ಬಂಟ್ವಾಳ, ಮಾರ್ಚ್ 06, ಮಾರ್ಚ್, 2026 (ಕರಾವಳಿ ಟೈಮ್ಸ್) : ಬಂಟ್ವಾಳದ ಕಂಬಳ ಜಿಲ್ಲೆಯಲ್ಲೇ ಪ್ರತಿಷ್ಠಿತ ಕಂಬಳವಾಗಿದ್ದು, ಇದು ನಮ್ಮ ಕಂಬಳ, ನಿಮ್ಮ ಕಂಬಳ, ಎಲ್ಲರ ಕಂಬಳ ಎಂಬಂತೆ ಸಾಗಿ ಬರುತ್ತಿದ್ದು, ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ಆಮಂತ್ರಿಸಲು ಸಾಧ್ಯವಾಗಿಲ್ಲ. ಆದರೆ ಎಲ್ಲರೂ ಇದನ್ನೇ ಆಮಂತ್ರಣ ಎಂದುಕೊಂಡು ಪ್ರತಿಯೊಬ್ಬರೂ ಮಾರ್ಚ್ 7 ರಂದು ಶನಿವಾರ ಬೆಳಿಗ್ಗೆಯಿಂದ ಆರಂಭಗೊಳ್ಳುವ ಬಂಟ್ವಾಳ ಕಂಬಳೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮೂಡೂರು-ಪಡೂರು ಬಂಟ್ವಾಳ ಕಂಬಳ ಸಮಿತಿಯ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ವಿನಂತಿಸಿದ್ದಾರೆ.
ಶುಕ್ರವಾರ (ಮಾ 6) ಬೆಳಿಗ್ಗೆ ಕಂಬಳ ಗದ್ದೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಜೆಟ್ ಮಂಡಿಸಿದ ಮರುದಿನವೇ ಅಂದರೆ ನಾಳೆ (ಮಾರ್ಚ್ 7) ನಡೆಯುವ ಕಂಬಳೋತ್ಸವದಲ್ಲಿ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸಮಯಕ್ಕೆ ಸರಿಯಾಗಿ ನಮ್ಮ ಕಂಬಳೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ಕಂಬಳೋತ್ಸವದ ಎಲ್ಲ ಸಿದ್ದತೆಗಳನ್ನು ಬಹುತೇಕ ಪೂರ್ಣಗೊಂಡಿದ್ದು, 15ನೇ ವರ್ಷದ ಮೂಡೂರು-ಪಡೂರು ಜೋಡುಕೆರೆ ಕಂಬಳವು ಅದ್ದೂರಿಯಾಗಿ 2 ದಿನಗಳ ಕಾಲ ನಡೆಯಲಿದೆ ಎಂದರು.
ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬೇಕಾಗುವ ಭದ್ರತೆ ಹಿನ್ನಲೆಯಲ್ಲಿ ಎಲ್ಲ ರೀತಿಯ ಸಹಕಾರವನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ನೀಡಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಮಾನಾಥ ರೈ ಹೇಳಿದರು.
ಈ ಸಂದರ್ಭ ಕಂಬಳ ಸಮಿತಿಯ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಚಾಲಕ ಬಿ ಪದ್ಮಶೇಖರ್ ಜೈನ್, ಗೌರವ ಸಲಹೆಗಾರ ಕೆ ಪದ್ಮನಾಭ ರೈ ಕಲ್ಲಡ್ಕ, ಉಪಾಧ್ಯಕ್ಷರಾದ ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಬಾಲಕೃಷ್ಣ ಅಂಚನ್, ಪ್ರಚಾರ ಸಮಿತಿ ಸಂಚಾಲಕ ಸಿದ್ದೀಕ್ ಗುಡ್ಡೆಅಂಗಡಿ ಜೊತೆಗಿದ್ದರು.























0 comments:
Post a Comment