ಬಂಟ್ವಾಳ, ಜನವರಿ 11, 2026 (ಕರಾವಳಿ ಟೈಮ್ಸ್) : ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಕ್ತಿ ತೋರಿಸಬೇಡಿ. ಇದು ಸಂವಿಧಾನಕ್ಕೆ ಸವಾಲು ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎ ಐ ಎಲ್ ಎ ಜೆ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೈಕೋರ್ಟ್ ನ್ಯಾಯವಾದಿ ಕ್ಲಿಪ್ಟನ್ ಡಿ’ ರೊಜಾರಿಯೋ ಹೇಳಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (ಎ ಐ ಎಲ್ ಎ ಜೆ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಹಾಗೂ ಲೀಗಲ್ ಪ್ರೆಂಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬಿ ಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಜನವರಿ 10 ರಂದು ಆಯೋಜಿಸಲಾಗಿದ್ದ ‘ಸಂವಿಧಾನದ ಮುಂದಿರುವ ಸವಾಲುಗಳು’ ಎಂಬ ವಿಚಾರವಾಗಿ ಮಾತನಾಡಿದ ಅವರು, ಇಂದು ರಾಜಕೀಯ ನಾಯಕರನ್ನು ಹೀರೋಗಳನ್ನಾಗಿ ಭಾರೀ ಭಕ್ತಿಯಿಂದ ನೋಡುತ್ತಿರುವುದು ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಭಕ್ತರಾಗಿಬಿಟ್ಟರೆ ಪ್ರಭುತ್ವವನ್ನು ಪ್ರಶ್ನೆ ಮಾಡೋದು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಈ ಅಪಾಯವನ್ನು 1974ರಲ್ಲಿಯೇ ಹೇಳಿದ್ದರು. ಇದನ್ನು ನಾವು ಭಾರತ ಸಂವಿಧಾನದ ಭಾರೀ ಅಪಾಯವಾಗಿ ಕಾಣಬೇಕು ಎಂದರು.
ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪ್ರಜಾಪ್ರಭುತ್ವದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಬಡತನ ಸಂವಿಧಾನದ ಆಶಯಗಳನ್ನು ಸಾಧಿಸಲು ಅಡ್ಡಿಯಾಗುತ್ತಿದೆ. ಬಡವರಿಗೆ ಇಂದು ಒಬ್ಬ ನಾಗರಿಕನಾಗಿ ಚಿಂತಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಂವಿಧಾನದ ಆಶಯವನ್ನು ಮನದಟ್ಟು ಮಾಡಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಇಂದು ಯುವಕರು ಧರ್ಮದ ಗೋಡೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಇದನ್ನು ಒಡೆಯಬೇಕಾಗಿದೆ. ಈ ಮೂಲಕ ನಾವು ಸಂವಿಧಾನಕ್ಕೆ ಪೂರಕವಾಗಿ ಬದುಕಬಹುದು ಎಂದ ಅವರು, ಸಂವಿಧಾನವನ್ನು ಎಲ್ಲರೂ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅದೇ ರೀತಿಯ ಶಿಕ್ಷಣ ನಮ್ಮ ಸಮಾಜದಲ್ಲಿ ಬೇಕಾಗಿದೆ. ಸಮಾಜದಲ್ಲಿ ಬಡವ-ಶ್ರೀಮಂತ ಎಂಬ ಭೇದ-ಭಾವ, ಜಾತಿ ಶೋಷಣೆ, ಧರ್ಮ-ಲಿಂಗ ತಾರತಮ್ಯ ಇಲ್ಲದ ಸಮಾಜ ಇಂದು ನಿರ್ಮಾಣವಾಗಬೇಕಿದೆ. ಇದು ಇಂದಿನ ಹಿರಿಯರು ಮುಂದಿನ ಸಮಾಜಕ್ಕೆ ನೀಡಬಹುದಾದ ಕೊಡುಗೆ ಎಂದವರು ಒತ್ತಿ ಹೇಳಿದರು.
