಮಿನ್ನತ್ ಎಂಬಾಕೆಯನ್ನು ಶುಕ್ರವಾರ (ಸೆ 12) ವಶಕ್ಕೆ ಪಡೆದು ಸುಲಿಗೆ ಮಾಡಿದ 10 ಗ್ರಾಂ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿತೆಯ ವಿಚಾರಣೆ ಸಮಯದಲ್ಲಿ ಜುಲೈ 9 ರಂದು ಫಜೀರ್ ಎಂಬಲ್ಲಿರುವ ಕೆಎಂಎಸ್ ಕನ್ವೆನ್ಷನ್ ಸಭಾಂಗಣಕ್ಕೆ ಮದುವೆ ಕಾರ್ಯಕ್ರಮದಲ್ಲಿ ಬ್ಯಾಗಿನಿಂದ 8 ಗ್ರಾಂ ತೂಕದ ಚಿನ್ನದ ಸರವನ್ನು ಕೂಡಾ ಕಳವು ಮಾಡಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಚಿನ್ನದ ಸರವನ್ನು ಸಹ ಇದೇ ವೇಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಿಳಾ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

















0 comments:
Post a Comment