ಬಂಟ್ವಾಳ, ಫೆಬ್ರವರಿ 23, 2026 (ಕರಾವಳಿ ಟೈಮ್ಸ್) : ಚಿಲ್ಲರೆ ವಿಷಯದಲ್ಲಿ ತಗಾದೆ ತೆಗೆದು ಬಸ್ ನಿರ್ವಾಹಕಗೆ ಹಲ್ಲೆ ನಡೆಸಿದ ವಿದ್ಯಾರ್ಥಿಯೋರ್ವನ ಮೇಲೆ ಬಂಟ್ವಾಳ ಎಸಿಜೆ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯದ ಆದೇಶದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದ ಬಸ್ ನಿರ್ವಾಹಕನನ್ನು ಸಂಜೀವ (48) ಹಾಗೂ ಹಲ್ಲೆ ನಡೆಸಿದಾತನನ್ನು ಮೊಹಮ್ಮದ್ ಅಶ್ವದ್ ಎಂದು ಹೆಸರಿಸಲಾಗಿದೆ.
ಬಿ ಸಿ ರೋಡಿನಿಂದ ಮೋಂತಿಮಾರು ಮಾರ್ಗವಾಗಿ ಮಂಗಳೂರು ಮಂಗಳೂರು ಹೋಗುವ ನೋಂದಣಿ ಸಂಖ್ಯೆ ಕೆಎ19 ಸಿ9299 ಭವಾನಿ ಹೆಸರಿನ ಖಾಸಗಿ ಬಸ್ಸಿನ ನಿರ್ವಾಹಕ, ಉಳ್ಳಾಲ ತಾಲೂಕು, ಬಾಳೆಪುಣಿ ಗ್ರಾಮದ ಬಂಗಾರಗುಡ್ಡೆ ನಿವಾಸಿ ಸಂಜೀವ ಅವರು ನ್ಯಾಯಾಲಯ ನ್ಯಾಯಾಲಯದ ಆದೇಶ ಸಂಖ್ಯೆ 141/2026 ದಿನಾಂಕ 21.02.2026 ರಂತೆ ನೀಡಿದ ದೂರಿನ ಸಾರಾಂಶವೇನೆಂದರೆ ಸಂಜೀವ ಅವರು ಭವಾನಿ ಬಸ್ಸಿನಲ್ಲಿ ಫೆಬ್ರವರಿ 19 ರಂದು ಬೆಳಿಗ್ಗೆ 8.50ರ ವೇಳೆಗೆ ಬಿ ಸಿ ರೋಡಿನಿಂದ ಹೊರಟು ಮೆಲ್ಕಾರ್, ಮಾರ್ನಬೈಲು, ಬೊಳ್ಳಾಯಿ, ಕುಕ್ಕಾಜೆ ಮಾರ್ಗವಾಗಿ 9.20 ಗಂಟೆಗೆ ಮಂಚಿ ತಲುಪಿದಾಗ ಒಬ್ಬ ವಿದ್ಯಾರ್ಥಿ ಬಸ್ ಹತ್ತಿದ್ದು ಬಸ್ಸು ಮೋಂತಿಮಾರ್ ಸಮೀಪದ ನಾಡಾಜೆ ಎಂಬಲ್ಲಿಗೆ 9.25ಕ್ಕೆ ತಲುಪಿದಾಗ ನಿರ್ವಾಹಕ ಸಂಜೀವ ಅವರು ವಿದ್ಯಾರ್ಥಿಯಲ್ಲಿ ಟಿಕೆಟ್ ಮೊತ್ತ ಕೇಳಿದಾಗ ವಿದ್ಯಾರ್ಥಿಯು 100 ರೂಪಾಯಿ ನೀಡಿದ್ದಾನೆ. ಈ ಸಂದರ್ಭ ನಿರ್ವಾಹಕ 10 ರೂಪಾಯಿ ಚೇಂಜ್ ನೀಡುವಂತೆ ಕೇಳಿದಾಗ ನಿಮಗೆಲ್ಲ ಮನೆಯಿಂದ ಚಿಲ್ಲರೆ ತಕೊಂಡು ಬರಲಿಕ್ಕೆ ಆಗುವುದಿಲ್ಲವಾ ಎಂದು ವಿದ್ಯಾರ್ಥಿ ಕೇಳಿದ್ದಾನೆ. ಈ ಸಂದರ್ಭ ಬಸ್ ನಿರ್ವಾಹಕ ವಿದ್ಯಾರ್ಥಿಯಲ್ಲಿ ಹಾಗೆಲ್ಲ ನೀನು ಮಾತನಾಡಬೇಡ ಎಂದು ಹೇಳಿದಕ್ಕೆ ಏಕಾಏಕಿ ವಿದ್ಯಾರ್ಥಿಯು ಬಸ್ ನಿರ್ವಾಹಕಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಕೆನ್ನೆಗೆ, ಮೂಗಿಗೆ ಗುದ್ದಿರುತ್ತಾನೆ. ಬಳಿಕ ಬಸ್ಸಿನಲ್ಲಿದ್ದ 3-4 ಪ್ರಯಾಣಿಕರು ಆತನನ್ನು ಸಮಾಧಾಪಡಿಸಿದ್ದು, ಬಳಿಕ ಬಸ್ ಚಾಲಕ ಚಂದ್ರಹಾಸ ನಾಯ್ಕರ ಹತ್ತಿರ ಹೋಗಿ ಬಸ್ ನಿಲ್ಲಿಸು ಎಂದು ಕಾಲರ್ ಹಿಡಿದೆಳೆದಿರುತ್ತಾನೆ. ಬಸ್ ಇರಾ ಬಸ್ ನಿಲ್ದಾಣ ತಲುಪಿದಾಗ ಬಸ್ಸಿನಿಂದ ಇಳಿದು ವಿದ್ಯಾರ್ಥಿ ಹೋಗಿರುತ್ತಾನೆ. ಇಳಿಯುವ ಸಮಯ ನಾಳೆ ಇದೇ ಮಾರ್ಗವಾಗಿ ಬಾ ನಿನ್ನನ್ನು ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ನಂತರ ಬಸ್ ಚಾಲಕ ಚಂದ್ರಹಾಸ ಅವರು ನಿರ್ವಾಹಕ ಸಂಜೀವ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 22/2026 ಕಲಂ 115(2), 352, 351(2) ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.















0 comments:
Post a Comment