ಬಂಟ್ವಾಳ, ಮೇ 25, 2026 (ಕರಾವಳಿ ಟೈಮ್ಸ್) : ಸಜಿಪನಡು ಗ್ರಾಮದಲ್ಲಿ ಮನೆಯ ಹಂಚಿಗೆ ತಾಗಿಕೊಂಡಿರುವ ಮರ ತೆರವುಗೊಳಿಸುವ ಸಂದರ್ಭ ಪರಸ್ಪರ ಹಲ್ಲೆ ನಡೆಸಿರುವುದಾಗಿ ಇತ್ತಂಡಗಳು ದೂರು ಸಲ್ಲಿಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಸಜೀಪನಡು ಗ್ರಾಮದ ನಿವಾಸಿ ಸುರೇಶ್ ರೈ (52) ಎಂಬವರು ದೂರು ನೀಡಿದ್ದು, ಇವರ ಮನೆಯ ಸಮೀಪವೇ ಅವರ ತಾಯಿಯ ಮನೆಯಿದ್ದು, ಆರೋಪಿ ಸೋಮನಾಥ ಭಂಡಾರಿ ಎಂಬವರು ನೋಡಿಕೊಳ್ಳುತ್ತಿದ್ದ ಜಮೀನಿನಲ್ಲಿರುವ ಮರದ ಕೊಂಬೆಯೊಂದು, ಸದ್ರಿ ಮನೆಯ ಹಂಚಿಗೆ ತಾಗಿಕೊಂಡಿರುತ್ತದೆ. ಇದನ್ನು ತೆರವುಗೊಳಿಸುವಂತೆ ಆರೋಪಿಗೆ ಹಲವಾರು ಬಾರಿ ತಿಳಿಸಿದರೂ ತೆರವುಗೊಳಿಸಿರುವುದಿಲ್ಲ. ಮೇ 23 ರಂದು ಸಂಜೆ ಸುರೇಶ್ ರೈ ಅವರು ಸದ್ರಿ ಮರದ ಕೊಂಬೆಯನ್ನು ಕಡಿಯುತ್ತಿದ್ದಾಗ, ಸ್ಥಳಕ್ಕೆ ಬಂದ ಆರೋಪಿಯು ಸುರೇಶ್ ರೈ ಅವರಿಗೆ ತೆಂಗಿನ ಕಾಯಿ ಮತ್ತು ಕಲ್ಲುಗಳನ್ನು ಎಸೆದು ಗಾಯಗೊಳಿಸಿರುತ್ತಾನೆ. ಈ ವೇಳೆ ಸ್ಥಳಕ್ಕೆ ಬಂದ ಅವರ ಪತ್ನಿಗೆ ಆರೋಪಿಯು ಅವ್ಯಾಚವಾಗಿ ಬೈದು ಬೆದರಿಕೆ ಒಡ್ಡಿರುತ್ತಾನೆ. ಘಟನೆಯಿಂದ ಗಾಯಗೊಂಡ ಸುರೇಶ್ ರೈ ಅವರು ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಸುರೇಶ್ ರೈ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2026, ಕಲಂ 118(1), 351(2), 118(2), 115(2), 352, 74 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸುರೇಶ್ ರೈ ಹಾಗೂ ಅವರ ಪತ್ನಿ ಸೇರಿ ತನ್ನ ಮೇಲೆ ಹಲ್ಲೆ ನಡೆಸಿರುತ್ತಾರೆ ಎಂದು ಸೋಮನಾಥ ಭಂಡಾರಿ ಅವರು ಪ್ರತಿ ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.











0 comments:
Post a Comment