ಬೆಳ್ತಂಗಡಿ, ಎಪ್ರಿಲ್ 17, 2026 (ಕರಾವಳಿ ಟೈಮ್ಸ್) : ಗಾಂಜಾ ಮಾರಾಟಕ್ಕೆ ಯತ್ನಿಸಿದ ಪ್ರಕರಣದ ಆರೋಪಿಗೆ ನ್ಯಾಯಾಲಯ 5 ವರ್ಷಗಳ ಕಠಿಣ ಸಜೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಶಿಕ್ಷೆಗೊಳಗಾದ ಅಪರಾಧಿಯನ್ನು ಬೆಳ್ತಂಗಡಿ-ಚಾರ್ಮಾಡಿ ನಿವಾಸಿ ಟಿ ಇ ಜೋಸೆಫ್ (42) ಎಂದು ಹೆಸರಿಸಲಾಗಿದೆ. 2009ರ ಮಾರ್ಚ್ 8 ರಂದು ಬೆಳ್ತಂಗಡಿ ಉಜಿರೆ ರಥಬೀದಿ ಎಂಬಲ್ಲಿ 50 ಸಾವಿರ ರೂಪಾಯಿ ಮೌಲ್ಯದ 1.500 ಕಿ.ಗ್ರಾಂ ತೂಕದ ನಿಷೇದಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿ, ಬೆಳ್ತಂಗಡಿ ಠಾಣಾ ಅಪರಾಧ ಕ್ರಮಾಂಕ 60/09, ಕಲಂ 8(ಸಿ) ಜೊತೆಗೆ 20(ಬಿ) ಎನ್.ಡಿ.ಪಿ.ಎಸ್. ಕಾಯಿದೆಯಂತೆ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ವಿಶೇಷ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದ ಬಸವರಾಜ್ ಅವರು ಎಪ್ರಿಲ್ 10 ರಂದು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದು, ಎಪ್ರಿಲ್ 16 ರಂದು ಎನ್ ಡಿ ಪಿ ಎಸ್ ಕಾಯ್ದೆಯ ಸೆಕ್ಷನ್ 8(ಸಿ) ಆರ್/ಡಬ್ಲ್ಯು ಸೆಕ್ಷನ್ 20(ಬಿ)(2)(ಬಿ) ಅಡಿಯಲ್ಲಿ 5 ವರ್ಷಗಳ ಅವಧಿಗೆ ಕಠಿಣ ಜೈಲು ಶಿಕ್ಷೆ ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ 2 ತಿಂಗಳುಗಳ ಕಾಲ ಕಠಿಣ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿತ್ತಿದ್ದಾರೆ. ಎನ್ ಡಿ ಪಿ ಎಸ್ ಕಾಯ್ದೆಯ ಸೆಕ್ಷನ್ 32-ಬಿ(ಎಫ್) ಅಡಿಯಲ್ಲಿ 1 ವರ್ಷದ ಅವಧಿಯ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ತನಿಖಾಧಿಕಾರಿಯಾಗಿದ್ದ ಬೆಳ್ತಂಗಡಿ ಠಾಣಾ ಪಿಎಸ್ಸೈ ಬಿ.ಜಿ ಸುಬ್ಬಾಪುರ್ ಮಠ್ ಅವರು ಆರೋಪಿಯ ವಿರುದ್ದ ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕಿ ಶ್ರೀಮತಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದಾರೆ.











0 comments:
Post a Comment