ಬಂಟ್ವಾಳ, ಮೇ 20, 2026 (ಕರಾವಳಿ ಟೈಮ್ಸ್) : ಬಹುಕಾಲದ ಕನಸೊಂದು ನನಸಾಲು ದಿನಗಣನೆ ಆರಂಭವಾಗಿದ್ದು, ಕಡೇಶ್ವಾಲ್ಯ-ಅಜಿಲಮೊಗರು ಸೌಹಾರ್ದ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಮೇ 20 ರಂದು ಬೆಳಿಗ್ಗೆ ಸೌಹಾರ್ದ ಸೇತುವೆಯನ್ನು ಕಡೇಶ್ವಾಲ್ಯದಲ್ಲಿ ವೀಕ್ಷಣೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಡೇಶ್ವಾಲ್ಯ ದೇವಸ್ಥಾನ ಹಾಗೂ ಅಜಿಲಮೊಗರು ದರ್ಗಾಗಳ ನಡುವೆ ಸಂಪರ್ಕ ಸಾಧಿಸಲು ಸೌಹಾರ್ದ ಸೇತುವೆಯ ಬೇಡಿಕೆಯನ್ನು ನಾನು ಸಚಿವನಾಗಿದ್ದಾಗ ಸರಕಾರದ ಮುಂದಿಟ್ಟಿದ್ದು, ಇದಕ್ಕೆ ಮನ್ನಣೆ ನೀಡಿದ ಅಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರಕಾರ ಈ ಸೇತುವೆ ನಿರ್ಮಾಣಕ್ಕೆ 19 ಕೋಟಿ ರೂಪಾಯಿ ಮಂಜೂರು ಮಾಡಿತ್ತು. ಬಳಿಕ ನನ್ನ ಶಾಸಕತ್ವ ಕಳೆದು ಹೋದ ಕಾರಣ ಈ ಸೇತುವೆ ಕಾಮಗಾರಿ ವಿಳಂಬಗೊಂಡಿತ್ತು. ಇದೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವದ ಬಂದ ಬಳಿಕ ಪುನಃ ಈ ಸೇತುವೆ ಕಾಮಗಾರಿ ವೇಗವನ್ನು ಪಡೆದುಕೊಂಡು ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನೇನು ಸಚಿವರುಗಳು ದಿನಾಂಕ ನಿಗದಿಪಡಿಸಿದ ತಕ್ಷಣ ಈ ಸೇತುವೆ ಜನತೆಗೆ ಅರ್ಪಣೆಯಾಗಲಿದೆ ಎಂದರು.
ಕಳೆದ ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅದ್ಬುತ ಕೆಲಸಗಳು ನಡೆದಿದ್ದು, ಹಕ್ಕುಪತ್ರ ಸಹಿತ ಹಲವು ಯೋಜನೆಗಳು ಜಾರಿಗೆ ಬಂದಿದ್ದವು. ಕೇವಲ ಶಾಸಕ ನಿಧಿಯಲ್ಲದೆ ಕ್ಷೇತ್ರಕ್ಕೆ ಹಲವು ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಆ ಸಂದರ್ಭ ತರಲಾಗಿದೆ. ಸೌಹಾರ್ದ ಸೇತುವೆ ಸಹಿತ ಹಲವು ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗಳು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಕ್ಷೇತ್ರಕ್ಕೆ ಬಂದು ಮಾಡಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಈ ಸೇತುವೆಗೆ ಉದ್ಘಾಟನೆ ಭಾಗ್ಯ ಕೂಡಿ ಬರುತ್ತಿರುವುದು ತುಂಬಾ ಸಂತೋಷದ ವಿಚಾರ ಎಂದು ರಮಾನಾಥ ರೈ ಹರ್ಷ ವ್ಯಕ್ತಪಡಿಸಿದರು. ಲೋಕೋಪಯೋಗಿ ಇಲಾಖಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಒಪ್ಪಿಗೆ ಸೂಚಿಸಿದ ತಕ್ಷಣ ಸೌಹಾರ್ದ ಸೇತುವೆ ಉದ್ಘಾಟನೆಯಾಗಲಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಈ ಸಂದರ್ಭ ಪ್ರಮುಖರಾದ ಲಾವಣ್ಯ ಬಳ್ಳಾಲ್, ಚಂದ್ರಶೇಖರ ಭಂಡಾರಿ, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಬಿ ಪದ್ಮಶೇಖರ್ ಜೈನ್, ಸುದೀಪ್ ಕುಮಾರ್ ಶೆಟ್ಟಿ, ಯೂಸುಫ್ ಕರಂದಾಡಿ, ಸಂಪತ್ ಕುಮಾರ್ ಶೆಟ್ಟಿ, ಕಾಂಚಲಾಕ್ಷಿ, ಸುರೇಶ್ ಜೋರಾ, ಆದಂ ಕುಂಞÂ, ಚಿದಾನಂದ ಕಡೇಶ್ವಾಲ್ಯ, ಚೆರಿಯೆ ಮೋನು, ಶಿವಪ್ಪ ಪೂಜಾರಿ ಹಟ್ಟತಡ್ಕ, ಪೂವಪ್ಪ ಪೂಜಾರಿ, ಮಹಮ್ಮದ್, ಅಬ್ಬಾಸ್, ನವೀನ, ಯೂನುಸ್, ರಝಾಕ್, ಸಾದಿಕ್, ಅಬ್ದುಲ್ ರಝಾಕ್, ಸಂಜೀವ ಪೂಜಾರಿ, ಹಕೀಂ, ಶಾಹುಲ್, ಶಫೀಕ್ ಮೊದಲಾದವರು ಜೊತೆಗಿದ್ದರು.






















0 comments:
Post a Comment