ಬಂಟ್ವಾಳ, ಫೆಬ್ರವರಿ 24, 2026 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು-ಆಲಡ್ಕ ಕೆನರಾ ಬ್ಯಾಂಕ್ ಮುಂಭಾಗದ ಕುಡಿಯುವ ನೀರಿನ ಪೈಪ್ ಒಡೆದು ತಿಂಗಳು ಕಳೆದರೂ ಇನ್ನೂ ರಿಪೇರಿಯಾಗದ ಪರಿಣಾಮ ಕೃತಕ ನೆರೆ ಪರಿಸ್ಥಿತಿ ನಿರ್ಮಾಣಗೊಂಡು ಜನ ಸಂಕಷ್ಟ ಅನುಭವಿಸುವಂತಾಗಿದೆ.
ಕೆನರಾ ಬ್ಯಾಂಕ್ ಬಳಿಯ ಬಂಗ್ಲೆಗುಡ್ಡೆ ಸಂಪರ್ಕದ ರಸ್ತೆಯಲ್ಲಿ ಈ ಕೃತಕ ನೆರೆ ಪರಿಸ್ಥಿತಿ ಉದ್ಭವಗೊಂಡಿದ್ದು, ಪರಿಣಾಮ ಈ ರಸ್ತೆ ಸಂಪರ್ಕಿಸುವ ಮೆಸ್ಕಾಂ ಶಾಖಾ ಕಚೇರಿ, ಹಿಂದುಳಿದ ವರ್ಗಗಳ ಇಲಾಖೆಯ ಬಾಲಕಿಯರ ಹಾಸ್ಟೆಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧೀನದ ಅಂಗನವಾಡಿ, ಅನುದಾನಿತ ಪ್ರೌಢಶಾಲೆ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ದೈವಸ್ಥಾನಕ್ಕೆ ಬರುವವರು ದಾರಿ ಕಾಣದೆ ನಿತ್ಯವೂ ನೆರೆ ನೀರನ್ನು ದಾಟಿ ಬರಬೇಕಾದ ದುಸ್ಥಿತಿ ಇದೆ.
ಹಾಸ್ಟೆಲ್ ಹಾಗೂ ಅಂಗನವಾಡಿ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳು ಹಾಗೂ ಸಣ್ಣ ಮಕ್ಕಳು ಈ ರಸ್ತೆಯಲ್ಲಿ ಬರುವಷ್ಟರಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ನಡೆದುಕೊಂಡು ಬರಲು ವ್ಯವಸ್ಥೆ ಇಲ್ಲದೆ ನೀರಿನ ಬದಿಯಲ್ಲಿ ಸರ್ಕಸ್ ಮಾಡಿಕೊಂಡು ತೆರಳುತ್ತಿರುವ ದೃಶ್ಯ ಕಳೆದ ಒಂದು ತಿಂಗಳಿಗೂ ಮಿಕ್ಕಿದ ಅವಧಿಯಲ್ಲಿ ಕಂಡು ಬರುತ್ತಿದೆ.
ಇಲ್ಲಿನ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಈಗಾಗಲೇ ಬಂಟ್ವಾಳ ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಶಿಕ್ಷಣ ಇಲಾಖೆ ಸಹಿತ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೂ ಸಾಕಷ್ಟು ಬಾರಿ ದೂರಿಕೊಂಡರೂ ಇನ್ನೂ ಕೂಡಾ ಯಾವುದೇ ಕನಿಷ್ಠ ಪರಿಹಾರದ ಪ್ರಯತ್ನವೂ ನಡೆದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

















0 comments:
Post a Comment