ಪಾಣೆಮಂಗಳೂರಿನಲ್ಲಿ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ
ಬಂಟ್ವಾಳ, ಮೇ 14, 2026 (ಕರಾವಳಿ ಟೈಮ್ಸ್) : ಸಾಹಿತ್ಯಗಳು ಮನುಷ್ಯ-ಮನುಷ್ಯ ನಡುವಿನ ಅಪನಂಬಿಕೆ, ಮನಸ್ಸಿನ ದ್ವೇಷ, ಅಸೂಯೆಗಳನ್ನು ಅಳಿಸಿ ಸಾಮರಸ್ಯವನ್ನು ಬೆಳೆಸಲು ಪ್ರೇರಣೆಯಾಗಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಸಹಯೋಗದಲ್ಲಿ ಪಾಣೆಮಂಗಳೂರಿನ ಆಲಡ್ಕದ ಎಸ್ ಎಸ್ ಆಡಿಟೋರಿಯಂ ಇಲ್ಲಿನ ಮರ್ ಹೂಂ ಫಾರೂಕ್ ಗೂಡಿನಬಳಿ ದ್ವಾರ, ಮರ್ ಹೂಂ ಮಹಮ್ಮದ್ ಮಾರಿಪಳ್ಳ ಸಭಾಂಗಣ, ಮರ್ ಹೂಂ ಹಾಜಿ ಜಿ ಅಬ್ದುಲ್ ಖಾದರ್ ವೇದಿಕೆಯಲ್ಲಿ ಮೇ 12 ರಂದು ನಡೆದ ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷೆಯ ಬಳಕೆ ಕಡಿಮೆ ಮಾಡಿದರೆ ಭಾಷೆ ನಾಶವಾಗುವ ಅಪಾಯವಿದೆ. ಭಾಷೆ ಒಂದು ಸಮುದಾಯಕ್ಕೆ ಸೀಮಿತವಾದುದಲ್ಲ. ಅದು ಸಮಾಜದ ವಿವಿಧ ವರ್ಗಗಳ ಜನರ ಮಧ್ಯೆ ಸಂಪರ್ಕ ಮಾಧ್ಯಮವಾಗಿದೆ ಎಂದರು.
ಬ್ಯಾರಿ ಭಾಷೆ ಸುಂದರ ಭಾಷೆ, ಬ್ಯಾರಿ ಭಾಷೆಯಲ್ಲಿ ಹೇರಳ ಸಾಹಿತ್ಯಿಕ ಸೊಬಗಿದೆ. ಸಾಹಿತ್ಯಿಕ ಕೃಷಿ ಹೆಚ್ಚು ಮಾಡಿದಾಗ ಭಾಷೆಯ ಹಾಗೂ ಜೊತೆಗೆ ಸಮುದಾಯದ ಅಭಿವೃದ್ದಿ ಸಾಧ್ಯವಿದೆ ಎಂದ ರೈ, ಭಾಷೆಯನ್ನು ಹೆಚ್ಚು ಹೆಚ್ಚು ಬಳಕೆ ಮಾಡಿ ಭಾಷೆಯ ಅಭಿವೃದ್ದಿಗೆ ಶ್ರಮಿಸಿ. ಬಂಟ್ವಾಳದಲ್ಲಿ ನಡೆದ ಅಚ್ಚುಕಟ್ಟಿನ ಸಾಹಿತ್ಯ ಸಮ್ಮೇಳನ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಹಿತ್ಯಕ ಕಾರ್ಯಕ್ರಮಗಳಿಗೆ ಪ್ರೇರಣೆಯಾಗಲಿ ಎಂದರು.
