ಬಂಟ್ವಾಳ, ಮೇ 06, 2026 (ಕರಾವಳಿ ಟೈಮ್ಸ್) : ಲಾರಿ ಚಾಲಕ ಹಿಟ್ ಆಂಡ್ ರನ್ ನಡೆಸಿದ ಪರಿಣಾಮ ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಪುದು ಗ್ರಾಮದ ಫರಂಗಿಪೇಟೆ ಸೇವಾಂಜಲಿ ಹಾಲ್ ಮುಂಭಾಗದಲ್ಲಿ ಮೇ 5 ರಂದು ಸಂಜೆ ಸಂಭವಿಸಿದೆ.
ಮೃತ ಪಾದಚಾರಿ ವ್ಯಕ್ತಿಯನ್ನು ಇಲ್ಲಿನ ನಿವಾಸಿ ಸಲಾಹುದ್ದೀನ್ ಎಂದು ಹೆಸರಿಸಲಾಗಿದೆ. ಇವರು ಮೇ 5 ರಂದು ಸಂಜೆ ಸುಮಾರು 5.20ರ ವೇಳೆಗೆ ಸೇವಾಂಜಲಿ ಹಾಲ್ ಎದುರು ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಮಂಗಳೂರು ಕಡೆಗೆ ಕೆಎ20 ಬಿ9692 ನೋಂದಣಿ ಸಂಖ್ಯೆಯ ಲಾರಿಯನ್ನು ಚಲಾಯಿಸಿಕೊಂಡು ಬಂದ ಚಾಲಕ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಸಲಾಹುದ್ದೀನ್ ಅವರಿಗೆ ಡಿಕ್ಕಿ ಹೊಡೆದು ಲಾರಿಯನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಪಘಾತದಿಂದ ಗಂಭೀರ ಗಾಯಗೊಂಡ ಸಲಾಹುದ್ದೀನ್ ಅವರನ್ನು ತಕ್ಷಣ ಕಾರಿನಲ್ಲಿ ಪಡೀಲ್ ಜನಪ್ರಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪರಾರಿಯಾದ ಲಾರಿಯ ನೋಂದಣಿ ಸಂಖ್ಯೆಯನ್ನು ಗುರುತಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಕುಂಪಣಮಜಲು ನಿವಾಸಿ ಅಬ್ದುಲ್ ಫಾಝಿಲ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment