ಬಂಟ್ವಾಳ, ಮಾರ್ಚ್ 25, 2026 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಈ ಬಾರಿ 28ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಬಂಟ್ವಾಳದ ಬಿ ಸಿ ರೋಡಿನಲ್ಲಿ ನಡೆಯಲಿದ್ದು, ಮಾರ್ಚ್ 26 ರಂದು ಸಂಜೆ ಬಿ ಸಿ ರೋಡಿನ ರಾಜ ರಸ್ತೆಯಲ್ಲಿ ಅದ್ದೂರಿ ದಿಬ್ಬಣ ಹೊರಡುವ ಮೂಲಕ ಸಂಭ್ರಮದ ಚಾಲನೆ ದೊರೆಯಲಿದೆ. ಬಳಿಕ ಮಾ 27 ಹಾಗೂ 28 ರಂದು ವಿವಿಧ ಸಾಹಿತ್ಯಿಕ ಕಾರ್ಯಕ್ರಮಗಳೊಂದಿಗೆ ಸಮ್ಮೇಳನ ಇಲ್ಲಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ.
ಈ ಮಧ್ಯೆ ಜಿಲ್ಲಾ ಸಮ್ಮೇಳನ ನಡೆಯುವ ಬಂಟ್ವಾಳದಲ್ಲಿ ಇಲ್ಲಿನ ಕೈಕುಂಜೆ ರಸ್ತೆಯಲ್ಲಿರುವ ಕನ್ನಡ ಭವನ ಮಾತ್ರ ಅನಾಥ ಸ್ಥಿತಿಯನ್ನು ಎದುರಿಸುತ್ತಿದೆ ಎಂದು ಕನ್ನಡ ಪ್ರೇಮಿಗಳು ತೀವ್ರ ಖೇದ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ನಿವೃತ್ತ ತಹಶೀಲ್ದಾರ್ ಮೋಹನ್ ರಾವ್ ಅವರು ಬಂಟ್ವಾಳ ಕಸಾಪ ಅಧ್ಯಕ್ಷರಾಗಿದ್ದ ವೇಳೆ ಅವರ ವಿಶೇಷ ಮುತುವರ್ಜಿಯಿಂದ ಇಲ್ಲಿನ ಕೈಕುಂಜೆ ರಸ್ತೆಯ ಎಪಿಎಂಸಿ ಬಳಿ ಸರಕಾರಿ ಜಾಗ ಗೊತ್ತುಪಡಿಸಿ ಕನ್ನಡ ಭವನ ನಿರ್ಮಾಣ ಮಾಡಲಾಗಿ ಉದ್ಘಾಟನೆಯೂ ಆಗಿತ್ತು. ಅವರು ಅಧ್ಯಕ್ಷರಾಗಿದ್ದಾಗ ಕೆಲವು ಖಾಸಗಿ ಕಾರ್ಯಕ್ರಮಗಳು ಭವನದಲ್ಲಿ ನಡೆದಿವೆ. ಬಳಿಕ ಬಂಟ್ವಾಳ ಕಸಾಪ ಅಧ್ಯಕ್ಷತೆ ಬದಲಾವಣೆಯಾಗಿದ್ದು, ನಂತರದ ದಿನಗಳಲ್ಲಿ ಇಲ್ಲಿನ ಕನ್ನಡ ಭವನ ಪಾಳುಬಿದ್ದಂತಾಗಿದೆ.
