ಮಂಗಳೂರು, ಫೆಬ್ರವರಿ 12, 2026 (ಕರಾವಳಿ ಟೈಮ್ಸ್) : ಅಡ್ಯಾರಿನಲ್ಲಿ ಫೆಬ್ರವರಿ 12 ರಂದು ಗುರುವಾರ ಸಂಜೆ ನಡೆದ ಭೀಕರ ಕಾರು ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಮಂಗಳೂರು-ಬಿಜೈ ನಿವಾಸಿ ಕೆಪಿ ಭಟ್ ಹಾಗೂ ಅವರ ಪತ್ನಿ ಪ್ರತಿಭಾ ಅವರು ತಮ್ಮ ಐ20 ಕಾರಿನಲ್ಲಿ ಬೆಳ್ತಂಗಡಿಯಿಂದ ಬಿಜೈ ಮನೆ ಕಡೆ ಹೊರಟಿದ್ದರು. ಅಡ್ಯಾರು ಫೈರ್ ಆಂಡ್ ಸೇಫ್ಟಿ (ಮೈಫ್ಸ್) ಕಾಲೇಜು ಮುಂಭಾಗ ಹೆದ್ದಾರಿಯಲ್ಲಿ ಓವರ್ ಟೇಕ್ ಭರದಲ್ಲಿ ಎದುರಿನಿಂದ ಹೋಗುತ್ತಿದ್ದ ಟಿಪ್ಪರಿಗೆ ತಾಗಿ ರಸ್ತೆ ವಿಭಜಕದ ಮೇಲೆ ಅಳವಡಿಸಲಾಗಿದ್ದ ಹೈಮಾಸ್ಟ್ ದೀಪ ಅಳವಡಿಸಲಾಗಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ಬಳಿಕ ಕಾರು ವಿಭಕದ ಮೇಲೇರಿ ರಸ್ತೆಯ ಇನ್ನೊಂದು ಬದಿಗೆ ಬಂದು ಹೆದ್ದಾರಿಯಲ್ಲೇ ಉರುಳಿ ಬಿದ್ದಿದೆ. ಹೈಮಾಸ್ಟ್ ಕಂಬ ಕಾಂಡದಿಂದಲೇ ಮುರಿದು ರಸ್ತೆ ವಿಭಜಕದ ಮೇಲೆ ಉರುಳಿ ಬಿದ್ದಿದೆ. ಕಂಬ ಹೆದ್ದಾರಿ ಮೇಲೆ ಉರುಳಿ ಬಿದ್ದಿದ್ದರೆ ಭಾರೀ ಪ್ರಮಾಣದ ಅಪಾಯ ಸಂಭವಿಸುವ ಸಂಭವವಿತ್ತು.
ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದ ದಂಪತಿ ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಬಳಿಕ ಸ್ಥಳೀಯರು ಕಾರನ್ನು ಹೆದ್ದಾರಿ ಪಕ್ಕಕ್ಕೆ ತಳ್ಳಿ ಕಾರಿನಲ್ಲಿದ್ದ ದಂಪತಿಯನ್ನು ಉಪಚರಿಸಿದ್ದಾರೆ. ನಂತರ ಕ್ರೇನ್ ಬಳಸಿ ಕಾರನ್ನು ಸಂಪೂರ್ಣವಾಗಿ ಹೆದ್ದಾರಿಯಿಂದ ತೆರವುಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಹೆದ್ದಾರಿ ಗಸ್ತು ದಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



















0 comments:
Post a Comment