ಬಂಟ್ವಾಳ, ಫೆಬ್ರವರಿ 17, 2026 (ಕರಾವಳಿ ಟೈಮ್ಸ್) : ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿ ಅಂಗಡಿ ಮಾಲಕ ಅಕ್ರಮ ಮಟ್ಕಾ ಜೂಜಾಟ ನಡೆಸುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಬೇಧಿಸಿದ ಘಟನೆ ಫೆ 14 ರಂದು ನಡೆದಿದೆ.
ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರು ಫೆ 14 ರಂದು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯ ವಿಟ್ಲ ಪೇಟೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೇಪು ಗ್ರಾಮದ ಅಡ್ಯನಡ್ಕ ಎಂಬಲ್ಲಿರುವ ವಿನಾಯಕ ಬೇಕರಿ ಎಂಬ ಅಂಗಡಿಯಲ್ಲಿ ಅಂಗಡಿ ಮಾಲೀಕ ರವೀಶ್ (42) ಎಂಬಾತ ಅದೃಷ್ಟದ ಮಟ್ಕಾ ಜೂಜಾಟವನ್ನು ಮೊಬೈಲ್ ಮೂಲಕ ಆಡಿಸುತ್ತಿದ್ದಾನೆ ಎಂಬುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ರವೀಶ್ ಕೇಪು ಗ್ರಾಮದ ಕುದ್ದುಪದವು ನಿವಾಸಿಯಾಗಿದ್ದು, ತನ್ನ ಬೇಕರಿ ಅಂಗಡಿಯಲ್ಲಿ ಅದೃಷ್ಟದ ಆಟವಾದ ಮಟ್ಕಾವನ್ನು ಆಡಿಸುತ್ತಿದ್ದು, 00-99ವರೆಗಿನ ನಂಬರಿಗೆ ಅದೃಷ್ಟದ ಆಟದಲ್ಲಿ ಆಡುವ ಜನರು ನನ್ನ ಬಳಿ ಬಂದು ಅವರ ಇಚ್ಛೆಯ ಸಂಖ್ಯೆಗೆ ಹಣವನ್ನು ಕಟ್ಟಿ ಹೋಗುತ್ತಾರೆ. ಇಲ್ಲವೇ ಮೊಬೈಲ್ ವಾಟ್ಸಾಪ್ ಮೂಲಕ ಅದೃಷ್ಟ ಸಂಖ್ಯೆಯನ್ನು ಕಳುಹಿಸಿಕೊಡುತ್ತಾರೆ. ಅವರು ತಿಳಿಸಿದ ನಂಬರನ್ನು ನಾನು ನನ್ನ ಮೊಬೈಲ್ ನಲ್ಲಿರುವ “ಶೆಟ್ಟಿ ನಂಬರ್” ವಾಟ್ಸಾಪ್ ಗ್ರೂಪಿಗೆ ಕಳುಹಿಸಿಕೊಡುತ್ತೇನೆ. ನಂತರ ಅದೃಷ್ಟದ ನಂಬರ್ ಹಾಕಿದ ವ್ಯಕ್ತಿಗಳು ಹಣವನ್ನು ಅಂಗಡಿ ತಂದು ನೀಡುತ್ತಾರೆ. ಮಟ್ಕಾ ಆಟದಲ್ಲಿ 10 ರೂಪಾಯಿಗೆ 700 ರೂಪಾಯಿಯಂತೆ ಸಿಗುತ್ತದೆ. ಈ ದಿನವೂ ಅದೃಷ್ಟದ ಮಟ್ಕಾ ಆಟ ಆಡಿಸುತ್ತಿದ್ದು ಇದರಿಂದ ನನಗೆ ಲಾಭವಾಗುವುದಾಗಿ ಆರೋಪಿ ರವೀಶ್ ಒಪ್ಪಿಕೊಂಡಿದ್ದಾನೆ.
ಆರೋಪಿ ರವೀಶ್ ಕಾನೂನು ಬಾಹಿರವಾಗಿ ಅದೃಷ್ಟದ ಮಟ್ಕಾ ಆಟ ಆಡುತ್ತಿರುವುದು ಖಚಿತವಾಗಿರುವುದರಿಂದ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಆತನ ಬಳಿಯಲ್ಲಿದ್ದ ಆಟಕ್ಕೆ ಬಳಸಿದ ರೆಡ್ ಮಿ ನೋಟ್-14 5ಜಿ ಮೊಬೈಲ್ ಹಾಗೂ ಆತನಲ್ಲಿದ್ದ 1630/- ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment