ಮಂಗಳೂರು, ಫೆಬ್ರವರಿ 06, 2026 (ಕರಾವಳಿ ಟೈಮ್ಸ್) : ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಕೊಣಾಜೆ ಪೊಲೀಸರು ಲಕ್ಷಾಂತರ ಮೌಲ್ಯದ ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ನೌಶಾದ್ ಮತ್ತು ಇಬ್ರಾಹಿಂ ಎಂದು ಹೆಸರಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ಶರಣಪ್ಪ ಭಂಡಾರಿ ಅವರಿಗೆ ಗುರುವಾರ ಬೆಳಿಗ್ಗೆ 8 ಗಂಟೆಗೆ ಆಂಧ್ರ ಪ್ರದೇಶದಿಂದ ಬೆಂಗಳೂರು-ಹಾಸನ ಮಾರ್ಗವಾಗಿ ಬಂದು ಪ್ರಸ್ತುತ ಉಪ್ಪಿನಂಗಡಿಯಿಂದ ಹೊರಟು ಮೆಲ್ಕಾರ್-ಸಜಿಪ ಬೋಳಿಯಾರು ಮಾರ್ಗವಾಗಿ ಬಿಳಿ ಬಣ್ಣದ ನೋಂದಣಿ ಸಂಖ್ಯೆ ಕೆಎಲ್60 ಡಿ8282 ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮ ಮಾದಕ ವಸ್ತು ಗಾಂಜಾವನ್ನು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ಬೆಳಿಗ್ಗೆ 9.30 ಗಂಟೆಗೆ ಮಿತ್ತಕೋಡಿ ರಾಯಲ್ ಗಾರ್ಡನ್ ಬಳಿ ಬಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೆಳಿಗ್ಗೆ 10.20ರ ವೇಳೆಗೆ ಮೆಲ್ಕಾರು ಬೋಳಿಯಾರು ಕಡೆಯಿಂದ ಮುಡಿಪು ಕಡೆಗೆ ಬಿಳಿ ಬಣ್ಣದ ಐ20 ಕಾರು ಬಂದಿದ್ದು, ಅದನ್ನು ನಿಲ್ಲಿಸಿದಾಗ ಕಾರಿನಲ್ಲಿದ್ದವರು ಗಡಿಬಿಡಿಗೊಂಡು ಇಳಿದು ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ಪೊಲೀಸರು ಸುತ್ತುವರಿದು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ನೌಶಾದ್ ಮತ್ತು ಇಬ್ರಾಹಿಂ ಎಂಬವರನ್ನು ವಿಚಾರಿಸಿದಾಗ ಆಂಧ್ರಪ್ರದೇಶದ ಗಡಿಭಾಗದ ಓರಿಸ್ಸಾದ ಬೆಹರಂಪುರ ಎಂಬಲ್ಲಿಂದ 2.42 ಲಕ್ಷ ರೂಪಾಯಿ ಹಣ ನೀಡಿ ಗಾಂಜಾ ಖರೀದಿಸಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳ ವಶದಿಂದ 40.03 ಲಕ್ಷ ರೂಪಾಯಿ ಮೌಲ್ಯದ 10 ಪ್ಯಾಕೆಟುಗಳಲ್ಲಿ ತುಂಬಿದ ಒಟ್ಟು 80 ಕೆಜಿ 15 ಗ್ರಾಂ ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಬಿಳಿ ಬಣ್ಣದ ಐ20 ಕಾರು ಹಾಗೂ 3 ಮೊಬೈಲ್ ವಶಪಡಿಸಿಕೊಂಡಿದ್ದಾರೆ.














0 comments:
Post a Comment