ಬಂಟ್ವಾಳ, ಎಪ್ರಿಲ್ 24, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಗಳನ್ನು ಖಾಸಗೀ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿರುವ ಸರಕಾರದ ಕ್ರಮವನ್ನು ವಿರೋಧಿಸಿ ಸಿಪಿಐಎಂಎಲ್ ಲಿಬರೇಶನ್ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದು, ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಕೆಲವು ಸಂಘಟನೆಗಳು ಈ ಕುರಿತು ನಕಾರಾತ್ಮಕ ವಿಷಯಗಳನ್ನು ಹರಡುತ್ತಿದ್ದು ಇದು ಸತ್ಯಾಂಶಕ್ಕೆ ದೂರವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆರೋಗ್ಯಾಧಿಕಾರಿಗಳ ಈ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಖಂಡಿಸಿದ್ದಾರೆ.
ಆರೋಗ್ಯಾಧಿಕಾರಿಗಳು ಜನತೆಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆಗಳು ಲಭ್ಯವಾಗುತ್ತಿದೆ ಎಂದು ತಿಳಿಸಿದ್ದು, ಉಚಿತವಾಗಿ ಯಾವುದೇ ಸಸ್ತ್ರ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಆಯುಷ್ಮಾನ್ ಯೋಜನೆಯಿಂದ ಇದರ ವೆಚ್ಚವನ್ನು ಪಡೆಯಲಾಗುತ್ತದೆ. ಸರಕಾರದ ಈ ಖಾಸಗೀ ಪರ ನೀತಿಗೆ ಜಿಲ್ಲೆಯ ಜನತೆಯಿಂದ ದೊಡ್ಡ ಮಟ್ಟದ ವಿರೋಧ ಬರುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಇಂತಹ ಬಾಲಿಶ ಹೇಳಿಕೆ ನೀಡಿರುವುದು ಸ್ಪಷ್ಟವಾಗುತ್ತದೆ ಎಂದವರು ತಿಳಿಸಿದ್ದಾರೆ.
ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಗ್ರಾಮೀಣ ಭಾಗದ ಜನರಿಗೆ ವಿವಿಧ ತಜ್ಞ ವೈದ್ಯರ ಸೇವೆಗಳನ್ನು ನೀಡಲು ಪ್ರತಿಷ್ಟಿತ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿರುತ್ತಾರೆ. ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ನೀಡಬೇಕಾದುದು ಸರಕಾರದ ಕರ್ತವ್ಯವಾಗಿದ್ದು ಸರಕಾರವು ಇದರಿಂದ ನುಣುಚಿಕೊಂಡಿದೆ ಎಂಬುದು ಆರೋಗ್ಯಾಧಿಕಾರಿಗಳ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಈ ಒಪ್ಪಂದವು ಒಟ್ಟು ಅರೋಗ್ಯ ರಂಗವನ್ನೇ ಖಾಸಗೀಕರಣಗೊಳಿಸುವ ಸರಕಾರದ ಹುನ್ನಾರವಾಗಿದೆ ಎಂದಿರುವ ಅವರು, ಕೂಡಲೇ ಜಿಲ್ಲಾ ಆರೋಗ್ಯ ಅಧಿಕಾರಿಗಳು ಈ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಒಪ್ಪಂದವನ್ನು ರದ್ದುಗೊಳಿಸಲು ಕ್ರಮ ವಹಿಸಬೇಕೆಂದು ರಾಮಣ್ಣ ವಿಟ್ಲ ಆಗ್ರಹಿಸಿದ್ದಾರೆ.











0 comments:
Post a Comment