ಬಂಟ್ವಾಳ, ಎಪ್ರಿಲ್ 06, 2026 (ಕರಾವಳಿ ಟೈಮ್ಸ್) : ಮನೆ ಮಂದಿ ದೇವಸ್ಥಾನದ ಜಾತ್ರೆಗೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಚ್ಚಿನ ಗ್ರಾಮದ ಬಳ್ಳಮಂಜ ಎಂಬಲ್ಲಿ ಎಪ್ರಿಲ್ 5 ರಂದು ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ಪುರೋಹಿತ ಹಾಗೂ ಕೃಷಿಕರಾಗಿರುವ ಡಿ ಮುರಳಿ (50) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಎಪ್ರಿಲ್ 5 ರಂದು ಸಂಜೆ 6.40 ರ ವೇಳೆಗೆ ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಬ್ರಹ್ಮ ಕಳಸದ ಜಾತ್ರೆಗೆ ಹೆಂಡತಿ, ತಾಯಿ ಮತ್ತು ಮಗನ ಜೊತೆಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ದೇವಸ್ಥಾನದ ಪೂಜೆ ಮುಗಿಸಿ ರಾತ್ರಿ 8.30ರ ವೇಳೆಗೆ ಹೆಂಡತಿ, ತಾಯಿ ಹಾಗೂ ಮಗ ಮನೆಗೆ ಬಂದಾಗ ಮನೆಯ ಬೀಗ ಒಡೆದು ಕಳ್ಳತವಾಗಿರುವುದು ಬೆಳಕಿಗೆ ಬಂದಿದೆ.
ಮನೆಯ ಮುಂಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಒಳಪ್ರವೇಶಿಸಿದ ಕಳ್ಳರು ಮನೆಯ ಬೆಡ್ ರೂಮಿನ ಕಪಾಟಿನ ಲಾಕ್ ಮುರಿದು ಅದರಲ್ಲಿದ್ದ ಸುಮಾರು 2,15,600/- ರೂಪಾಯಿ ಮೌಲ್ಯದ 22 ಗ್ರಾಂ ತೂಕದ ಚಿನ್ನದ 2 ಚೈನ್, ಸುಮಾರು 78,400/- ರೂಪಾಯಿ ಮೌಲ್ಯದ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್, ಸುಮಾರು 1.96 ಲಕ್ಷ ರೂಪಾಯಿ ಮೌಲ್ಯದ 20 ಗ್ರಾಂ ತೂಕದ 5 ಚಿನ್ನದ ಉಂಗುರಗಳು, ಸುಮಾರು 1,76,400/- ರೂಪಾಯಿ ಮೌಲ್ಯದ 18 ಗ್ರಾಂ ತೂಕದ ಚಿನ್ನದ ಚೈನ್, ಸುಮಾರು 2,15,600/- ರೂಪಾಯಿ ಮೌಲ್ಯದ 22 ಗ್ರಾಂ ತೂಕದ ಚಿನ್ನದ ನಕ್ಲೇಸ್, ಸುಮಾರು 1.96 ಲಕ್ಷ ರೂಪಾಯಿ ಮೌಲ್ಯದ 20 ಗ್ರಾಂ ತೂಕದ 1 ಜೊತೆ ಚಿನ್ನದ ಬಳೆ, ಸುಮಾರು 1,56,800/- ರೂಪಾಯಿ ಮೌಲ್ಯದ 16 ಗ್ರಾಂ ತೂಕದ ಚಿನ್ನದ 2 ಜೊತೆ ಕಿವಿಯೋಲೆ, ಸುಮಾರು 19,600/- ರೂಪಾಯಿ ಮೌಲ್ಯದ 2 ಗ್ರಾಂ ತೂಕದ ಚಿನ್ನದ ಪೆಂಡೆಂಟ್ ಮತ್ತು 78,400/- ರೂಪಾಯಿ ಮೌಲ್ಯದ ಪುರೋಹಿತ್ಯ ಸಮಯ ಬಹುಮಾನವಾಗಿ ಬಂದಿರುವ ಚಿನ್ನದ ದೇವರ ಭಾವಚಿತ್ರ ಇರುವ ಚಿಕ್ಕ-ಚಿಕ್ಕ ಬಂಗಾರದ ತುಂಡುಗಳು ಸುಮಾರು 8 ಗ್ರಾಂ, ಕೃಷಿ ಉತ್ಪನ್ನದಿಂದ ಬಂದ 3 ಲಕ್ಷ ರೂಪಾಯಿ ನಗದು, ಹಾಗೂ ವೈದಿಕ ವೃತ್ತಿಯಿಂದ ಕೂಡಿಟ್ಟ 3 ಲಕ್ಷ ರೂಪಾಯಿ ನಗದು ಹಣವನ್ನು ಕಳ್ಳರು ಕಳವುಗೈದಿದ್ದಾರೆ.
ಕಳ್ಳತನವಾದ ಒಟ್ಟು 136 ಗ್ರಾಂ ಚಿನ್ನಾಭರಣದ ಮೌಲ್ಯ 13,32,800/- ರೂಪಾಯಿ ಹಾಗೂ 6 ಲಕ್ಷ ನಗದು ಹಣ ಸಹಿತ ಒಟ್ಟು 19,32,800/- ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ರಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.











0 comments:
Post a Comment