ಸಾಹಿತ್ಯದ ಜೊತೆಗೆ ಸಮುದಾಯದ ಮಂದಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇತ್ತೀಚೆಗಿನ ದಿನಗಳಲ್ಲಿ ಬ್ಯಾರಿ ಸಮುದಾಯದ ಹೆಣ್ಣು ಮಕ್ಕಳು ಶೈಕ್ಷಣಿಕ ಸಾಧನೆ ಮಾಡುತ್ತಿದ್ದಾರೆ. ರ್ಯಾಂಕ್ ಪಟ್ಟಿಗಳಲ್ಲಿ ಬ್ಯಾರಿ ಸಮುದಾಯದ ಹೆಣ್ಣು ಮಕ್ಕಳ ಹೆಸರು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಅಭಿಮಾನ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ. ಜ್ಞಾನ ಸಂಪಾದನೆ ಮಾಡಿದರೆ ಸಮುದಾಯ ಎಲ್ಲ ರೀತಿಯಲ್ಲೂ ಅಭಿವೃದ್ದಿಯಾಗಲಿದೆ. ಪವಿತ್ರ ಇಸ್ಲಾಮ್ ಕೂಡಾ ಇಖ್-ರಅï ಎಂಬ ಪದ ಉಪಯೋಗದ ಮೂಲಕ ಶಿಕ್ಷಣಕ್ಕೆ ಮಹತ್ವ ಸಾರಿದೆ ಎಂದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು ಎಚ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಜಿ ಎ ಬಾವಾ, ಪೂನಾದ ಡಾ ಡಿ ವೈ ಪಾಟೀಲ ವಿವಿ ಕುಲಸಚಿವ ಡಾ ಬೀರಾನ್ ಮೊಯಿದಿನ್ ಬಿ ಎಂ, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಹಾಜಿ ಎ ಉಸ್ಮಾನ್ ಕರೋಪಾಡಿ, ಜನಪ್ರಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ ಅಬ್ದುಲ್ ಬಶೀರ್ ವಿ ಕೆ, ಮಂಗಳೂರು ಎಜೆ ಆಸ್ಪತ್ರೆಯ ಸ್ಥಾನೀಯ ವೈದ್ಯೆ ಡಾ ಹಸೀನಾ ಪೊನ್ನೋಡಿ, ಹಿರಿಯ ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಭಾಗವಹಿಸಿದ್ದರು.
ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧನೆಗೈದ ಡಾ ಎಂ ಎಂ ಶರೀಫ್ ಪಾಣೆಮಂಗಳೂರು (ವೈದ್ಯಕೀಯ ಕ್ಷೇತ್ರ), ಅಬ್ಬೋನು ನಂದಾವರ (ಬ್ಯಾರಿ ಜನಪದ ಕ್ಷೇತ್ರ), ಅವ್ವಮ್ಮ ಒಕ್ಕೆತ್ತೂರು (ನಾಟಿ ವೈದ್ಯಕೀಯ ಕ್ಷೇತ್ರ), ಅಬ್ದುಲ್ ಖಾದರ್ ಮೋನುಂಞ ಕಲ್ಲಡ್ಕ (ಪತ್ರಿಕಾ ಕ್ಷೇತ್ರ), ಮುಹಮ್ಮದ್ ಕೋಡಪದವು (ಪರಿಸರ), ಝುಬೈದಾ ಪರ್ಲೊಟ್ಟು, (ಸಾಮುದಾಯಿಕ ಸೇವೆ ಕ್ಷೇತ್ರ), ಇಸ್ಮಾಯಿಲ್ ಅರಬಿ ಬಂಟ್ವಾಳ (ಸಾಮಾಜಿಕ ಕ್ಷೇತ್ರ) ಅವರುಗಳನ್ನು ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ರಹೀಂ ಬಿ ಸಿ ರೋಡು, ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ ಹಾಗೂ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಸಂಚಾಲಕ ಪಿ ಎ ರಹೀಂ, ಕೋಶಾಧಿಕಾರಿ ಹಾಜಿ ಮುಹಮ್ಮದ್ ಸಾಗರ್, ಉಪಾಧ್ಯಕ್ಷರುಗಳಾದ ಯು ಮುಸ್ತಫಾ, ಯೂಸುಫ್ ಕರಂದಾಡಿ, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ನಂದಾವರ, ಪತ್ರಿಕಾ ಕಾರ್ಯದರ್ಶಿ ಪಿ ಮುಹಮ್ಮದ್ ಪಾಣೆಮಂಗಳೂರು, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪಿ ಎಂ ಅಶ್ರಫ್ ಪಾಣೆಮಂಗಳೂರು, ಕೋಶಾಧಿಕಾರಿ ಹಂಝ ಬಸ್ತಿಕೋಡಿ ಆನಿಯಾ ದರ್ಬಾರ್ ಮೊದಲಾದವರು ಉಪಸ್ಥಿತರಿದ್ದರು. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಸ್ವಾಗತಿಸಿ, ಸದಸ್ಯ ಸಂಚಾಲಕ ಅಬೂಬಕ್ಕರ್ ಅನಿಲಕಟ್ಟೆ ವಂದಿಸಿದರು. ಬ್ಯಾರಿ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಶೀದ್ ನಂದಾವರ, ಅಶ್ರಫ್ ಅಪೋಲೋ, ಶರೀಫ್ ಪರ್ಲಿಯಾ ನೇತೃತ್ವದಲ್ಲಿ ಬ್ಯಾರಿ ಹಾಡುಗಾರಿಕೆ ಹಾಗೂ ಸತ್ತಾರ್ ಗೂಡಿನಬಳಿ ನಿರ್ದೇಶನದ “ತೆರು ತಪ್ಪಿರ್” ಪ್ರಹಸನ ಪ್ರದರ್ಶನಗೊಂಡಿತು.










0 comments:
Post a Comment