ಬಂಟ್ವಾಳ, ಮಾರ್ಚ್ 25, ಮಾರ್ಚ್, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಅವೈಜ್ಞಾನಿಕ ಟೋಲ್ ಗೇಟ್ ರಸ್ತೆಯ ಮಧ್ಯದಲ್ಲೇ ಕಾಂಕ್ರಿಟ್ ಪಿಲ್ಲರ್ ಬೆಡ್ ರೀತಿಯ ನಿರ್ಮಾಣದಿಂದ ಮಾ 21 ರಂದು ರಾತ್ರಿ ಸ್ಕೂಟರ್ ಸಹಸವಾರೆ ಮಹಿಳೆಯೋರ್ವರು ಗಾಯಗೊಂಡಿದ್ದು, ಇದು ವಾಹನ ಸವಾರರ ಪಾಲಿಗೆ ತೀರಾ ಅಪಾಯಕಾರಿಯಾಗಿ ಪರಿಣಮಿಸಿರುವ ಬಗ್ಗೆ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿದ ಬಳಿಕ ಎಚ್ಚೆತ್ತುಕೊಂಡ ಟೋಲ್ ಗೇಟ್ ನಿರ್ವಾಹಕರು ಕಣ್ಣು ಕಟ್ಟಿನ ಸುರಕ್ಷತಾ ತೇಪೆ ಕಾರ್ಯ ಕೈಗೊಂಡಿರುವುದು ಕಂಡು ಬಂದಿದೆ.
ಟೋಲ್ ಗೇಟ್ ರಸ್ತೆಯಲ್ಲಿ ವಾಹನ ಸಂಚಾರದ ಸ್ಥಳದಲ್ಲಿ ಕಾಂಕ್ರಿಟ್ ಬೆಡ್ ರೀತಿಯ ದಿಡ್ಡೊಂಡು ಇದ್ದು, ಇದು ನಿರ್ಮಿಸಿರುವ ಬಗ್ಗೆ ಯಾವುದೇ ಪೂರ್ವ ಸೂಚನೆಯಾಗಲೀ, ಸುರಕ್ಷತಾ ಕ್ರಮವಾಗಲೀ ಅಳವಡಿಸದೆ ಇರುವ ಪರಿಣಾಮ ಕಳೆದ ಶನಿವಾರ ರಾತ್ರಿ ಸ್ಕೂಟರಿನ ಹಿಂದುಗಡೆ ಕುಳಿತು ಸಂಚರಿಸುತ್ತಿದ್ದ ಮಹಿಳೆಯ ಕಾಲಿಗೆ ತಾಗಿ ತೀವ್ರತರ ಗಾಯಗಳಾಗಿವೆಯಲ್ಲದೆ ಕಾಲಿನ ಮಣಿಗಂಟಿಗೂ ತೀವ್ರ ನೋವುಂಟಾಗಿತ್ತು.
ಅದೇ ದಿನ ಈ ದಿಡ್ಡು ಲಾರಿ ಚಾಲಕನ ಗಮನಕ್ಕೂ ಬಾರದೆ ಲಾರಿಯೂ ಇದೇ ಬೆಡ್ಡಿಗೆ ಡಿಕ್ಕಿ ಹೊಡೆದು ಹಾನಿ ಸಂಭವಿಸಿತ್ತು ಮಾತ್ರವಲ್ಲ ಈ ಸಂದರ್ಭ ವಾಹನ ಸವಾರರು ಹಾಗೂ ಟೋಲ್ ಗೇಟ್ ಸಿಬ್ಬಂದಿಗಳ ನಡುವೆ ಕೆಲ ಕಾಲ ಮಾತಿನ ವಿನಿಮಯವೂ ನಡೆದ ಬಗ್ಗೆ ವರದಿಯಾಗಿತ್ತು.
ಇಲ್ಲಿನ ಟೋಲ್ ಬೂತ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ್ದ ಈ ಕಾಂಕ್ರಿಟ್ ಬೆಡ್ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಸಾರ್ವನಿಕರ ಆಕ್ರೋಶದ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆದಿತ್ತು. ಇದೀಗ ಈ ಸಿಮೆಂಟ್ ಬೆಡ್ ನಿರ್ಮಾಣಕ್ಕೆ ತೇಪೆಯಂತಹ ಸುರಕ್ಷತಾ ಕ್ರಮ ಅಳವಡಿಸಲಾಗಿರುವುದು ಕಂಡು ಬರುತ್ತಿದೆ. ಆದರೆ ಇದು ಪೂರ್ಣ ಪ್ರಮಾಣದ ಸುರಕ್ಷತಾ ಕ್ರಮವಲ್ಲ ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರು ತಗಾದೆ ಎಬ್ಬಿಸಿದ್ದಾರೆ.
ಇಂತಹ ತೇಪೆ ಕಾಮಗಾರಿಗಳಿಂದಾಗಿಯೇ ಇಲ್ಲಿನ ಟೋಲ್ ಗೇಟ್ ನಿತ್ಯವೂ ಸುದ್ದಿಯಾಗುತ್ತಿದೆ. ಇಂತಹ ತೇಪೆಗಳಿಂದ ಜನರ ಕಣ್ಣಿಗೆ ಮಣ್ಣೆರೆಚುವುದನ್ನು ಬಿಟ್ಟು ಇಲ್ಲಿನ ಟೋಲ್ ಗೇಟನ್ನು ಎಲ್ಲಾ ವ್ಯವಸ್ಥೆಗಳನ್ನು ಒದಗಿಸುವವರೆಗೂ ಶಾಶ್ವತವಾಗಿ ಮುಚ್ಚಬೇಕು ಎಂದು ವಾಹನ ಸವಾರರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.












0 comments:
Post a Comment