ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಸಹಯೋಗದೊಂದಿಗೆ ಮೇ 12 ರಂದು ಪಾಣೆಮಂಗಳೂರು ಆಲಡ್ಕದ ಎಸ್. ಎಸ್ ಆಡಿಟೋರಿಯಂನಲ್ಲಿ ನಡೆಯುವ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ, ಹಾಡುಗಾರ, ಸಾಹಿತಿ ರಹೀಂ ಬಿ ಸಿ ರೋಡು ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್, ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಅವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಲ್ಯದಲ್ಲಿಯೇ ಹಾಡುಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡ ರಹೀಂ ಬಿ ಸಿ ರೋಡು ತನ್ನ ತಾಯಿ ಪರಿಸರದ ಖ್ಯಾತ ಸಬೀನಾ ಹಾಡುಗಾರ್ತಿ ಉಮಾತುಮ್ಮ (ಮೋಲು ದಾದ) ರಿಂದ ಪ್ರೇರಣೆ ಪಡೆದು ಹಾಡುಗಾರಿಕೆ ಆರಂಭಿಸಿದ್ದರು. ಪಕ್ಷಿಪಾಟ್, ಇರಿಲೋಗಂ, ಮಾನಿಕ ಮನಿ ಮುತ್ತು ಇಂತಹ ಮಲಯಾಳಂ ಮಾಪಿಳ್ಳೆ ಹಾಡುಗಳ ದಾಟಿಗೆ ಬ್ಯಾರಿ ಹಾಡುಗಳನ್ನು ಬರೆದು ಹಾಡುತ್ತಿದ್ದ ಇವರು ನಂತರ ನಾಟಕಗಳಲ್ಲಿ ಹಿನ್ನೆಲೆ ಗಾಯಕರಾಗಿ ಗುರುತಿಕೊಂಡರು.
ರಹೀಂ ಬಿ ಸಿ ರೋಡು ಅವರು ನಾಟಕಗಳಲ್ಲಿ ಸ್ವ ರಚನೆಯ ಹಾಡುಗಳನ್ನು ಹಾಡಿದ್ದಾರೆ. ಹಿರಿಯ ಬ್ಯಾರಿ ಹಾಡುಗಾರರಾಗಿ ಗುರುತಿಸಿಕೊಂಡಿರುವ ಇವರು ನೂರಾರು ಕವಿ ಗೋಷ್ಠಿಗಳಲ್ಲಿ ಭಾಗವಹಿಸಿ, ಬ್ಯಾರಿ ಕವನ ವಾಚಿಸಿ, ಜನಮನ ಗೆದ್ದಿದ್ದಾರೆ.
ಹಾಡುವುದನ್ನೇ ವೃತ್ತಿ ಜೀವನವನ್ನಾಗಿ ಮಾಡಿಕೊಂಡ ರಹೀಂ ಬಿ ಸಿ ರೋಡು ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ಕೇರಳದ ನಾನಾ ಭಾಗಗಳಲ್ಲಿ ನಡೆದ ರಸಮಂಜರಿ ಕಾರ್ಯಕ್ರಮಗಳಲ್ಲಿ ಬ್ಯಾರಿ, ತುಳು, ಮಲಯಾಳಂ, ಕನ್ನಡ, ಹಿಂದಿ ಮಾತ್ರವಲ್ಲದೆ ಕನ್ನಡ ಜಾನಪದ ಹಾಗೂ ಹಿಂದಿ ಖವ್ವಾಲಿಗಳನ್ನು ಕೂಡಾ ಅಷ್ಟೇ ಸುತ್ರಾವ್ಯವಾಗಿ ಹಾಡಿರುತ್ತಾರೆ.
ಮೊದಲಿಗೆ ರವಿ ಆಡಿಯೋ ಸೆಂಟರ್ ಪಾಣೆಮಂಗಳೂರು ಹೊರತಂದ ಧ್ವನಿ ಸುರುಳಿಗೆ ಸಾಹಿತ್ಯ ಬರೆದು ಹಾಡುವ ಮೂಲಕ ಬ್ಯಾರಿ ಸಂಗೀತ ಪ್ರೇಮಿಗಳ ಮನಗೆದ್ದ ರಹೀಂ ಬಿ ಸಿ ರೋಡು ಅನೇಕ ಬ್ಯಾರಿ ಹಾಡುಗಳ ಧ್ವನಿ ಸುರುಳಿಗೆ ಸಾಹಿತ್ಯ ಬರೆದು ಹಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಅಳ್ವಾಸ್ ನುಡಿಸಿರಿ ಮತ್ತು ಬಿ ಸಿ ರೋಡು ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನ ಒಳಗೊಂಡಂತೆ ಹಲವು ಪ್ರಶಸ್ತಿ ಪುರಸ್ಕಾರಗಳು ರಹೀಂ ಬಿ ಸಿ ರೋಡು ಅವರಿಗೆ ದೊರೆತಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment