ಮಂಗಳೂರು, ಎಪ್ರಿಲ್ 24, 2026 (ಕರಾವಳಿ ಟೈಮ್ಸ್) : ವರನಟ, ನಟಸಾರ್ವಭೌಮ ಎಂದೇ ಬಿರುದು ಪಡೆದ ಡಾ. ರಾಜ್ ಕುಮಾರ್ ಅವರ ಸರಳ ವ್ಯಕ್ತಿತ್ವ ಯುವಜನತೆಗೆ ಮಾದರಿ. ಇಂದಿನ ಯುವಜನತೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ಎಪ್ರಿಲ್ 24 ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಡಾ. ರಾಜ್ ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ ಕುಮಾರ್ ಅವರು ಸರಳತೆ ಮತ್ತು ಉತ್ತಮ ಮೌಲ್ಯಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಡಾ. ರಾಜ್ ಕುಮಾರ್ ಅವರ ಜನ್ಮ ದಿನವನ್ನು ಸರಕಾರ ಆಚರಿಸುತ್ತಿರುವುದು ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ ಮಾತನಾಡಿ, ಡಾ. ರಾಜ್ ಕುಮಾರ್ ಅವರು ಕನ್ನಡ ನಾಡು ಸಮೃದ್ಧಗೊಳಿಸಿದ ಮಹಾನ್ ನಾಯಕ. ಅಭಿಮಾನಿಗಳು ತಮ್ಮ ಆದರ್ಶಗಳನ್ನು ಹಿಂಬಾಲಿಸುವ ಕಾರಣದಿಂದ ತಾವು ನಟಿಸಿದ ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯವನ್ನು ಅಭಿನಯಿಸಲಿಲ್ಲ. ಚಲನಚಿತ್ರದಲ್ಲಿ ಮಾತ್ರವಲ್ಲದೆ ಅವರು ನಿಜ ಜೀವನದಲ್ಲಿಯೂ ನಾಯಕರಾಗಿದ್ದು, ಅಭಿನಯವನ್ನು ನಿಜ ಜೀವನದಲ್ಲಿಯೂ ತೋರಿಸಿದವರು ಎಂದರು.
ಕನ್ನಡ ಚಲನಚಿತ್ರ ರಂಗದ ಬಹುಬೇಡಿಕೆಯ ನಟರಾಗಿದ್ದ ಅವರು ಪರಭಾಷೆ ಚಲನಚಿತ್ರದಲ್ಲಿ ನಟಿಸುತ್ತಿರಲಿಲ್ಲ. ಐತಿಹಾಸಿಕ, ಭಕ್ತಿ ಪ್ರಧಾನ, ಪೌರಾಣಿಕ ಹೀಗೆ 212 ಚಲನಚಿತ್ರಗಳಲ್ಲಿ ನಟಿಸಿದ ಅವರು ಜೀವನದ ಎಲ್ಲಾ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಭಿನಯದ ಜೊತೆಗೆ ಅವರ ಗಾಯನಗಳು ಚಲನಚಿತ್ರ ರಂಗದಲ್ಲಿ ಛಾಪು ಮೂಡಿಸಿದ್ದವು. ಅವರ ಚಲನಚಿತ್ರಗಳು ಮನರಂಜನೆ ಮಾತ್ರವಲ್ಲದೆ ಜೀವನದ ಉತ್ತಮ ಮೌಲ್ಯಗಳನ್ನು ತಿಳಿಸುತ್ತಿದ್ದವು. ಅವರಿಗೆ ರಾಜಕೀಯ ಅವಕಾಶಗಳು ಒದಗಿ ಬಂದರೂ ಅದನ್ನು ತೊರೆದು, ಕನ್ನಡ ಚಲನಚಿತ್ರ ರಂಗದಲ್ಲಿಯೇ ವಿಶೇಷವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಗೋಕಾಕ್ ಚಳುವಳಿಯಂತಹ ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ, ಕನ್ನಡದ ಅಸ್ಮಿತೆ ಎತ್ತಿ ಹಿಡಿದವರಲ್ಲಿ ಡಾ. ರಾಜ್ ಕುಮಾರ್ ಅವರು ಒಬ್ಬರಾಗಿದ್ದರು. ಕನ್ನಡ ನಾಡು ನುಡಿಗೆ ವಿಶೇಷವಾದ ಕೊಡುಗೆ ನೀಡಿದ್ದಾರೆ ಎಂದು ಹರೀಶ್ ರೈ ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಪ್ರೊ ಗಣಪತಿ ಗೌಡ ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್ ಭಾಗವಹಿಸಿದ್ದರು. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಲಹೆಗಾರ ಡಾ. ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕ ಡಾ. ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.













0 comments:
Post a Comment