ಬಂಟ್ವಾಳ, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಹರುನಗರ ಶಾಲಾ ಬಳಿ ತ್ಯಾಜ್ಯ ಸಮಸ್ಯೆ ಮೇರೆ ಮೀರಿದ್ದು ಜನ ತೀವ್ರ ಅಸಹ್ಯಪಡುವಂತಾಗಿದೆ. ಜನವಸತಿ ಪ್ರದೇಶವಾಗಿರುವ ಇಲ್ಲಿ ಜನ ವಾಹನಗಳಲ್ಲಿಯೂ ಬಂದು ಕಸ-ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ. ಇದನ್ನು ವಿಲೇವಾರಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ಪಂಚಾಯತ್ ಆಡಳಿತ, ಅಧಿಕಾರಿಗಳು ಗಾಢ ಮೌನಕ್ಕೆ ಶರಣಾಗಿರುವುದೇ ಜನರ ಅಸಹನೆಗೆ ಕಾರಣವಾಗಿದೆ.
ಇಲ್ಲಿನ ಸರಕಾರಿ ಶಾಲೆಯ ಆವರಣ, ಮೈದಾನ ಸಹಿತ ಸಮೀಪದ ಹೆದ್ದಾರಿ ಬದಿಯುದ್ದಕ್ಕೂ ತ್ಯಾಜ್ಯ ರಾಶಿ ಬಿದ್ದಿದ್ದು, ನಿತ್ಯವು ಬೀದಿ ನಾಯಿಗಳು, ಜಾನುವಾರುಗಳು ಎಳೆದಾಡಿಕೊಂಡು ಎಲ್ಲೆಂದರಲ್ಲಿ ಹಾಕುವ ಮೂಲಕ ಪರಿಸರವಿಡೀ ದುರ್ನಾತ ಬೀರುತ್ತಿದೆ. ಇಲ್ಲಿನ ತ್ಯಾಜ್ಯ ಸಮಸ್ಯೆಯಿಂದ ಶಾಲಾ ಮಕ್ಕಳಿಗೆ ಆರೋಗ್ಯ ಸಮಸ್ಯೆಯ ಆತಂಕ ಎದುರಾಗಿದೆ. ಅಲ್ಲದೆ ತ್ಯಾಜ್ಯಗಳನ್ನು ಎಳೆದಾಡಲು ಬರುವ ಬೀದಿ ನಾಯಿಗಳು ಕೂಡಾ ಮಕ್ಕಳ ಮೇಲೆ ಆಕ್ರಮಣ ಮಾಡುವ ಭೀತಿ ಉಂಟಾಗಿದೆ. ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳಿಗೆ ಪರಿಹಾರ ಕ್ರಮಕ್ಕಾಗಿ ಈ ಬಗ್ಗೆ ನಿರಂತರವಾಗಿ ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದರು ಈ ಸಮಯದವರೆಗೂ ಯಾವುದೇ ಕನಿಷ್ಠ ಸ್ಪಂದನೆಯೂ ಇಲ್ಲದಂತಾಗಿದೆ. ಸಂಬಂಧಪಟ್ಟವರ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಸರಕಾರಿ ಶಾಲೆಗೆ ಪೋಷಕರು ಮಕ್ಕಳನ್ನು ಕಳುಹಿಸಲೂ ಹಿಂದೇಟು ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಜಿಲ್ಲಾ ಪಂಚಾಯತ್ ಸಿಇಒ ಅವರು ಸ್ವಚ್ಛತೆ ಸಂಬಂಧ ಇಒ ಹಾಗೂ ಪಿಡಿಒಗಳ ಸಭೆ ಕರೆದು ತ್ಯಾಜ್ಯ ಸಂಬಂಧ ಕಠಿಣ ಕ್ರಮಕ್ಕೆ ಸೂಚನೆ ನೀಡಿರುವುದು ಇಲ್ಲಿನ ಪಂಚಾಯತ್ ವ್ಯಾಪ್ತಿಗೂ ಅನ್ವಯವಾಗಲಿದೆಯೇ ಎಂದು ಗ್ರಾಮಸ್ಥರು ಕಾತರದಿಂದ ಕಾಯುತ್ತಿದ್ದಾರೆ. ಸಿಇಒ ಅವರ ಕಠಿಣ ಕ್ರಮ ಜಾರಿಯಾದರಾದರೆ ಇಲ್ಲಿನ ಹಲವು ವರ್ಷಗಳ ತ್ಯಾಜ್ಯ ಸಮಸ್ಯೆಗೆ ಮುಕ್ತಿ ದೊರೆತೀತು ಎಂದು ಸ್ಥಳೀಯರು ನಿರೀಕ್ಷೆ ಇಟ್ಟುಕೊಂಡಿದ್ದಾರೆ.





















0 comments:
Post a Comment