ದೇಶದ ಪ್ರಜಾಪ್ರಭುತ್ವ ಇಂದಿರಾ ಗಾಂಧಿ ಆಡಳಿತದಲ್ಲಿ ‘ತುರ್ತು ಪರಿಸ್ಥಿತಿ’ ಎಂಬ ಅತ್ಯಂತ ಕರಾಳ ದಿನಗಳನ್ನು ಎದುರಿಸಿತ್ತು. ಆ ಸಂದರ್ಭ ಸಂವಿಧಾನದಲ್ಲಿ ಬದಲಾವಣೆ ತರಲು ಇಂದಿರಾ ಗಾಂಧಿ ಪ್ರಯತ್ನ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟಾಗುವ ತಿದ್ದುಪಡಿ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಹೀಗಾಗಿ ಸಂವಿಧಾನ ಬದುಕಿ ಉಳಿದಿದೆ ಎಂದರು.
ಹಿರಿಯ ವಕೀಲ ಮನೋರಾಜ್ ರಾಜೀವ ಅವರು ಸಂವಿಧಾನದ ಮಂದಿರುವ ಸವಾಲುಗಳನ್ನು ಜನತೆ ಹೇಗೆ ಎದುರಿಸಬೇಕು ಎಂದು ವಿವರಿಸಿದರು. ಎ ಐ ಎಲ್ ಎ ಜೆ ಕೇಂದ್ರ ಸಮಿತಿ ಸದಸ್ಯ ಅವನಿ ಚೋಕ್ಷಿ, ಯುವ ನ್ಯಾಯವಾದಿ ಅಬ್ದುಲ್ ಜಲೀಲ್ ಎನ್, ಹೈಕೋರ್ಟ್ ನ್ಯಾಯವಾದಿ ಸಂದ್ಯಾ ಪ್ರಭು ಮಾತನಾಡಿದರು.
ಹಿರಿಯ ನ್ಯಾಯವಾದಿ ಶೋಭಲತಾ ಸುವರ್ಣ, ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಸುರೇಶ್ ಪೂಜಾರಿ, ಹಿರಿಯ ವಕೀಲರಾದ ಹಾತಿಮ್ ಅಹಮದ್, ಶ್ರೀಧರ್ ಪೈ, ಯುವ ವಕೀಲರಾದ ಮೋಹನ್ ಕುಮಾರ್ ಕಡೇಶಿವಾಲ್ಯ, ಉಮಾಕರ್ ಬಂಗೇರ, ಎ ಐ ಎಲ್ ಎ ಜೆ ಉಪಾಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾ ಕೋಶಧಿಕಾರಿ ಮಹಮ್ಮದ್ ಮುಂಝಿರ್, ನವೀನ್ ತಾವೋ, ಲೀಗಲ್ ಪ್ರೆಂಡ್ಸ್ ಜಿಲ್ಲಾ ಘಟಕದ ಪ್ರಮುಖರಾದ ಉಮ್ಮರುಲ್ ಫಾರೂಕ್ ನೆಲ್ಯಾಡಿ, ಸಿರಾಜುದ್ದೀನ್ ಉಪ್ಪಿನಂಗಡಿ, ಎಸ್ ಜಿ ಅಫ್ರೀಝ್, ಯುವ ನ್ಯಾಯವಾದಿಗಳಾದ ಮಹಮ್ಮದ್ ಲುಕ್ಮಾನ್, ಕಾರ್ತಿಕ್ ಎಂ., ಪ್ರಜ್ವಲ್ ಪುತ್ತೂರು ಮೊದಲಾದವರು ಭಾಗವಹಿಸಿದ್ದರು.
ಸಂವಿಧಾನದ ಪೀಠಿಕೆಯ ಮೇಲೆ ಪರದೆಯನ್ನು ಎಳೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಎ ಐ ಎಲ್ ಜೆ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಶ್ಫಾಕ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಎ ಐ ಎಲ್ ಎ ಜೆ ಜಿಲ್ಲಾಧ್ಯಕ್ಷ ತುಳಸೀದಾಸ್ ಆರ್ ವಂದಿಸಿದರು. ಹಿರಿಯ ನ್ಯಾಯವಾದಿ ಚಂದ್ರಶೇಖರ್ ರಾವ್ ಪುಂಚಮೆ ಹಾಗೂ ಯುವ ನ್ಯಾಯವಾದಿ ಮಹಮ್ಮದ್ ಗಝಾಲಿ ಕಾರ್ಯಕ್ರಮ ನಿರೂಪಿಸಿದರು.





















0 comments:
Post a Comment