ಇದೀಗ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಬಂಟ್ವಾಳದಲ್ಲಿ ನಡೆಯುತ್ತಿದ್ದು, ಅದೂ ಕೂಡಾ ಕನ್ನಡ ಭವನ ಇರುವ ಹೃದಯ ಪಟ್ಟಣ ಬಿ ಸಿ ರೋಡಿನಲ್ಲೇ ನಡೆಯುತ್ತಿದ್ದು, ಕನಿಷ್ಠ ಕನ್ನಡ ಭವನಕ್ಕೆ ಬಣ್ಣ ಬಳಿದು ಸುಂದರೀಕರಣಗೊಳಿಸುವ ಕಾರ್ಯವೂ ನಡೆದಿಲ್ಲ. ಭವನದ ಆವರಣ ಸ್ವಚ್ಛಗೊಳಿಸುವುದಾಗಲೀ, ಕಟ್ಟಡದ ಜೇಡರ ಬಲೆ ತೆಗೆಸುವುದು, ಧೂಳುಮುಕ್ತಗೊಳಿಸುವುದು ಯಾವುದೂ ನಡೆದಿಲ್ಲ. ಭವನದ ಮುಖ್ಯ ದ್ವಾರದ ಬಳಿ ಸಮೀಪದ ಗ್ಯಾರೇಜಿಗೆ ಬಂದಿರುವ ಹಾಳಾಗಿರುವ ವಾಹನಗಳು ರಾಶಿ ಬಿದ್ದಿರುವುದು ಕಂಡು ಬರುತ್ತಿದೆ. ಕನ್ನಡ ಭವನ ಕಟ್ಟಡದಲ್ಲಿ ಬಾಡಿಗೆ ಅಂಗಡಿಗಳಿದ್ದು, ಅದರಿಂದ ಬರುವ ಬಾಡಿಗೆ ಆದಾಯದಿಂದಲಾದರೂ ಈ ಕಾರ್ಯ ನಡೆಸಬಹುದಿತ್ತು ಎಂಬ ಅಭಿಪ್ರಾಯ ಇಲ್ಲಿನ ಕನ್ನಡ ಪ್ರೇಮಿಗಳದ್ದು.
ಕನ್ನಡ ಭವನದ ಕೆಲವೇ ಹೆಜ್ಜೆಗಳ ದೂರದಲ್ಲಿ ಸಮ್ಮೇಳನ ನಡೆಯುತ್ತಿದ್ದರೂ ಕನ್ನಡ ಭವನಕ್ಕೆ ಪ್ರಾಮುಖ್ಯತೆಯೇ ನೀಡಲಾಗಿಲ್ಲ. ಜಿಲ್ಲಾ ಸಾಹಿತ್ಯ ಸಮ್ಮೇಳನದ ದಿಬ್ಬಣ ಮೆರವಣಿಗೆ ಇದೇ ಬಿ ಸಿ ರೋಡು ಸಮೀಪದ ಕೈಕಂಬ-ಪೊಳಲಿ ದ್ವಾರದ ಬಳಿಯಿಂದ ಬಿ ಸಿ ರೋಡಿನ ರಾಜರಸ್ತೆಯಲ್ಲೇ ಸಾಗಿ ಬರುವ ಕಾರ್ಯಸೂಚಿ ಸಿದ್ದಪಡಿಸಲಾಗಿದ್ದು, ದಿಬ್ಬಣವೂ ಕೂಡಾ ಕನ್ನಡ ಭವನದ ಬಳಿಯಿಂದ ಸಾಗಿ ಬರುವ ಯಾವುದೇ ಕಾರ್ಯಕ್ರಮವೂ ಹಾಕಿಕೊಳ್ಳದೆ ಇರುವುದೂ ಕೂಡಾ ತಾಲೂಕಿನ ಕನ್ನಡ ಸಾಹಿತ್ಯ ಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕನ್ನಡ ಭವನ ನಿರ್ಮಾಣಗೊಂಡ ಬಳಿಕ ಒಂದೆರಡು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದು ಅದರಲ್ಲಿ ಸಾಕಷ್ಟು ಪ್ರಮಾಣದ ಹಣ ಉಳಿತಾಯವಾದರೂ ಕನ್ನಡ ಭವನದ ಬಗ್ಗೆ ಯಾವುದೇ ಕಾಳಜಿ ಇಲ್ಲದಿರುವುದು ಇಲ್ಲಿನ ಸಾಹಿತ್ಯ ಪರಿಷತ್ ಪದಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಾಗಿದೆ ಎನ್ನುತ್ತಾರೆ ಇಲ್ಲಿನ ಜನ.













0 comments:
Post a Comment