ಬಂಟ್ವಾಳ, ಎಪ್ರಿಲ್ 28, 2026 (ಕರಾವಳಿ ಟೈಮ್ಸ್) : ಪೆಟ್ರೋಲ್ ಪಂಪ್ ಸಿಬ್ಬಂದಿಗೆ ತಂಡವೊಂದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಘಟನೆ ಕನ್ಯಾನ ಗ್ರಾಮದ ಇಂಡಿಯನ್ ಪೆಟ್ರೋಲ್ ಪಂಪಿನಲ್ಲಿ ಎಪ್ರಿಲ್ 26 ರಂದು ರಾತ್ರಿ ವೇಳೆ ಸಂಭವಿಸಿದೆ.
ಕನ್ಯಾನ ನಿವಾಸಿ ಮೊಹಮ್ಮದ್ ಇಕ್ಬಾಲ್ (40) ಎಂಬವರೇ ಹಲ್ಲೆಗೊಳಗಾದ ಪೆಟ್ರೋಲ್ ಪಂಪ್ ಸಿಬ್ಬಂದಿ. ಇವರು ಕನ್ಯಾನ ಗ್ರಾಮದ ಇಂಡಿಯನ್ ಪೆಟ್ರೋಲ್ ಪಂಪಿನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಎಪ್ರಿಲ್ 26 ರಂದು ಕೆಲಸದಲ್ಲಿದ್ದಾಗ ರಾತ್ರಿ 10.55ಕ್ಕೆ ಪರಿಚಯದ ಸಿಯಾಬ್ ಎಂಬಾತ ಕೆಂಪು ಬಣ್ಣದ ಕಾರಿನಲ್ಲಿ ಪೆಟ್ರೋಲ್ ಪಂಪಿಗೆ ಬಂದು ಕಾರಿಗೆ ಪೆಟ್ರೋಲ್ ಹಾಕಿಸಿ ಬಳಿಕ ನಿಮಗೆ ನಾವು ಪೆಟ್ರೋಲ್ ಪಂಪಿನ ಹತ್ತಿರ ಕುಳಿತುಕೊಳ್ಳುವುದರಿಂದ ಬಾರಿ ತೊಂದರೆಯಾಗುತ್ತದೆಯೇ? ನೀನು ಇಲ್ಲಿ ಹೇಗೆ ವ್ಯಾಪಾರ ಮಾಡುತ್ತೀಯ ನೋಡುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದಾನೆ.
ಬಳಿಕ ಸ್ವಲ್ಪ ಹೊತ್ತಿನಲ್ಲಿ ಇಕ್ಬಾಲ್ ಪಂಪ್ ಬಂದ್ ಮಾಡುತ್ತಿದ್ದಾಗ ಸಿಯಾಬನು ಆತನ ಸ್ನೇಹಿತರಾದ ನೂರುದ್ದೀನ್, ಸಯಾದ್, ಆತನ ತಂದೆ ಅಬೂಬಕ್ಕರ್ ಮತ್ತು ಇಬ್ಬರು ತಮ್ಮಂದಿರನ್ನು ಜೊತೆ ಕರೆದುಕೊಂಡು ಪೆಟ್ರೋಲ್ ಪಂಪಿನ ಎದುರು ರಸ್ತೆಗೆ ಬಂದು ನಮ್ಮನ್ನು ಪಂಪಿನ ಹತ್ತಿರ ಕುಳಿತುಕೊಳ್ಳಬಾರದೆಂದು ಹೇಳುತ್ತೀಯಾ ಎಂದು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುತ್ತಾರೆ. ಆಗ ಇಕ್ಬಾಲ್ ಜೋರಾಗಿ ಬೊಬ್ಬೆ ಹಾಕಿದ್ದು, ಬೊಬ್ಬೆ ಕೇಳಿ ಪಂಪಿನಲ್ಲಿದ್ದ ಕೆಲಸದವರು ಮತ್ತು ಇಕ್ಬಾಲ್ ಅವರ ಅಣ್ಣಂದಿರು ಅಲ್ಲಿಗೆ ಓಡಿ ಬಂದಿದ್ದಾರೆ. ಅವರನ್ನು ನೋಡಿ ಆರೋಪಿಗಳು ಇಕ್ಬಾಲ್ ಅವರನ್ನು ದೂಡಿ ಹಾಕಿ ಓಡಿ ಹೋಗಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ಇಕ್ಬಾಲ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಅವರು ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment